ರಟ್ಟೀಹಳ್ಳಿ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವತಿಯಿಂದ ಸಂಘದ ಸದಸ್ಯರಿಗಾಗಿ ಅತೀ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ನೀಡಲಾಗುತ್ತಿದ್ದು, ವಿಶೇಷವಾಗಿ ಅಡಕೆ ಬೆಳೆಗಾರರಿಗೆ ಶೇ 3 ಬಡ್ಡಿದರದಲ್ಲಿ ಸಾಲ ನೀಡಲಾಗುತ್ತಿದೆ ಎಂದು ಕೆಸಿಸಿ ಬ್ಯಾಂಕ್ ನಿರ್ದೇಶಕ ಲಿಂಗರಾಜ ಚಪ್ಪರದಳ್ಳಿ ಹೇಳಿದರು.
ನಮ್ಮ ಸಹಕಾರಿ ಸಂಘದಿಂದ ತಾಲೂಕಿನ ಕವಳಿಕುಪ್ಪಿ ಗ್ರಾಮದ ಅಡಕೆ ಬೆಳೆಗಾರರಿಗೆ 16.50 ಲಕ್ಷ ಮೊತ್ತದ 6 ರೈತರಿಗೆ ಸಾಲದ ಚೆಕ್ ನೀಡಿದ್ದು, ಸಾಲ ಪಡೆದ ರೈತರು ಸಮಯಕ್ಕೆ ಸರಿಯಾಗಿ ಮರು ಪಾವತಿ ಮಾಡಿ ಆ ಮೂಲಕ ನಿಮ್ಮ ಆರ್ಥಿಕತೆ ಉತ್ತೇಜನವಾಗುವುದಲ್ಲದೇ ಸಹಕಾರಿ ಸಂಘಗಳು ಉತ್ತರೋತ್ತರವಾಗಿ ಬೆಳೆದು ಇನ್ನೂ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ನೀಡಲು ಸಹಕಾರಿಯಾಗುವುದು ಎಂದರು.ವಿಶೇಷವಾಗಿ ರೈತರಿಗಾಗಿ ಆಕಳ ಸಾಲ, ಕುರಿ ದೊಡ್ಡಿ ಸಾಲ ಹಾಗೂ ಭೂ ಅಭಿವೃದ್ಧಿಗಾಗಿ ಸಾಲ ಸೌಲಭ್ಯ ನೀಡುತ್ತಿದ್ದು, ಕಾರಣ ಅದರ ಪ್ರಯೋಜನಗಳನ್ನು ಪಡೆದು ಕೃಷಿ ಉತ್ಪಾದಕತೆ ಮತ್ತು ಕೃಷಿ ಜೊತೆ ಉಪ ಕಸುಬುಗಳನ್ನು ಹೊಂದಿ ಆರ್ಥಿಕವಾಗಿ ಸದೃಢರಾಗಿ ಎಂದು ಮನವಿ ಮಾಡಿದರು. ಇಂದಿನ ಒತ್ತಡದ ಜೀವನದಲ್ಲಿ ರೈತರು ತಮ್ಮ ಆರೋಗ್ಯದ ಬಗ್ಗೆ ನಿಷ್ಕಾಳಜಿ ವಹಿಸುತ್ತಿರುವುದು ಸರಿಯಲ್ಲ, ಪ್ರತಿಯೊಬ್ಬ ರೈತರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿವಹಿಸಬೇಕು. ಆ ನಿಟ್ಟಿನಲ್ಲಿ ನಮ್ಮ ಸಹಕಾರಿ ಸಂಘದಿಂದ ರೈತರಿಗಾಗಿ ಯಶಸ್ವಿನಿ ಆರೋಗ್ಯ ಕಾರ್ಡ್ ನೀಡಲಾಗುತ್ತಿದ್ದು ಅದರ ಸದುಪಯೋಗ ಪಡೆದುಕೊಳ್ಳಿ ಎಂದರು. ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸಂದೀಪ ಪಾಟೀಲ್, ಕಾರ್ಯದರ್ಶಿ ಚಂದ್ರಪ್ಪ ಮಳಗೊಂಡರ, ಮಾಲತೇಶ ಪಾಟೀಲ್, ರಾಜು ಬೆನ್ನೂರ, ಮಲ್ಲಿಕಾರ್ಜುನ ಗದಿಗಯ್ಯ, ಸಂಗಯ್ಯ ಹುಲಗಿನಕಟ್ಟಿ, ಶಿವಯೋಗಿಸ್ವಾಮಿ ಹಾಗೂ ಸಿಬ್ಬಂದಿಗಳು ಇದ್ದರು.