ಭಾರತಪ್ರಪಂಚವಿಶೇಷರಾಜಕೀಯಮನರಂಜನೆಅಪರಾಧಕ್ರೀಡೆಕರ್ನಾಟಕಇ- ಪೇಪರ್

ಚಂಗಡಿಹಳ್ಳಿ ಮಠವನ್ನು ಬೃಹನ್ಮಠದ ಅಧಿಪತ್ಯದಿಂದ ವಿಮೋಚನೆಗೊಳಿಸಿ

KannadaprabhaNewsNetwork | Published : Jun 12, 2025 2:30 AM

ಸಕಲೇಶಪುರ ತಾಲೂಕಿನ ಚಂಗಡಿಹಳ್ಳಿ ಮಠದ ಆಸ್ತಿಯನ್ನು ಮನಬಂದಂತೆ ಬಳಸಲಾಗುತ್ತಿದೆ ಎಂಬ ಗ್ರಾಮಸ್ಥರ ಆರೋಪದಿಂದಾಗಿ ಮಠದ ಒಡೆತನದ ವಿವಾದ ಮತ್ತೊಮ್ಮೆ ಭುಗಿಲೆದ್ದಿದೆ. ಇಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರು ಭಾರಿ ಪ್ರಮಾಣದಲ್ಲಿ ಮಠದ ಆಸ್ತಿಯನ್ನು ದೋಚುತ್ತಿರುವುದರಿಂದ ಮಠ ಅಸ್ತಿತ್ವ ಕಳೆದುಕೊಳ್ಳುವ ಹಂತ ತಲುಪಿದೆ. ಆದ್ದರಿಂದ, ಧರ್ಮ ಪ್ರಚಾರಕ್ಕಿರುವ ಮಠವನ್ನು ಚಿತ್ರದುರ್ಗ ಬೃಹನ್ಮಠದಿಂದ ವಿಮೋಚನೆಗೊಳಿಸಿ ಗ್ರಾಮಸ್ಥರಿಗೆ ವಹಿಸಬೇಕು ಎಂಬ ಬೇಡಿಕೆಯೊಂದಿಗೆ ಹೋರಾಟ ನಡೆಸಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಸಕಲೇಶಪುರ

ತಾಲೂಕಿನ ಚಂಗಡಿಹಳ್ಳಿ ಮಠದ ಆಸ್ತಿಯನ್ನು ಮನಬಂದಂತೆ ಬಳಸಲಾಗುತ್ತಿದೆ ಎಂಬ ಗ್ರಾಮಸ್ಥರ ಆರೋಪದಿಂದಾಗಿ ಮಠದ ಒಡೆತನದ ವಿವಾದ ಮತ್ತೊಮ್ಮೆ ಭುಗಿಲೆದ್ದಿದೆ.

2023ರಲ್ಲಿ ಮಠದ ಒಡೆತನದ ವಿವಾದ ತಲೆದೋರಿದ ವೇಳೆ ಮಧ್ಯಪ್ರವೇಶಿಸಿದ ಸರ್ಕಾರ ಮಠದ ಸಂರಕ್ಷಣೆಗಾಗಿ ನಿವೃತ್ತ ಐಎಎಸ್ ಅಧಿಕಾರಿಯೊಬ್ಬರನ್ನು ನೇಮಿಸಿತ್ತು. ಆದರೆ, ಸದ್ಯ ನಿವೃತ್ತ ಐಎಎಸ್ ಅಧಿಕಾರಿ ನೇಮಿಸಿರುವ ಮೂವರು ಸದಸ್ಯರ ಸಮಿತಿಯವರು ಮಠದ ಆಸ್ತಿಯನ್ನು ಮನಬಂದಂತೆ ಬಳಸುವ ಮೂಲಕ ಮಠದ ಜೀರ್ಣೋದ್ಧಾರದ ಬದಲಿಗೆ ಅವನತಿಯತ್ತ ಕೊಂಡೊಯ್ಯುತ್ತಿದ್ದಾರೆಂಬುದು ಚಂಗಡಿಹಳ್ಳಿ ಗ್ರಾಮಸ್ಥರ ಆರೋಪ. ಏನಿದು ವಿವಾದ:

ಸುಮಾರು ಮೂರು ಶತಮಾನಗಳ ಇತಿಹಾಸ ಹೊಂದಿರುವ ಚಂಗಡಿಹಳ್ಳಿ ಮಠ ವೀರಶೈವ ವಿರಕ್ತ ಖಾಸ ಮಠ. ಈ ಮಠಕ್ಕೆ ಅಧೀನವಾಗಿ ಕೊಡಗಿನ ದೊಡ್ಡಕೊಳ್ತೂರು, ಸಂತೆಮರೂರು ಮತ್ತೊಂದು ಕಾಸರಗೋಡಿನಲ್ಲಿ ಇದರ ಶಾಖಾ ಮಠಗಳಿದ್ದು, ಸರ್ವ ಸ್ವತಂತ್ರ ಮಠ ಎಂದು ದಾಖಲೆಗಳಲ್ಲೆ ಘೋಷಣೆಯಾಗಿದೆ. ಗ್ರಾಮದ ಪಟೇಲರು, ಗೌಡರು, ಸರ್ಕಾರ ದಾನ ನೀಡಿದ ಸುಮಾರು ೨೫೦ ಎಕರೆ ಭೂಮಿಯಲ್ಲಿ ೧೭ನೇ ಶತಮಾನಕ್ಕೂ ಮುನ್ನ ಮಠ ಸ್ಥಾಪನೆಯಾಗಿ ಈ ಭಾಗದಲ್ಲಿ ಧರ್ಮಪ್ರಚಾರದಲ್ಲಿ ತೊಡಗಿಸಿಕೊಂಡಿತ್ತು. 1969ರಲ್ಲಿ ಅಂದಿನ ಸ್ವಾಮೀಜಿಗಳಾಗಿದ್ದ ಶ್ರೀ ಚನ್ನಸಿದ್ದೇಶ್ವರ ಸ್ವಾಮೀಜಿ ತಮ್ಮ ಕುಟುಂಬದವರೊಬ್ಬರನ್ನು ವಟುವಾಗಿ ನೇಮಿಸಿದ್ದರು. ಆದರೆ, ವಟು ಸ್ವಾಮೀಜಿಗಳಾಗಿ ಮುಂದುವರಿಯಲು ಒಪ್ಪದ ಕಾರಣ ಚಿತ್ರದುರ್ಗದಿಂದ ವಟು ಒಬ್ಬರನ್ನು ಕರೆತಂದು ಸ್ವಾಮೀಜಿಯಾಗಿ ನೇಮಿಸಲಾಗಿತ್ತು. ಈ ಕಾಲದಲ್ಲಿ ದಾಖಲೆಗಳಲ್ಲಿ ಚಿತ್ರದರ್ಗುದ ಬೃಹನ್ಮಠದ ಹೆಸರು ಸೇರಿಕೊಂಡಿದ್ದು ೧೯೯೯ ರಲ್ಲಿ ಈ ಸ್ವಾಮೀಜಿ ಸಹ ಮೃತಪಟ್ಟ ನಂತರ ಚಿತ್ರದುರ್ಗ ಬೃಹನ್ಮಠದ ಸ್ವಾಮೀಜಿಗಳು ಈ ಮಠದ ಸಂಪೂರ್ಣ ಅಧಿಪತ್ಯ ಸ್ಥಾಪಿಸಿದ್ದು ಮಠದ ಆಸ್ತಿಯನ್ನು ತಮಗೆ ಇಷ್ಟ ಬಂದ ರೀತಿಯಲ್ಲಿ ಉಪಯೋಗಿಸುತ್ತಿರುವುದರಿಂದ ೨೫೦ ಎಕರೆ ಇದ್ದ ಮಠದ ಆಸ್ತಿ ಇಂದು ೩೫ ಎಕರೆಗೆ ಇಳಿದಿದ್ದು, ಇಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರು ಭಾರಿ ಪ್ರಮಾಣದಲ್ಲಿ ಮಠದ ಆಸ್ತಿಯನ್ನು ದೋಚುತ್ತಿರುವುದರಿಂದ ಮಠ ಅಸ್ತಿತ್ವ ಕಳೆದುಕೊಳ್ಳುವ ಹಂತ ತಲುಪಿದೆ. ಆದ್ದರಿಂದ, ಧರ್ಮ ಪ್ರಚಾರಕ್ಕಿರುವ ಮಠವನ್ನು ಚಿತ್ರದುರ್ಗ ಬೃಹನ್ಮಠದಿಂದ ವಿಮೋಚನೆಗೊಳಿಸಿ ಗ್ರಾಮಸ್ಥರಿಗೆ ವಹಿಸಬೇಕು ಎಂಬ ಬೇಡಿಕೆಯೊಂದಿಗೆ ಹೋರಾಟ ನಡೆಸಲಾಗುತ್ತಿದೆ. ಕುಸಿಯುತ್ತಿರುವ ಮಠದ ಮಾಡು:

ಸುಮಾರು ಎರಡು ಎಕರೆ ಪ್ರದೇಶದಲ್ಲಿರುವ ಮಠದ ಮಾಡು ಸದ್ಯ ಅಲ್ಲಲ್ಲಿ ಕುಸಿತು ಬೀಳುತ್ತಿದ್ದರೆ ಗ್ರಾಮಸ್ಥರ ಪ್ರಕಾರ ಇಲ್ಲಿ ಪೂಜೆ ಪುನಸ್ಕಾರಗಳು ನಿಂತು ಹಲವು ವರ್ಷಗಳೇ ಸಂದಿವೆ. ಮಠದ ಉಚ್ಛಾಯ ಸ್ಥಿತಿಯನ್ನು ಸಾರುವಂತ ಕಲ್ಲು ಬಾಗಿಲು, ಗದ್ದಿಗೆ ಇರುವ ಪ್ರದೇಶ ಸಂಪೂರ್ಣ ಕಲ್ಲುಹಾಸಿನಿಂದ ಆವೃತ್ತವಾಗಿದೆ. ಗದ್ದಿಗೆ ಹೊರತುಪಡಿಸಿರುವ ತೊಟ್ಟಿ ಮನೆಯ ಮಾಡನ್ನು ಅತ್ಯಂತ ವೈಜ್ಞಾನಿಕವಾಗಿ ಚಿತ್ರಿಸಲಾಗಿದ್ದು ಸದ್ಯ ಈ ಪ್ರದೇಶ ಮಳೆ ನೀರಿನಿಂದ ಸೋರಿ ಅಲ್ಲಲ್ಲಿ ಕಳಚಿ ಬೀಳುತ್ತಿದೆ. ರಂಗ ಕಂಬಗಳು ತಮ್ಮ ಗತಕಾಲದ ಇತಿಹಾಸವನ್ನು ಸಾರುತ್ತಿವೆ. ಗಜಕೇಸರಿ ಕುಸರಿ ಕೆಲಸ ಮನಸೆಳೆಯುತ್ತಿದ್ದು ಮೈಸೂರಿನಿಂದ ಆಗಮಿಸಿದ್ದ ಇತಿಹಾಸ ತಜ್ಞರು ಇಲ್ಲಿನ ಕುಸುರಿ ಕೆಲಸ ಕಂಡು ಹೌಹಾರಿದ್ದು, ಈ ಮಠ ಸಂಶೋಧನೆಗೆ ಸೂಕ್ತ ಎಂಬ ಶರಾ ಬರೆದಿದ್ದಾರೆ. ಮಠದ ಆವರಣ ಸಂಪೂರ್ಣ ಗಿಡಗಂಟಿಗಳಿಂದ ತುಂಬಿಹೋಗಿದ್ದು ಮಠದ ಕೆಲವು ಬಾಗ ಶಿಥಿಲಗೊಂಡು ಧರಾಶಾಹಿಯಾಗಿರುವುದರಿಂದ ಮಠದ ಆವರಣದ ತುಂಬ ವಿವಿಧ ವಿನ್ಯಾಸದ ಕಲ್ಲುಗಳು ಮಠದ ವೈಭವವನ್ನು ಸಾರುತ್ತಿದೆ. ಸದ್ಯ ಮಠ ತನ್ನ ಉಳಿವಿಗಾಗಿ ನಿಸ್ವಾರ್ಥ ಭಕ್ತರ ನಿರೀಕ್ಷೆಯಲ್ಲಿದೆ.ಸಾಮಗ್ರಿಗಳ ಕಳವು:

ಗ್ರಾಮಸ್ಥರ ಪ್ರಕಾರ ಬೆಳ್ಳಿಯ ಹರಿವಾಣ, ಸ್ವಾಮೀಜಿಗಳಿಂದ ಸ್ವಾಮೀಜಿಗಳಿಗೆ ಉಡುಗೊರೆಯಾಗಿ ಬರುತ್ತಿದ್ದ ಕರಡಿಗೆ, ಕಾಫಿ ತೋಟಕ್ಕೆ ನೀರುಣಿಸಲು ಸಂಗ್ರಹಿಸಿಟ್ಟಿದ್ದ ನೂರಾರು ಪೈಪ್‌ಗಳು, ಮೋಟರ್‌ಗಳು ಹಾಗೂ ಸ್ವಾಮೀಜಿ ಬಳಸುತ್ತಿದ್ದ ಮಂಚವನ್ನು ಬಿಡದೆ ಕಳುವು ಮಾಡಲಾಗಿದೆ ಎಂಬ ಆರೋಪ ಕೇಳಿ ಬರುತ್ತಿದ್ದು, ನಿಸ್ವಾರ್ಥ ತನಿಖೆಯಾಗಬೇಕಿದೆ.

ಬ್ರಿಟೀಷರ ನೀತಿ:

ಬ್ರಿಟೀಷರು ಅನುಸರಿಸುತ್ತಿದ್ದ ಒಡೆದು ಆಳುವ ನೀತಿಯನ್ನೇ ಸದ್ಯ ಚಿತ್ರದುರ್ಗದ ಬೃಹನ್ಮಠ ಅನುಸರಿಸುತ್ತಿದ್ದು ಗ್ರಾಮಸ್ಥರ ನಡುವೆ ಅಭಿಪ್ರಾಯ ಭೇದ ಮೂಡಿಸಿ ಒಗ್ಗಟ್ಟು ಮುರಿದಿದ್ದರೆ ಮತ್ತೆ ಕೆಲವು ಗ್ರಾಮಸ್ಥರು ಮಠದ ಆಸ್ತಿಯನ್ನು ಕಬಳಿಕೆ ಮಾಡಿರುವುದರಿಂದ ಹೋರಾಟಕ್ಕೆ ಧುಮುಕುತ್ತಿಲ್ಲ ಎಂಬ ಮಾತುಗಳಿದೆ.ಸಮಿತಿಗೆ ಸ್ಥಳೀಯರ ನೇಮಕಕ್ಕೆ ಆಗ್ರಹ:

ಮಠದ ನಿರ್ವಹಣೆಯನ್ನು ಸಮಿತಿಗೆ ಒಪ್ಪಿಸಿರುವ ಸರ್ಕಾರ ಸಮಿತಿ ಸದಸ್ಯರನ್ನಾಗಿ ಸಂಪೂರ್ಣ ಉತ್ತರ ಕರ್ನಾಟಕ ಮೂಲದವರನ್ನು ನೇಮಿಸಿದೆ. ಸದ್ಯ ಈ ಸಮಿತಿ ಸದಸ್ಯರು ಕೂಡಗಿನ ಬೇಳೂರು ಮಠವನ್ನು ಕೇಂದ್ರವನ್ನಾಗಿಟ್ಟುಕೊಂಡು ಕೊಡಗಿನ ಸುಮಾರು ೧೦ ಮಠಗಳು ಸೇರಿದಂತೆ ಚಂಗಡಿಹಳ್ಳಿ ಮಠದ ನಿರ್ವಹಣೆ ಮಾಡುತಿದ್ದು, ಬೇಕಾಬಿಟ್ಟಿಯಾಗಿ ಮಠದ ಆಸ್ತಿಯನ್ನು ಅನುಭವಿಸುತಿದ್ದಾರೆ. ಆದ್ದರಿಂದ, ಸ್ಥಳೀಯರನ್ನು ಸಮಿತಿಗೆ ಸದಸ್ಯರನ್ನಾಗಿ ಮಾಡಬೇಕು ಎಂಬ ಆಗ್ರಹ ಗ್ರಾಮಸ್ಥರದ್ದು.ಮರಗಳ ಹನನ:

ಮಠ ಒಂದೆಡೆ ಪಾಳು ಬಿದ್ದಿದ್ದರೆ ಮತ್ತೊಂದೆಡೆ ಆಡಳಿತ ಸಮಿತಿ ತೋಟದಲ್ಲಿನ ಮರಗಳ ಹನನ ನಡೆಸುತ್ತಿದ್ದು, ಇದಕ್ಕಾಗಿ ಆಗಮಿಸಿರುವ ಕೂಲಿಕಾರ್ಮಿಕರು ಮಠದ ಆವರಣದಲ್ಲೆ ಮಾಂಸ ಖಾದ್ಯವನ್ನು ಸೇವಿಸುವ ಮೂಲಕ ಮಠದ ಪಾವಿತ್ರ್ಯತೆಗೆ ಭಂಗ ತಂದಿರುವ ಚಿತ್ರಣ ಸದ್ಯ ಪತ್ರಿಕೆ ಮಠಕ್ಕೆ ಭೇಟಿ ನೀಡಿದ ವೇಳೆ ಕಂಡುಬಂದಿದೆ. ತಡಬಡಾಯಿಸಿದ ಸ್ವಾಮೀಜಿ:

ಸದ್ಯ ಮಠದ ಸ್ಥಿತಿಗತಿ ಬಗ್ಗೆ ಮಠದ ಉಸ್ತುವಾರಿ ವಹಿಸಿರುವ ಶ್ರೀ ಮೋಕ್ಷಪತಿ ಸ್ವಾಮೀಜಿ ಉತ್ತರಿಸಲು ತಡಬಡಾಯಿಸಿದ್ದು ಚಿತ್ರದುರ್ಗ ಮಠದ ವತಿಯಿಂದ ನಿಸ್ವಾರ್ಥವಾಗಿ ಮಠವನ್ನು ಮುನ್ನಡೆಸುತ್ತಿರುವುದಾಗಿ ವಿವರಿಸಿದರು. ಆದರೆ, ಮಠದ ಸ್ಥಿತಿ ಮಾತ್ರ ಇವರ ಹೇಳಿಕೆಗೆ ವಿರುದ್ಧವಾಗಿರುವುದು ಮಾತ್ರ ಸತ್ಯ.

--------------------------------------------------------------------ಹೇಳಿಕೆ1

ಧರ್ಮಪ್ರಚಾರಕ್ಕಿರುವ ಮಠವನ್ನು ಸ್ವಾರ್ಥಿಗಳ ಗುಂಪು ತಮ್ಮ ಕುಟುಂಬದ ಉದ್ಧಾರಕ್ಕೆ ಬಳಸುತ್ತಿದೆ. ಐತಿಹಾಸಿಕ ಹಿನ್ನೆಲೆ ಇರುವ ಮಠವನ್ನು ಭಕ್ತಾದಿಗಳಿಗೆ ಒಪ್ಪಿಸಬೇಕು.

- ಹಾಲಪ್ಪ, ಮಠ ಉಳಿಸಿ ಹೋರಾಟ ಸಮಿತಿ ಮುಖಂಡ (11ಎಚ್ಎಸ್ಎನ್8ಬಿ)ಹೇಳಿಕೆ2

ಚಿತ್ರದುರ್ಗದ ಬೃಹನ್ಮಠದಿಂದ ವ್ಯವಸ್ಥಿತವಾಗಿ ಸಣ್ಣಪುಟ್ಟ ಮಠಗಳನ್ನು ಆಪೋಷನ ತೆಗೆದುಕೊಳ್ಳುತ್ತಿದೆ. ಇದಕ್ಕೆ ಕಡಿವಾಣ ಹಾಕವುದು ಅಗತ್ಯವಿದೆ.

ಸಂತೋಷ, ಚಂಗಡಿಹಳ್ಳಿ ನಿವಾಸಿ (11ಎಚ್ಎಸ್ಎನ್8ಸಿ)

ಹೇಳಿಕೆ3

ಮಠವನ್ನು ಅತ್ಯಂತ ವ್ಯವಸ್ಥಿತವಾಗಿ ನಿರ್ವಹಿಸಿಕೊಂಡು ಬರಲಾಗುತ್ತಿದ್ದು, ಎರಡು ದಶಕಗಳ ಹಿಂದೆ ಚಿತ್ರದುರ್ಗ ಮಠದಿಂದಲೇ ಮಠವನ್ನು ಜೀರ್ಣೋದ್ಧಾರಗೊಳಿಸಲಾಗಿದೆ. ಶ್ರೀ ಮೋಕ್ಷಪತಿ ಸ್ವಾಮೀಜಿ, ಉಸ್ತುವಾರಿ, ರಾವಂದೂರು ಮಠ ಮೈಸೂರು (11ಎಚ್ಎಸ್ಎನ್8ಡಿ)

------------------------------------------------------------