ಬದುಕಿನ ಮೌಲ್ಯ ಕಟ್ಟಿಕೊಡುವ ಬೇಂದ್ರೆ ಸಾಹಿತ್ಯ: ಡಾ. ವಿಜಯಲಕ್ಷ್ಮೀ ತಿರ್ಲಾಪುರ

KannadaprabhaNewsNetwork | Published : Feb 7, 2024 1:46 AM

ಸಾರಾಂಶ

ಬೇಂದ್ರೆಯವರು ಸಾಹಿತ್ಯದಲ್ಲಿ ತಮ್ಮ ಬದುಕಿನ ಪ್ರತಿಯೊಂದು ಚಿತ್ರಣ ಮತ್ತು ದೃಶ್ಯಗಳನ್ನ ಕಾವ್ಯಕ್ಕೆ ತಂದು ಶಬ್ದಗಳಲ್ಲಿ ಅಡಗಿಸಿಟ್ಟ ಶಬ್ದಗಾರುಡಿಗರಾಗಿದ್ದಾರೆ.

ಬೇಂದ್ರೆಯವರ ಕವಿತೆ ವಾಚನ ಹಾಗೂ ಗೀತ ಗಾಯನ ಕಾರ್ಯಕ್ರಮ ಉದ್ಘಾಟನೆ

ಕನ್ನಡಪ್ರಭ ವಾರ್ತೆ ಹಾವೇರಿ

ಬದುಕಿನುದ್ದಕ್ಕೂ ಅನುಭವಿಸಿದ ಅನೇಕ ನೋವು, ಸಂಕಟ, ತಳಮಳಗಳಿಂದ ವಿಚಲಿತರಾಗದೇ ಅದೆಲ್ಲವನ್ನು ಅರೆದುಕೊಂಡ ರಸಪಾಕದಿಂದ ಶಬ್ಧಗಳಲ್ಲಿ ಬದುಕಿನ ಮೌಲ್ಯಗಳನ್ನು ಕಟ್ಟಿಕೊಡುವ ದ.ರಾ. ಬೇಂದ್ರೆಯವರ ಸಾಹಿತ್ಯ ಅನನ್ಯವಾದುದು ಎಂದು ಹಾವೇರಿ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವೆ ಡಾ. ವಿಜಯಲಕ್ಷ್ಮೀ ತಿರ್ಲಾಪುರ ಹೇಳಿದರು.

ನಗರದ ಭಾವಸಂಗಮ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ವತಿಯಿಂದ ಹಂಚಿನಮನಿ ಆರ್ಟ್ ಗ್ಯಾಲರಿಯಲ್ಲಿ ನಡೆದ ದ.ರಾ. ಬೇಂದ್ರೆಯವರ ಜನ್ಮ ದಿನಾಚರಣೆ ಪ್ರಯುಕ್ತ ಕವಿ ದಿನ ಕಲ್ಪನೆ ಅಡಿಯಲ್ಲಿ ಬೇಂದ್ರೆಯವರ ಕವಿತೆ ವಾಚನ ಹಾಗೂ ಗೀತ ಗಾಯನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಬದುಕಿನ ಕುಲುಮೆಯಲ್ಲಿ ನೊಂದು ಬೆಂದಿದ್ದರೂ ಬದುಕಿನ ಭವ್ಯತೆ ಮತ್ತು ದಿವ್ಯತೆಯನ್ನು ಅನಾವರಣಗೊಳಿಸಿದರು. ಜೀವನದಲ್ಲಿ ನೊಂದು ಬೆಂದವರಿಗೆ ಬೆಳಕು ಮತ್ತು ಬೆಳದಿಂಗಳನ್ನು ನೀಡುವುದು ಬೇಂದ್ರೆಯವರ ಕಾವ್ಯಶಕ್ತಿಯಾಗಿದೆ. ಪುಸ್ತಕಗಳು ಉತ್ತಮ ಸ್ನೇಹಿತರಿದ್ದಂತೆ. ನಮ್ಮ ಬದುಕಿನ ನೋವು, ಸಂಕಟ, ಗಾಯಗಳಿಗೆ ಚಿಕಿತ್ಸೆ ನೀಡಿ ಸಂತಸ ತರುತ್ತವೆ. ಬೇಂದ್ರೆಯವರು ಸಾಹಿತ್ಯದಲ್ಲಿ ತಮ್ಮ ಬದುಕಿನ ಪ್ರತಿಯೊಂದು ಚಿತ್ರಣ ಮತ್ತು ದೃಶ್ಯಗಳನ್ನ ಕಾವ್ಯಕ್ಕೆ ತಂದು ಶಬ್ದಗಳಲ್ಲಿ ಅಡಗಿಸಿಟ್ಟ ಶಬ್ದಗಾರುಡಿಗರಾಗಿದ್ದಾರೆ ಎಂದರು.

ಡಿಡಿಪಿಯು ಡಾ. ಉಮೇಶಪ್ಪ ಎಚ್. ಮಾತನಾಡಿ, ಬೇಂದ್ರೆಯವರ ಬದುಕಿನ ಸರಳತೆಯಂತೆ ಅವರ ಸಾಹಿತ್ಯ ಮತ್ತು ಕಾವ್ಯದಲ್ಲಿನ ಶಬ್ದಗಳು ಸರಳವಾಗಿ ಕಂಡರೂ ಆಳವಾದ ಅರ್ಥ ಹೊಂದಿವೆ. ತಮ್ಮ ಬದುಕಿನಲ್ಲಿ ಕಂಡುಂಡ ಅನುಭವಗಳನ್ನು ಕಾವ್ಯಕ್ಕಿಳಿಸಿದ ಅಪರೂಪದ ಕವಿ. ಅವರ ಸಾಹಿತ್ಯವನ್ನು ಸಂಪೂರ್ಣ ಓದಿದಾಗ ಮಾತ್ರ ಅವರ ವ್ಯಕ್ತಿತ್ವ ಅರಿಯಲು ಸಾಧ್ಯ. ಸರಳತೆಯಲ್ಲಿಯೇ ಕಠಿಣತೆಯನ್ನು ತಿಳಿಸುವ ಅವರ ಶಬ್ದಲಾಲಿತ್ಯ ಸಾಹಿತ್ಯ ಪ್ರೇಮಿಗಳಿಗೆ ಹಬ್ಬದೂಟವಿದ್ದಂತೆ. ಬದುಕನ್ನು ಕಾಣುವ, ಅನುಭವಿಸುವ ಮತ್ತು ಅನುಭಾವಿಸುವ ಅವರ ದೃಷ್ಟಿಕೋನ ಇಂದಿನ ಪೀಳಿಗೆಗೆ ಅತ್ಯಂತ ಅವಶ್ಯಕವಾಗಿದೆ ಎಂದರು.

ಭಾವಸಂಗಮ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆಯ ಸಂಚಾಲಕ ಶೇಖರ ಭಜಂತ್ರಿ ಮಾತನಾಡಿ, ಸಾಹಿತ್ಯ ಲೋಕದ ದಿಗ್ಗಜ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಬೇಂದ್ರೆಯವರ ಬದುಕು ಅಸಹನೀಯ ಸ್ಥಿತಿಯನ್ನು ಪ್ರದರ್ಶಿಸುತ್ತಿದ್ದರೂ ನಕರಾತ್ಮಕವಾಗಿ ಯೋಚಿಸದೇ ಬೆಂಕಿಯಲ್ಲಿ ಅರಳುವ ಹೂವಿನಂತೆ ಸಕರಾತ್ಮಕವಾಗಿ ಪರಿವರ್ತಿಸಿಕೊಂಡರು. ಬದುಕಿನಲ್ಲಿ ಬೆಂದರೆ ಮಾತ್ರ ಬೇಂದ್ರೆಯಾಗಲು ಸಾಧ್ಯ ಎಂಬಂತೆ ಅವರ ಕಾವ್ಯ ಸೃಷ್ಟಿಯೇ ಅದಕ್ಕೆ ಸಾಕ್ಷಿಯಾಗಿದೆ. ಅವರನ್ನು ಮತ್ತೆ ಮತ್ತೆ ನೆನೆಯುವ ಮೂಲಕ ನೊಂದ ಮನಸ್ಸುಗಳಿಗೆ ಕಾವ್ಯದಲ್ಲಿ ಅಡಗಿರುವ ಬೇಂದ್ರೆಯವರ ಕಿವಿಮಾತು, ಪ್ರೀತಿ ಹಂಚುವ ಅವಶ್ಯಕತೆ ಇದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಸತೀಶ ಕುಲಕರ್ಣಿ ಬೇಂದ್ರೆಯವರ ಸಾಹಿತ್ಯದಲ್ಲಿನ ಮಾಧುರ್ಯ ವಿಶೇಷ ಅನುಭೂತಿಯನ್ನು ನೀಡುತ್ತದೆ. ಭಾವಕವಿಗಳಾಗಿದ್ದ ಅವರು ನಾಟಕ, ಕಾದಂಬರಿ, ಕಾವ್ಯಗಳಲ್ಲಿ ಬದುಕಿನ ವಿವಿಧ ಮಜಲುಗಳನ್ನ ಕಟ್ಟಿಕೊಟ್ಟಿದ್ದಾರೆ ಎಂದರು.

ಇದೇ ವೇಳೆ ರಾಜ್ಯಮಟ್ಟದ ಸ್ವಾಮಿ ವಿವೇಕಾನಂದ ಸದ್ಭಾವನಾ ಪ್ರಶಸ್ತಿ ಪಡೆದ ಸಮಾಜ ಸೇವಕಿ ಪರಿಮಳ ಜೈನ್, ಕುಲಸಚಿವೆ ವಿಜಯಲಕ್ಷ್ಮೀ ತಿರ್ಲಾಪುರ ಅವರನ್ನು ಗೌರವಿಸಲಾಯಿತು.

ಕಲಾವಿದ ಕರಿಯಪ್ಪ ಹಂಚಿನಮನಿ ಪಾಲ್ಗೊಂಡಿದ್ದರು. ಸಿದ್ದು, ಪ್ರಶಾಂತ, ನಾಗರಾಜ ಹುಡೇದ, ಸಿ.ಎಸ್. ಮರಳಿಹಳ್ಳಿ, ಈರಣ್ಣ ಬೆಳವಡಿ, ಅನಿತಾ ಮಂಜುನಾಥ, ಮುತ್ತು ಗುತ್ತಲ, ನಾಗರಾಜ, ವಿಶ್ವನಾಥ, ಶಂಕರ ಬಡಿಗೇರ, ಸವಿತಾ, ದಾನೇಶ್ವರಿ ಶಿಗ್ಗಾವಿ, ಇತರ ಕವಿಗಳು ಬೇಂದ್ರೆ ಅವರ ಕವಿತೆ ವಾಚಿಸಿದರೆ, ರವೀಂದ್ರ, ಭೂಮಿಕ ರಜಪೂತ್, ಶಂಕರ ತುಮ್ಮಣ್ಣನವರ ಇತರರು ಕವಿತೆಗಳನ್ನ ಹಾಡಿದರು. ಸಿದ್ದು ಸ್ವಾಗತಿಸಿದರು. ಪೃಥ್ವಿರಾಜ ಬೆಟಿಗೇರಿ ನಿರೂಪಿಸಿದರು. ವಿ.ಎಸ್. ಪಾಟೀಲ ವಂದಿಸಿದರು.

Share this article