ಕನ್ನಡಪ್ರಭ ವಾರ್ತೆ ಕೋಲಾರ
ಯುವಸ್ಪಂದನ ತಂಡವು ಜಿಲ್ಲೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಬೇಕು. ಕಾಲಕಾಲಕ್ಕೆ ಸಭೆ ಕರೆದು ರಚನಾತ್ಮಕ ಕಾರ್ಯಕ್ರಮಗಳನ್ನು ರೂಪಿಸಬೇಕು. ಈಗ ರಚನೆಗೊಂಡ ಕೇಂದ್ರಗಳು ಯುವಜನರ ವರ್ತನೆ, ಮಾನಸಿಕ ಮತ್ತು ದೈಹಿಕ ಬೆಂಬಲ ಸೇವೆ ಕಾರ್ಯಕ್ರಮವನ್ನು ಅಭಿವೃದ್ಧಿ ಪಡಿಸಿ ಅನುಷ್ಠಾನಗೊಳಿಸಬೇಕು ಎಂದು ಎಡಿಸಿ ಮಂಗಳ ತಿಳಿಸಿದರು.ಯುವ ಸಬಲೀಕರಣ ಮತ್ತು ಕ್ರಿಡಾ ಇಲಾಖೆ ಹಾಗೂ ಬೆಂಗಳೂರಿನ ನಿಮ್ಹಾನ್ಸ್ ವತಿಯಿಂದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಏರ್ಪಡಿಸಿದ್ದ ’ಯುವ ಸ್ಪಂದನ’ದ ಜಿಲ್ಲಾ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿದರು.
ಪ್ರಾಂಶುಪಾಲರನ್ನು ಸದಸ್ಯರನ್ನಾಗಿಸಿ:ವಿದ್ಯಾರ್ಥಿ, ಯುವ ಸಮೂಹವನ್ನು ಈ ಕಾರ್ಯಕ್ರಮವು ಒಳಗೊಳ್ಳುವ ಪ್ರಯತ್ನದ ಭಾಗವಾಗಿ ವಿವಿಧ ಕಾಲೇಜುಗಳ ಪ್ರಾಂಶುಪಾಲರು ಈ ಕಾರ್ಯಕ್ರಮದ ಸಮಿತಿಯ ಸದಸ್ಯರನ್ನಾಗಿಸಬೇಕು. ಆಯಾ ಕಾಲೇಜುಗಳಲ್ಲಿ ವಿಚಾರ ಸಂಕಿರಣಗಳನ್ನು ಸಂಘಟಿಸಬೇಕು, ಒಳ್ಳೆಯ ಸಂಪನ್ಮೂಲ ವ್ಯಕ್ತಿಗಳನ್ನು ಗುರುತಿಸಿ ಅವರಿಂದ ವಿದ್ಯಾರ್ಥಿಗಳಿಗೆ ಸುರಕ್ಷತೆ, ಸಂಬಂಧ, ಸಂವಹನ, ಮಾರ್ಗದರ್ಶನ, ಶಿಕ್ಷಣ, ಬೆಳವಣಿಗೆ, ಆರೋಗ್ಯ ಜೀವನ ಶೈಲಿ, ಭಾವನೆಗಳಿಗೆ ಸಂಬಂಧಿಸಿದಂತೆ ಉಪನ್ಯಾಸ ನೀಡಬೇಕೆಂದು ಸಲಹೆ ನೀಡಿದರು.
ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ನಡೆಯುವ ವಿವಿಧ ವಸತಿ ನಿಲಯಗಳ ವಾರ್ಡನ್ಗಳು ಕೂಡ ಸಮಿತಿಯಲ್ಲಿ ಇರಬೇಕು. ಇವರನ್ನೊಳಗೊಂಡು ಕಾರ್ಯಕ್ರಮಗಳನ್ನೂ ರೂಪಿಸಬೇಕು. ಬಹುತೇಕ ಯುವಜನರು ಕೀಳರಿಮೆ ಎದುರಿಸುತ್ತಿದ್ದು, ಅವರಿಗೆ ಸೂಕ್ತ ಮಾರ್ಗದರ್ಶನದ ಅವಶ್ಯಕತೆಯಿದೆ. ಈ ನಿಟ್ಟಿನಲ್ಲಿ ಯುವ ಸ್ಪಂದನದ ಕಾರ್ಯಕ್ರಮಗಳು ನಡೆಯಬೇಕಿದೆ ಎಂದು ತಿಳಿಸಿದರು.ಯುವಜನರ ಸಹಭಾಗಿತ್ವ:
ಯುವ ಸಬಲೀಕರಣ ಮತ್ತು ಕ್ರಿಡಾ ಇಲಾಖೆಯ ಸಹಾಯಕ ನಿರ್ದೇಶಕಿ ಗೀತಾ ಮಾತನಾಡಿ, ಈ ಯೋಜನೆಯು ಯುವಜನ ಕೇಂದ್ರಿತ, ಯುವಜನ ಚಾಲಿತ, ಯುವಜನರಿಗಾಗಿ, ಯುವಜನರ ಸಹಭಾಗಿತ್ವದಿಂದ ನಡೆಯುತ್ತಿದೆ. ಯುವಜನರ ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ಮಾರ್ಗದರ್ಶನ ಸೇವೆಗಳನ್ನು ಒದಗಿಸುವುದು ಈ ಯುವ ಸ್ಪಂದನ ಕೇಂದ್ರಗಳ ಸ್ಥಾಪನೆಯ ಉದ್ದೇಶವಾಗಿದೆ ಎಂದು ತಿಳಿಸಿದರು.ಶಿಕ್ಷಣ ಮತ್ತು ವೃತ್ತಿ ವಿಷಯ, ಆರೋಗ್ಯ ಮತ್ತು ಜೀವನ ಶೈಲಿ, ಸಂಬಂಧಗಳ ವಿಷಯಗಳು, ಲಿಂಗ ಮತ್ತು ಲೈಂಗಿಕತೆ, ಸುರಕ್ಷತೆ, ವ್ಯಕ್ತಿತ್ವ ಬೆಳವಣಿಗೆ ಮತ್ತು ಭಾವನಾತ್ಮಕ ಹತೋಟಿ ಬಗ್ಗೆ ತಿಳಿಸುವ ವಿಷಯಗಳ ಕುರಿತು ನಿರ್ವಹಿಸಲಾಗುವುದು. ಅರಿವು, ಕಾರ್ಯಕ್ರಮ, ಮಾರ್ಗದರ್ಶನ ಸೇವೆ ನೀಡುವುದು, ತರಬೇತಿ, ವಿಶೇಷ ತಜ್ಞರ ಶಿಬಿರ, ಸಂಪನ್ಮೂಲ ಕ್ರೋಡೀಕರಣವು ಯುವಸ್ಪಂದನದ ಚಟುವಟಿಕೆಗಳಾಗಿವೆ ಎಂದು ಮಾಹಿತಿ ನೀಡಿದರು.
ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ನಾರಾಯಣಸ್ವಾಮಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮೈಲಾರಪ್ಪ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಗೀತಮ್ಮ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಾರಾಯಣಸ್ವಾಮಿ, ನೆಹರು ಯುವ ಕೇಂದ್ರ ರಾಜೇಶ್ ಕಾರಂತ್, ಜಿಲ್ಲಾ ಪಂಚಾಯಿತಿ ಯೋಜನ ನಿರ್ದೇಶಕರು ಮಂಜುನಾಥ್ ಸ್ವಾಮಿ, ಕ್ಷೇತ್ರ ಸಂಪರ್ಕ ಅಧಿಕಾರಿ ರಮೇಶ್, ಯುವ ಸಮಾಲೋಚಕ ಗಿರೀಶ್ ಬಾಬು, ಜಿಲ್ಲಾ ಯುವ ಸಮಾಲೋಚಕ ಮತ್ತು ಯುವ ಪರಿವರ್ತಕರಾದ ಮೂಕಾಂಬಿಕ, ಪದ್ಮಾವತಿ, ಲಕ್ಷ್ಮಿ ಮತ್ತಿತರರು ಇದ್ದರು.