ಆಡಳಿತದಲ್ಲಿ ಪಾರದರ್ಶಕತೆ, ಸಮಯ ಪಾಲನೆ ಇರಲಿ: ಜಿಲ್ಲಾಧಿಕಾರಿ

KannadaprabhaNewsNetwork |  
Published : Feb 13, 2026, 02:15 AM IST
ನೂತನ ಜಿಲ್ಲಾಧಿಕಾರಿ ಸ್ನೇಹಲ್‌ ಆರ್‌., ಗುರುವಾರ ಜಿಲ್ಲಾಧಿಕಾರಿಗಳ ಕಚೇರಿಯ ನೂತನ ಸಭಾಂಗಣದಲ್ಲಿ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳ ಪರಿಚಯಾತ್ಮಕ ಸಭೆ ಜರುಗಿಸಿದರು. | Kannada Prabha

ಸಾರಾಂಶ

ಸರ್ಕಾರಿ ಕರ್ತವ್ಯ ನಿರ್ವಹಿಸುವಲ್ಲಿ ವೈಯಕ್ತಿಕ ಕಾರಣಗಳಿಂದ ಸಾರ್ವಜನಿಕರಿಗೆ ತೊಂದರೆಯಾಗಬಾರದು. ನಾಗರಿಕರ ಬೇಡಿಕೆ, ಸಮಸ್ಯೆಗಳ ಕುರಿತು ಕ್ಷೇತ್ರ, ತಾಲೂಕು ಮಟ್ಟದಲ್ಲಿ ಆಲಿಸಿ ತಮ್ಮ ಹಂತದಲ್ಲಿ ಪರಿಹಾರ ಸೂಚಿಸಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸ್ನೇಹಲ್ ಆರ್. ಹೇಳಿದರು.

ಧಾರವಾಡ:

ರಾಜ್ಯದಲ್ಲಿ ಧಾರವಾಡ ಜಿಲ್ಲೆಗೆ ವಿಶೇಷ ಸ್ಥಾನವಿದೆ. ಇಲ್ಲಿಯ ಸಾಹಿತ್ಯ, ಸಂಗೀತ, ಶಿಕ್ಷಣ ಮತ್ತು ಚಿತ್ರಕಲೆಗಳು ರಾಷ್ಟ್ರೀಯ ಮಟ್ಟದಲ್ಲಿ ಸ್ಥಾನ ಗಳಿಸಿವೆ. ಜಿಲ್ಲೆಯ ಈ ಗೌರವ ಹೆಚ್ಚಿಸಲು ಸರ್ಕಾರಿ ನೌಕರರು ಕೂಡಿ ಕೆಲಸ ಮಾಡೋಣ. ಆಡಳಿತದಲ್ಲಿ ಪಾರದರ್ಶಕತೆ ಹಾಗೂ ಸಮಯಪಾಲನೆ ಇರಲಿ ಎಂದು ಜಿಲ್ಲೆಯ ನೂತನ ಜಿಲ್ಲಾಧಿಕಾರಿ ಸ್ನೇಹಲ್ ಆರ್. ಹೇಳಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳ ಪರಿಚಯಾತ್ಮಕ ಸಭೆ ಜರುಗಿಸಿದ ಅವರು, ಸರ್ಕಾರಿ ಕರ್ತವ್ಯ ನಿರ್ವಹಿಸುವಲ್ಲಿ ವೈಯಕ್ತಿಕ ಕಾರಣಗಳಿಂದ ಸಾರ್ವಜನಿಕರಿಗೆ ತೊಂದರೆಯಾಗಬಾರದು. ನಾಗರಿಕರ ಬೇಡಿಕೆ, ಸಮಸ್ಯೆಗಳ ಕುರಿತು ಕ್ಷೇತ್ರ, ತಾಲೂಕು ಮಟ್ಟದಲ್ಲಿ ಆಲಿಸಿ ತಮ್ಮ ಹಂತದಲ್ಲಿ ಪರಿಹಾರ ಸೂಚಿಸಬೇಕು. ಜನಕಲ್ಯಾಣ ಕಾರ್ಯಕ್ರಮಗಳನ್ನು ಪರಿಣಾಮಕಾರಿ ಮತ್ತು ಸಮಯೋಚಿತವಾಗಿ ಸಾರ್ವಜನಿಕರಿಗೆ ತಲುಪಿಸಲು ತಾಂತ್ರಿಕವಾಗಿ ಸಾಕಷ್ಟು ಅವಕಾಶಗಳಿವೆ. ಅದಾಗ್ಯೂ ಸರ್ಕಾರಿ ಸೇವೆ ನೀಡುವಲ್ಲಿ ಅನಗತ್ಯ ವಿಳಂಬ, ಉದಾಸೀನತೆ ಮತ್ತು ಕರ್ತವ್ಯ ಲೋಪವಾಗದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು ಎಂಬ ಸಲಹೆ ನೀಡಿದರು.

ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಸಲಹೆ-ಸೂಚನೆಗಳಿದ್ದಲ್ಲಿ ಹಂಚಿಕೊಳ್ಳಲು ಜಿಲ್ಲಾಧಿಕಾರಿ ಕಚೇರಿ ಮುಕ್ತವಾಗಿದೆ. ತಮ್ಮ ಜವಾಬ್ದಾರಿ, ಹೊಣೆಗಾರಿಕೆ ಅರಿತು ನಿಯಮಾನುಸಾರ ಕರ್ತವ್ಯ ನಿರ್ವಹಿಸಲು ಅವರು ಸೂಚಿಸಿದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ ಶೇಖ ಅಬ್ದುಲ್ ಅಲಿಂ ಸಿದ್ದಕಿ, ಪ್ರೊಬೆಷನರಿ ಐಎಎಸ್ ಅಧಿಕಾರಿ ರಿತೀಕಾ ವರ್ಮಾ, ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಇದ್ದರು. ವಿವಿಧ ಇಲಾಖೆ ಅಧಿಕಾರಿಗಳಾದ ಮಂಜುನಾಥ ಅಂತರವಳ್ಳಿ, ಕೆ.ಸಿ. ಭದ್ರಣ್ಣವರ, ಶ್ರೀಪಾದ ಕುಲಕರ್ಣಿ, ಬಾನುಮತಿ ಎಚ್., ಆರ್.ಎಂ. ಸೊಪ್ಪಿಮಠ, ಡಾ. ಎಸ್.ವಿ. ಸಂತಿ, ಡಾ. ಎಸ್.ಎಂ. ಹೊನಕೇರಿ, ವಿಜಯಲಕ್ಷ್ಮಿ ಪಾಟೀಲ, ಪೂರ್ಣಿಮಾ ಚೂರಿ ಇದ್ದರು.

ಕೋಟ್‌...ತುರ್ತು ಕಡತ ಅಥವಾ ಅನುಮೋದನೆಗಳ ವಿಷಯದಲ್ಲಿ ಅಧಿಕಾರಿಗಳು ನೇರವಾಗಿ ತಮ್ಮ ಕಚೇರಿಗೆ ಬರಬಹುದು, ಯಾವುದೇ ಸಮಯದಲ್ಲಾದರೂ ಭೇಟಿ ಮಾಡಬಹುದು. ತುರ್ತು ವಿಷಯಗಳಿಗೆ ತಕ್ಷಣ ಪ್ರವೇಶ ಕಲ್ಪಿಸಿದೆ. ಸಾರ್ವಜನಿಕರ ಭೇಟಿಗಾಗಿ ಮಧ್ಯಾಹ್ನ 3ರಿಂದ ಸಂಜೆ 5ರ ವರೆಗೆ ಅವಕಾಶವಿದೆ. ಕಡತ ಬಾಕಿ ಉಳಿಯುವುದು, ಅನುಮೋದನೆ ವಿಳಂಬ ಬೇಡ. ಸರ್ಕಾರದ ಸೇವೆಗಳನ್ನು ಜನರಿಗೆ ಸಮರ್ಪಕವಾಗಿ ಒದಗಿಸುವುದು ನಮ್ಮ ಮುಖ್ಯ ಉದ್ದೇಶ.

ಸ್ನೇಹಲ್‌ ಆರ್., ಜಿಲ್ಲಾಧಿಕಾರಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಜೆಪಿಯವರಿಗೆ ಕಾಂಗ್ರೆಸ್ಸಿನ ಅಭಿವೃದ್ಧಿ ಕಾರ್ಯಗಳು ಕಾಣಿಸ್ತಿಲ್ಲ-ಸಂಜೀವಕುಮಾರ ನೀರಲಗಿ
ಕಂಪ್ಲಿ ಉತ್ಸವದಲ್ಲಿ ರಂಗಿನ ರಂಗೋಲಿ- ಮೆಹೆಂದಿ ಸಂಭ್ರಮ