ಕನ್ನಡಪ್ರಭ ವಾರ್ತೆ ಶಿಕಾರಿಪುರ
ಶನಿವಾರ ಸುದ್ದಿಮನೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಲೆನಾಡಿನ ಹೆಬ್ಬಾಗಿಲು ಎಂಬ ಹಿರಿಮೆ ಹೊಂದಿರುವ ಶಿವಮೊಗ್ಗ ನಗರ ಭೌಗೋಳಿಕವಾಗಿ ಮದ್ಯ ಕರ್ನಾಟಕದ ಕೇಂದ್ರ ಸ್ಥಳವಾಗಿದ್ದು, ಅಕ್ಕಪಕ್ಕದ 5-6 ಜಿಲ್ಲೆಗಳಿಗೆ ಸಮೀಪದಲ್ಲಿರುವ ಎಲ್ಲ ರೀತಿಯ ಸೌಲಭ್ಯ ಹೊಂದಿದೆ ಎಂದು ತಿಳಿಸಿದರು.
ಸಾರ್ವಜನಿಕರ ಹಿತಾಸಕ್ತಿಗಾಗಿ ಶಿವಮೊಗ್ಗದಲ್ಲಿ ಹೈಕೋರ್ಟ್ ಸಂಚಾರಿ ಪೀಠ ಆರಂಭಕ್ಕೆ ಸುದೀರ್ಘ ಕಾಲದಿಂದ ಬೇಡಿಕೆ ಇದ್ದು, ಈಗಾಗಲೇ ಧಾರವಾಡ ಹಾಗೂ ಕಲ್ಬುರ್ಗಿಯಲ್ಲಿ ಸಂಚಾರಿ ಪೀಠ ಆರಂಭವಾಗಿ ಶಿವಮೊಗ್ಗಕ್ಕೆ ಮಂಜೂರಾತಿ ದೊರೆಯುವ ಎಲ್ಲ ರೀತಿಯ ನಿರೀಕ್ಷೆ ಹೊಂದಿದ್ದ ಸಂದರ್ಭದಲ್ಲಿ ಮಂಗಳೂರು ಹೈಕೋರ್ಟ್ ಸಂಚಾರಿ ಪೀಠಕ್ಕೆ ಶಿವಮೊಗ್ಗ ಸೇರ್ಪಡೆಗೊಳಿಸುವ ಮಾಹಿತಿ ಲಭ್ಯವಾಗಿದೆ ಎಂದ ಅವರು, ಶಿವಮೊಗ್ಗಕ್ಕೆ ಪ್ರತ್ಯೇಕ ಸಂಚಾರಿ ಪೀಠಕ್ಕಾಗಿ ಜಿಲ್ಲೆಯ 18 ಹಿರಿಯ ವಕೀಲರ ಜತೆ ಚರ್ಚಿಸಿ ಮಂಗಳೂರಿಗೆ ಸೇರ್ಪಡೆಗೊಳಿಸುವ ಪ್ರಸ್ಥಾವನೆಯನ್ನು ಕೈಬಿಟ್ಟು ಶಿವಮೊಗ್ಗದಲ್ಲಿ ಆರಂಭಿಸಲು ಎಲ್ಲ ರೀತಿಯ ಒತ್ತಡ ಹೇರಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.ಮಂಗಳೂರು ಸಂಚಾರಿ ಪೀಠಕ್ಕೆ ಶಿವಮೊಗ್ಗ ಸೇರ್ಪಡೆಗೊಳಿಸುವುದು ಅವೈಜ್ಞಾನಿಕ ಕ್ರಮವಾಗಿದ್ದು, ಸಂಚಾರ ವ್ಯವಸ್ಥೆಯಲ್ಲಿನ ಸಮಸ್ಯೆಯಿಂದ ಸಾರ್ವಜನಿಕರು ಹೈರಾಣಾಗಲಿದ್ದಾರೆ. ವಿಮಾನ, ರೈಲ್ವೆ, ಬಸ್ ಮತ್ತಿತರ ಸಮರ್ಪಕ ವ್ಯವಸ್ಥೆ ಹೊಂದಿರುವ ಶಿವಮೊಗ್ಗದಲ್ಲಿ ಸಂಚಾರಿ ಪೀಠದ ಆರಂಭದಿಂದ ಸುತ್ತಮುತ್ತಲಿನ ಹಲವು ಜಿಲ್ಲೆ ಜನತೆಗೆ ಅನುಕೂಲವಾಗಲಿದೆ ಎಂದ ಅವರು, ಮಂಗಳೂರು ಪ್ರಸ್ತಾವಿತ ಸಂಚಾರಿ ಪೀಠಕ್ಕೆ ಎಲ್ಲ ರೀತಿಯ ಸೌಲಭ್ಯ ಕಲ್ಪಿಸುವ ಮುಖ್ಯಮಂತ್ರಿಗಳ ಹೇಳಿಕೆ ಬಗ್ಗೆ ಇತ್ತೀಚೆಗೆ ಜಿಲ್ಲಾ ವಕೀಲರ ಸಂಘದ ಪದಾಧಿಕಾರಿಗಳ ಜತೆ ಹಿರಿಯ ನ್ಯಾಯವಾದಿ ಬಸಪ್ಪಗೌಡ್ರು, ಶ್ರೀಪಾಲ್ ಮತ್ತಿತರರ ಜತೆ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ವಾಸ್ತವ ಸ್ಥಿತಿ ಬಗ್ಗೆ ಮನವರಿಕೆ ಮಾಡಿರುವುದಾಗಿ ತಿಳಿಸಿದರು.
ಗೋಷ್ಠಿಯಲ್ಲಿ ವಿಶ್ವ ಮಾನವ ಹಕ್ಕುಗಳ ಸಂಸ್ಥೆ ತಾ.ಅಧ್ಯಕ್ಷ ಮಂಜುನಾಥ್, ಉಪಾಧ್ಯಕ್ಷ ನಾಗರಾಜ್, ಪುಟ್ಟಪ್ಪ, ಕಾರ್ಯದರ್ಶಿ ಪ್ರಕಾಶ್, ಚಂದ್ರು, ಮೂರ್ತಿ, ಗೋವಿಂದ ನಾಯ್ಕ, ನ್ಯಾಯವಾದಿ ಮಧು ಹುಲ್ಮಾರ್, ಮನೋಜ್ ವಿ.ಕೆ, ಸುರೇಶ್ ತಟ್ಟಹಳ್ಳಿ ಮತ್ತಿತರರು ಉಪಸ್ಥಿತರಿದ್ದರು.