ಗುಣ್ಣಮಟ್ಟದ ಶಿಕ್ಷಣಕ್ಕೆ ವಿಶ್ವವಿದ್ಯಾಲಯ ಗಮನ ಹರಿಸಲಿ

KannadaprabhaNewsNetwork | Published : Apr 20, 2024 1:05 AM

ವರ್ತಮಾನದ ವ್ಯವಸ್ಥೆಯಲ್ಲಿ ಗುಣಮಟ್ಟದ ಶಿಕ್ಷಣ ಅವಶ್ಯವಿದೆ. ಆ ದಿಸೆಯಲ್ಲಿ ವಿಶ್ವವಿದ್ಯಾಲಯಗಳು ಕಾರ್ಯಪ್ರವೃತ್ತ ಆಗಬೇಕೆಂದು ಶಹಾಪುರದ ಬುದ್ಧ ಘೋಷ್ ದೇವೇಂದ್ರ ಹೆಗ್ಗಡೆ ಹೇಳಿದರು.

ಕನ್ನಡಪ್ರಭ ವಾರ್ತೆ ಯಾದಗಿರಿ

ವರ್ತಮಾನದ ವ್ಯವಸ್ಥೆಯಲ್ಲಿ ಗುಣಮಟ್ಟದ ಶಿಕ್ಷಣ ಅವಶ್ಯವಿದೆ. ಆ ದಿಸೆಯಲ್ಲಿ ವಿಶ್ವವಿದ್ಯಾಲಯಗಳು ಕಾರ್ಯಪ್ರವೃತ್ತ ಆಗಬೇಕೆಂದು ಶಹಾಪುರದ ಬುದ್ಧ ಘೋಷ್ ದೇವೇಂದ್ರ ಹೆಗ್ಗಡೆ ಹೇಳಿದರು.

ನಗರದ ಸರಕಾರಿ ಪದವಿ ಮಹಾವಿದ್ಯಾಲಯದಲ್ಲಿ ರಾಯಚೂರು ವಿಶ್ವವಿದ್ಯಾಲಯದ ಪ್ರಸಾರಾಂಗದ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಪ್ರಚಾರ ಉಪನ್ಯಾಸ ಮಾಲೆಯನ್ನು ಉದ್ಘಾಟಿಸಿ ಮಾತನಾಡಿದರು. ಇಂದಿನ ಮಕ್ಕಳು ನಾಳಿನ ನಾಗರಿಕರು. ಸಮೃದ್ಧ ನಾಗರಿಕ ಸಮಾಜ ನಿರ್ಮಾಣವಾಗಬೇಕಾದರೆ ಉತ್ತಮ ನಾಗರಿಕರಿದ್ದಾಗ ಅದು ಸಾಧ್ಯವಾಗುತ್ತದೆ. ಅದಕ್ಕಾಗಿ ಮೌಲ್ಯಾಧಾರಿತ ಹಾಗೂ ನೀತಿಯುಕ್ತವಾದ ಗುಣಮಟ್ಟದ ಶಿಕ್ಷಣ ನೀಡುವದು ಅತ್ಯವಶ್ಯವೆಂದು ಹೇಳಿದರು.

ಜ್ಞಾನ ಪ್ರಸಾರ ಮಾಡುವಲ್ಲಿ ಪ್ರಸಾರಾಂಗ ಪ್ರಮುಖ ಪಾತ್ರ ವಹಿಸುತ್ತದೆ. ಪ್ರಸಾರಾಂಗದ ವಿಷಯಗಳು ಜನ ಸಾಮಾನ್ಯರಿಗೂ ತಲುಪುವಂತಾಗಬೇಕು. ಹಳ್ಳಿಗರಿಗೆ ಶಿಕ್ಷಣದ ಮಹತ್ವವನ್ನು ತಿಳಿಸಿಕೊಡುವ ಕೆಲಸವನ್ನು ಪ್ರಸಾರಾಂಗ ಮಾಡಬೇಕೆಂದು ಸಲಹೆ ನೀಡಿದರು.

ಜಿಪಂ ಉಪ ನಿರ್ದೇಶಕ ಕೆ.ಕುಮಲಯ್ಯ ಮುಖ್ಯ ಅತಿಥಿಗಳಾಗಿ ಮಾತನಾಡಿ, 371 ಜೆ ಕಲಂ ಜಾರಿಯಿಂದ ಈ ಭಾಗದಲ್ಲಿ ಶೈಕ್ಷಣಿಕ ರಂಗದಲ್ಲಿ ಮತ್ತು ಉದ್ಯೋಗ ಕ್ಷೇತ್ರದಲ್ಲಿ ವಿಫುಲ ಅವಕಾಶ ಲಭಿಸುವಂತಾಗಿದೆ ಎಂದರು. ಕಲ್ಯಾಣ ಕರ್ನಾಟಕ ಅಭವೃದ್ಧಿ ಮಂಡಳಿಯ ಒಟ್ಟು ಅನುದಾನದಲ್ಲಿ ಶೇ.25 ರಷ್ಟು ಹಣವನ್ನು ಶಿಕ್ಷಣ ಕ್ಷೇತ್ರದಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ವ್ಯಯ ಮಾಡಲಾಗುತ್ತಿದ್ದು, ಶಿಕ್ಷಣ ಸಂಸ್ಥೆಗಳು ಸದುಪಯೋಗ ಪಡೆದುಕೊಳ್ಳಲು ತಿಳಿಸಿದರು. ಕಾಲೇಜಿನ ಪ್ರಾಂಶುಪಾಲ ಡಾ.ಸುಭಾಶ್ಚಂದ್ರ ಕೌಲಗಿ ಅಧ್ಯಕ್ಷತೆ ವಹಿಸಿ ಮಾತನಾಡಿ, ನುರಿತ ಮತ್ತು ತಜ್ಞ ವಿದ್ವಾಂಸರಿಂದ ಮಂಡಿತವಾಗುವ ಪ್ರಬಂಧಗಳ ವಿಷಯವನ್ನು ವಿದ್ಯಾರ್ಥಿಗಳು ಚೆನ್ನಾಗಿ ಅರಿತುಕೊಂಡಾಗ ಮಾತ್ರ ಪ್ರಸಾರಾಂಗದ ಉದ್ದೇಶ ಸಫಲವಾಗುತ್ತದೆ ಎಂದರು.

ರಾಯಚೂರು ಜಿಲ್ಲೆಯ ಚಿತ್ರಕಲೆ ಕುರಿತು ಡಾ.ಬಸವರಾಜ ಎಸ್. ಕಲೆಗಾರ, ಅಪೌಷ್ಟಿಕತೆಯ ಸಮಸ್ಯೆಗಳು, ಸವಾಲುಗಳ ಕುರಿತು ಡಾ.ಅರುಣಾ, ಮೈಲಾಪುರದ ಮೈಲಾರಲಿಂಗ ಎಂಬ ವಿಷಯ ಕುರಿತು ರಾಘವೇಂದ್ರ ಭೀಮನಳ್ಳಿ ಪ್ರಬಂಧಗಳನ್ನು ಮಂಡಿಸಿದರು. ಕೃಷ್ಣಮೂರ್ತಿ ಕುಲಕರ್ಣಿ, ಡಾ.ಜೆಟ್ಟೆಪ್ಪ, ಡಾ.ಯಲ್ಲಪ್ಪ ಕಶೆಟ್ಟಿ ವೇದಿಕೆಯ ಮೇಲಿದ್ದರು.ಈ ವೇಳೆ ಸಾಬರಡ್ಡಿ ಪ್ರಾರ್ಥಿಸಿದರು, ಡಾ.ಶಿವು ಮುದ್ನಾಳ ಸ್ವಾಗತಿಸಿದರು, ಪ್ರಸಾರಾಂಗದ ಸಂಯೋಜಕ ಡಾ.ಶರಣಪ್ಪ ಚಲವಾದಿ ಪ್ರಾಸ್ತಾವಿಕ ಮಾತನಾಡಿದರು, ಡಾ.ಎಂ.ಡಿ.ರಾಜಾಪಟೇಲ ನಿರೂಪಿಸಿದರು, ಡಾ.ನರಸಪ್ಪ ಚಿತ್ತಾಪೂರ ವಂದಿಸಿದರು.