ಆಂಗ್ಲರ ಅಂಧಾನುಕರಣೆ ತೊರೆದು ನಮ್ಮತನ ಉಳಿಸಿಕೊಳ್ಳೋಣ; ರಾಘವೇಶ್ವರ ಶ್ರೀ

KannadaprabhaNewsNetwork |  
Published : Sep 02, 2025, 12:00 AM IST
ಲೋಕಾರ್ಪಣೆಗೊಂಡ ಪರಿಸರ ಸ್ನೇಹಿ ಅವಜಲ ಘಟಕದ ಕುರಿತು ಗ್ರಾಮ ಪಂಚಾಯತ್ ಪಿಡಿಓ ವಂಕಟರಮಣ ಪಟಗಾರ, ಕಾರ್ಯದರ್ಶಿ ಮಂಜುನಾಥ್ ಹಾಗೂ ಘಟಕ ನರ್ಮಿಸಿದವರು ಶ್ರೀಗಳ ಜೊತೆ ಘಟಕದ ಕಾರ್ಯದ ಕುರಿತು ವಿವರಿಸುತ್ತಿರುವುದು | Kannada Prabha

ಸಾರಾಂಶ

ಕನ್ನಡ ಭಾಷೆಯಲ್ಲಿ ಕಲಬೆರಕೆಯಾಗಿರುವ ಆಂಗ್ಲ ಮತ್ತು ಇತರ ಭಾಷೆಗಳ ಪದಗಳನ್ನು ಬಿಡುವುದು ಮೊದ ಮೊದಲು ಕಷ್ಟವೆನಿಸಬಹುದು.

ಗೋಕರ್ಣ: ನಮ್ಮ ಹಿರಿಯರು ಬಳಸುತ್ತಿದ್ದ ಪದಗಳನ್ನು ಮತ್ತೆ ಬಳಕೆಗೆ ತರುವ ಮೂಲಕ ನಾವು ನಾವಾಗೋಣ; ಆಂಗ್ಲರ ಅಂಧಾನುಕರಣೆ ತೊರೆದು ನಮ್ಮತನ ಉಳಿಸಿಕೊಳ್ಳೋಣ ಎಂದು ರಾಘವೇಶ್ವರ ಭಾರತೀ ಶ್ರೀ ಕರೆ ನೀಡಿದರು.

ಅಶೋಕೆಯಲ್ಲಿ ಸ್ವಭಾಷಾ ಚಾತುರ್ಮಾಸ ವ್ರತ ಕೈಗೊಂಡಿರುವ ಶ್ರೀಗಳು ೫೪ನೇ ದಿನವಾದ ಸೋಮವಾರ ಮಂಗಳೂರು ಮಂಡಲದ ಕನ್ಯಾನ, ಬಾಯಾರು, ಕೋಳ್ಯೂರು, ವಿಟ್ಲ, ಕೇಪು ಮತ್ತು ಕಲ್ಲಡ್ಕ ವಲಯಗಳ ಶಿಷ್ಯರಿಂದ ಸರ್ವಸೇವೆ ಸ್ವೀಕರಿಸಿ ಆಶೀರ್ವಚನ ಅನುಗ್ರಹಿಸಿದರು.

ಕನ್ನಡ ಭಾಷೆಯಲ್ಲಿ ಕಲಬೆರಕೆಯಾಗಿರುವ ಆಂಗ್ಲ ಮತ್ತು ಇತರ ಭಾಷೆಗಳ ಪದಗಳನ್ನು ಬಿಡುವುದು ಮೊದ ಮೊದಲು ಕಷ್ಟವೆನಿಸಬಹುದು. ಆದರೆ ನಮ್ಮ ಭಾಷೆ- ಸಂಸ್ಕೃತಿ ಉಳಿಸಿಕೊಳ್ಳುವ ಹೊಣೆ ನಮ್ಮ ಮೇಲಿದೆ. ಈ ಕಷ್ಟಗಳಿಗೆ ಅನಿವಾರ್ಯವಾಗಿ ನಾವು ಅದಕ್ಕೆ ಒಗ್ಗಿಕೊಳ್ಳಲೇಬೇಕು ಎಂದು ಸೂಚಿಸಿದರು.

ಸ್ವಭಾಷಾ ಚಾತುರ್ಮಾಸ್ಯದಲ್ಲಿ ಸವಿಗನ್ನಡ ಗೋಷ್ಠಿ ಮತ್ತು ಹವಿಗನ್ನಡ ಗೋಷ್ಠಿ ಮುಗಿದಲ್ಲಿಗೆ ನಮ್ಮ ಕೆಲಸ ಮುಗಿಯುವುದಿಲ್ಲ. ಇದೀಗ ಸಮಾಜದ ಪ್ರತಿಯೊಬ್ಬರು ಮತ್ತೆ ನಮ್ಮತನಕ್ಕೆ ಮರಳುವಂತೆ ಮಾಡುವ ದೊಡ್ಡ ಹೊಣೆ ನಮ್ಮ ಮೇಲಿದೆ ಎಂದು ಅಭಿಪ್ರಾಯಪಟ್ಟರು.

ದಿನಕ್ಕೊಂದು ಆಂಗ್ಲಪದ ಕೈಬಿಡುವ ಅಭಿಯಾನದಲ್ಲಿ ಪರ್ಸ್ ಪದ ಬಿಡುವಂತೆ ಸಲಹೆ ಮಾಡಿದರು. ಇದಕ್ಕೆ ಸಂಚಿ ಎಂಬ ಪದದಿಂದ ಕರೆಯಲಾಗುತ್ತಿದೆ. ಕೈಚೀಲ, ಥೈಲಿ, ಕೋಶ, ಸ್ಯೂತ ಪದಗಳನ್ನು ಬಳಸಬಹುದು ಎಂದರು.

ಸಂಘಟನೆಯಿಂದ ಸಮಾಜಕ್ಕೆ ದೊಡ್ಡ ಪ್ರಯೋಜನವಿದೆ. ಸಂಘಟನೆಯನ್ನು ಬಲಪಡಿಸುವ ಮೂಲಕ ಸಮಾಜದ ಉನ್ನತಿಗೆ ಕೊಡುಗೆ ನೀಡಿ ಎಂದು ಆಶಿಸಿದರು.

ನದಿಗಳು ಕೂಡಿ ಸಮುದ್ರವಾಗುವಂತೆ ಚಾತುರ್ಮಾಸ್ಯವೆಂಬ ಸಮುದ್ರಕ್ಕೆ ಆರು ವಲಯಗಳಿಂದ ನದಿಗಳು ಬಂದು ಸೇರಿವೆ. ಎಲ್ಲ ಶಿಷ್ಯರ ಬಾಳು ಹಸನಾಗಲಿ ಎಂದು ಅನುಗ್ರಹಿಸಿದರು. ಜೀವನ ಪೂರ್ಣವಾಗಬೇಕಾದರೆ ಅನುಗ್ರಹ ಬೇಕು. ಪಂಕ ತಿರುಗಲು ವಿದ್ಯುತ್ ಹೇಗೆ ಅಗತ್ಯವೋ ಜೀವನ ಮುನ್ನಡೆಯಲು ಅನುಗ್ರಹ ಬೇಕು ಎಂದು ಹೇಳಿದರು.

ಕೆಲ ಕಾರ್ಯಕರ್ತರಲ್ಲಿ ಮಾತ್ರ ಸಮಾಜಸೇವೆಯ ಪ್ರಜ್ಞೆ ಜಾಗೃತವಾಗುತ್ತದೆ. ಇದಕ್ಕೆ ಪ್ರೇರಣೆ ಸಿಗುತ್ತದೆ. ಹೊಸ ಉತ್ಸಾಹ, ಹೊಸ ಯೋಚನೆಗಳೊಂದಿಗೆ ಸಂಘಟನೆ ಬೆಳೆಸಿ ಎಂದು ಸೂಚಿಸಿದರು. ಗಂಗೆ ಪವಿತ್ರವಾಗಲು ಹೇಗೆ ನಿರಂತರ ಹೊಸತನ ಅಗತ್ಯವೋ ಹಾಗೇ ಸಂಘಟನೆಗೂ ಹೊಸ ವಿಧಾನ, ಹೊಸ ಶಿಷ್ಯರನ್ನು ಕರೆ ತನ್ನಿ ಎಂದು ಕರೆ ನೀಡಿದರು.

ಅತ್ಯುತ್ಸಾಹ ಮತ್ತು ನಿರುತ್ಸಾಹ ಎರಡೂ ಒಳ್ಳೆಯದಲ್ಲ; ಬದಲಾಗಿ ಸದೋತ್ಸಾಹ ಇರಬೇಕು ಎಂದು ಅಭಿಪ್ರಾಯಪಟ್ಟರು. ಕಾರ್ಯಕರ್ತರಲ್ಲೂ ಸೇವಾವಧಿಯುದ್ದಕ್ಕೂ ಉತ್ಸಾಹ ಉಳಿಸಿಕೊಳ್ಳಿ. ಸೈನಿಕ ದೇಶದ ಬಗ್ಗೆ ಎಷ್ಟು ನಿಷ್ಠೆ ಹೊಂದಿದ್ದಾನೋ ಅಷ್ಟೇ ನಿಷ್ಠೆಯಿಂದ ಕೆಲಸ ಮಾಡಬೇಕು ಎಂದು ಸಲಹೆ ಮಾಡಿದರು.

ಹವ್ಯಗಂಧ ಎಂಬ ದೊಡ್ಡ ಕಾರ್ಯ ಬಾಯಾರು ವಲಯದಲ್ಲಿ ತಲೆ ಎತ್ತುತ್ತಿದೆ. ಸಮಾಜದ ಅಸ್ಮಿತೆ ಹೆಚ್ಚಿಸುವ ಹಲವು ಕಾರ್ಯಗಳು ಇಲ್ಲಿ ನಡೆಯಲಿವೆ. ಈ ಹವ್ಯಗಂಧ ಎಲ್ಲೆಡೆ ಪಸರಿಸಲಿ ಎಂದು ಹಾರೈಸಿದರು.

ವಿವಿವಿ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ಪರಿಸರ ಸ್ನೇಹಿ ಅವಜಲ ಘಟಕವನ್ನು ಈ ಸಂದರ್ಭದಲ್ಲಿ ಲೋಕಾರ್ಪಣೆಗೊಳಿಸಲಾಯಿತು. ರಾಸಾಯನಿಕ ರಹಿತ, ಕೇವಲ ತುಳಸಿ, ಸ್ಫಟಿಕ ಮತ್ತು ಹಾಸುಗಲ್ಲು ಬಳಸಿ ಘಟಕ ನಿರ್ಮಿಸಿದ ಬಾಲಚಂದ್ರ ಹೆಗಡೆ ಮತ್ತು ಗಜಾನನ ಹೆಗಡೆಯವರನ್ನು ಸನ್ಮಾನಿಸಿ ಆಶೀರ್ವದಿಸಿದ ಶ್ರೀಗಳು, ಪ್ರಕೃತಿಯಲ್ಲಿ ಸಿಗುವುದೆಲ್ಲವೂ ಶುದ್ಧ. ನಾವು ಅದನ್ನು ಮಲಿನಗೊಳಿಸುತ್ತೇವೆ. ಉಪಯೋಗಿಸಿ ಅಶುದ್ಧವಾದ್ದನ್ನು ಶುದ್ಧ ಮಾಡುವುದು ಪ್ರವಾಹದ ವಿರುದ್ಧ ಈಜಿದಂತೆ. ಕೊಳಚೆ ನೀರನ್ನು ಬಾವಿ ನೀರಿನಷ್ಟೇ ಶುದ್ಧಗೊಳಿಸುವ ಈ ಅವಜಲ ಘಟಕ ಎಲ್ಲೆಡೆಗೆ ಮಾದರಿ. ಇಂಥ ಪರಿಸರ ಸ್ನೇಹಿ ಮಾದರಿ ಸಮಾಜದಲ್ಲಿ ಹೆಚ್ಚು ಹೆಚ್ಚಾಗಿ ಅಳವಡಿಸಿಕೊಳ್ಳಬೇಕು ಎಂದು ಸೂಚಿಸಿದರು.

ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್ ಶ್ರೀಗಳ ದರ್ಶನಾಶೀರ್ವಾದ ಪಡೆದರು. ಪಿಡಿಒ ವೆಂಕಟರಮಣ ಪಟಗಾರ, ಕಾರ್ಯದರ್ಶಿ ಮಂಜುನಾಥ್, ಶ್ರೀಮಠದ ಪ್ರಶಾಸನಾಧಿಕಾರಿ ಸಂತೋಷ ಹೆಗಡೆ, ವಿತ್ತಾಧ್ಯಕ್ಷ ಗಣೇಶ ಜಿ.ಎಲ್., ಹವ್ಯಕ ಮಹಾಮಂಡಲ ಅಧ್ಯಕ್ಷ ಹರಿಪ್ರಸಾದ್ ಪೆರಿಯಪ್ಪು, ಪ್ರಧಾನ ಕಾರ್ಯದರ್ಶಿ ಮಹೇಶ್ ಚಟ್ನಳ್ಳಿ, ವಿವಿವಿ ಆಡಳಿತಾಧಿಕಾರಿ ಟಿ.ಜೆ. ಪ್ರಸನ್ನ ಕುಮಾರ್, ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ. ಹೆಗಡೆ, ಮುಖ್ಯ ಎಂಜಿನಿಯರ್ ವಿಷ್ಣು ಬನಾರಿ, ವ್ಯವಸ್ಥಾ ಪರಿಷತ್ ಕಾರ್ಯದರ್ಶಿ ಶ್ರೀಕಾಂತ ಪಂಡಿತ್ ಇದ್ದರು. ವಿಟ್ಲದ ಹರಿಓಂ ತತ್ಸತ್ ತಂಡದಿಂದ ೨೫೧ ವಿಷ್ಣು ಸಹಸ್ರನಾಮ ಪಾರಾಯಣ ಸೇವೆ, ಗೋವಿಶ್ವಕ್ಕೆ ₹೨೫೧೦೮ ಸಮರ್ಪಣೆ ನೆರವೇರಿತು.

PREV

Recommended Stories

ಬೆಂಗಳೂರು : ದೀಪಾವಳಿ ವೇಳೆ ವಾಯುಮಾಲಿನ್ಯ ಹೆಚ್ಚಾಗಲಿಲ್ಲ, ಭಾರೀ ಇಳಿಕೆ!
ಹೊಸೂರಿಗೆ ಮೆಟ್ರೋ ವಿಸ್ತರಣೆ ಅಸಾಧ್ಯ : ರಾಜ್ಯ ಸರ್ಕಾರಕ್ಕೆ ಬಿಎಂಆರ್‌ಸಿಎಲ್‌ ವರದಿ