(ಆಪರೇಷನ್ ರೈಸ್) ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಾಸಕ
ಯುವಜನತೆಯನ್ನು ದುಶ್ಚಟದಿಂದ ದೂರವಿಟ್ಟು, ಸದೃಢ ಹಾಗೂ ವ್ಯಸನ ಮುಕ್ತ ಸಮಾಜ ನಿರ್ಮಾಣ ಮಾಡುವುದು ಪ್ರತಿಯೊಬ್ಬ ನಾಗರಿಕರ ಜವಾಬ್ದಾರಿ ಎಂದು ಶಾಸಕ ಭೀಮಣ್ಣ ನಾಯ್ಕ ಕರೆ ನೀಡಿದರು.
ಉತ್ತರ ಕನ್ನಡ ಜಿಲ್ಲಾ ಪೊಲೀಸ್, ಉಪವಿಭಾಗದ ಶಿರಸಿ ವತಿಯಿಂದ ನಗರದ ಎಂಇಎಸ್ ಕಾಮರ್ಸ್ ಕಾಲೇಜಿನ ಆಡಿಟೋರಿಯಂ ಸಭಾಭವನದಲ್ಲಿ ಮಾದಕ ದ್ರವ್ಯ ವಿರೋಧಿ ಜಾಗೃತಿ ಮತ್ತು ನಿರ್ಮೂಲನಾ ಅಭಿಯಾನದಡಿ (ಆಪರೇಷನ್ ರೈಸ್) ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ರಾಷ್ಟ್ರದ ಭವಿಷ್ಯ ಇಂದಿನ ಯುವಜನತೆಯ ಕೈಯಲ್ಲಿದೆ. ಮಾದಕ ದ್ರವ್ಯಗಳ ದಾಸರಾಗುವುದರಿಂದ ವಿದ್ಯಾರ್ಥಿಗಳ ಭವಿಷ್ಯ ಹಾಳಾಗುವುದಲ್ಲದೆ, ಕುಟುಂಬ ಹಾಗೂ ಸಮಾಜದ ಮೇಲೂ ಗಂಭೀರ ಪರಿಣಾಮ ಬೀರುತ್ತದೆ. ಡ್ರಗ್ಸ್ ಹಾವಳಿ ತಡೆಯಲು ಕೇವಲ ಕಾನೂನು ಕ್ರಮವಷ್ಟೇ ಸಾಲದು; ಶಾಲೆ, ಕಾಲೇಜು ಮಟ್ಟದಲ್ಲಿ ವ್ಯಾಪಕ ಜಾಗೃತಿ ಮೂಡಿಸುವುದು ಅತ್ಯಗತ್ಯ ಎಂದರು.
ಈ ವೇಳೆ ಡಿವೈಎಸ್ಪಿ ಗೀತಾ ಪಾಟೀಲ, ಅಬಕಾರಿ ಡಿವೈಎಸ್ಪಿ ದಿವ್ಯಾ ಕೆ. ಶೆಟ್ಟಿ, ತಾಲೂಕು ಆರೋಗ್ಯ ಅಧಿಕಾರಿ ಮಧುಕರ್ ಪಾಟೀಲ್, ತಾಪಂ ಇಒ ಚನ್ನಬಸಪ್ಪ ಹಾವಣಗಿ, ಅಭಯ್ ಕುಮಾರ್ ಗಸ್ತಿ ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಮಾಹಿತಿ ನೀಡಿದರು.
ಸಿಪಿಐ ಸಂಪತ್ ಸ್ವಾಗತಿಸಿದರು. ನಾರಾಯಣ ಎಂ.ಎಸ್. ನಿರೂಪಿಸಿ, ಪಿಐ ರಮೇಶ ಹೂಗಾರ ವಂದಿಸಿದರು.