ವಾಲ್ಮೀಕಿಯನ್ನು ಜಾತಿಯಿಂದಲ್ಲ, ನೀತಿಯಿಂದ ನೋಡಿ

KannadaprabhaNewsNetwork | Published : Oct 24, 2024 12:49 AM

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಕವಿ ದಾರ್ಶನಿಕರನ್ನು ಮೀರಿದ ಜ್ಞಾನಿ ವಾಲ್ಮೀಕಿ ಅವರನ್ನು ಜಾತಿಯಿಂದಲ್ಲ, ನೀತಿಯಿಂದ ನೋಡಬೇಕು ಎಂದು ಬಳ್ಳಾರಿ ವಿಜಯನಗರ ಕೃಷ್ಣದೇವರಾಯ ವಿಶ್ವವಿದ್ಯಾನಿಲಯದ ಶಿಕ್ಷಣ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಗೋಪಾಲ್ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಕವಿ ದಾರ್ಶನಿಕರನ್ನು ಮೀರಿದ ಜ್ಞಾನಿ ವಾಲ್ಮೀಕಿ ಅವರನ್ನು ಜಾತಿಯಿಂದಲ್ಲ, ನೀತಿಯಿಂದ ನೋಡಬೇಕು ಎಂದು ಬಳ್ಳಾರಿ ವಿಜಯನಗರ ಕೃಷ್ಣದೇವರಾಯ ವಿಶ್ವವಿದ್ಯಾನಿಲಯದ ಶಿಕ್ಷಣ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಗೋಪಾಲ್ ಹೇಳಿದರು.

ನಗರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಮಹರ್ಷಿ ವಾಲ್ಮೀಕಿ ಅಧ್ಯಯನ ಪೀಠ ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಘಟಕದ ಸಹಯೋಗದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಪ್ರಯುಕ್ತ ಪ್ರಸ್ತುತ ಸಾಮಾಜಿಕ ನೆಲೆಯಲ್ಲಿ ವಾಲ್ಮೀಕಿ ರಾಮಾಯಣ ಎಂಬ ವಿಶೇಷ ಉಪನ್ಯಾಸದ ವೇಳೆ ಮಾತನಾಡಿದರು. ವರ್ಣಾಶ್ರಮದ ಕಾಲಘಟ್ಟದಲ್ಲಿ ತನ್ನ ಅಪಾರ ಜ್ಞಾನದಿಂದ ರಾಮಾಯಣದಂತಹ ಮಹಾಕಾವ್ಯವನ್ನು ನೀಡಿದ ಮೇಧಾವಿ ವಾಲ್ಮೀಕಿ. ರಾಮಾಯಣದ ಪ್ರತಿಯೊಂದು ಪದದಲ್ಲಿಯೂ ವಿಶೇಷ ಅರ್ಥವಿದೆ. ಅದನ್ನು ಅರಿತಾಗ ಮಾತ್ರ ವಾಲ್ಮೀಕಿಯ ಜ್ಞಾನದ ನಿಜವಾದ ಪರಿಚಯವಾಗುತ್ತದೆ ಎಂದು ತಿಳಿಸಿದರು.

ರಾಮಾಯಣ ಕೇವಲ ಮನುಷ್ಯರನ್ನಷ್ಟೇ ಒಳಗೊಂಡಿಲ್ಲ, ಪ್ರಾಣಿ, ಪಕ್ಷಿ, ಮರಗಿಡಗಳು, ಪರಿಸರ ಎಲ್ಲವನ್ನೂ ಒಳಗೊಂಡಿದೆ. ಅಲ್ಲಿ ಪ್ರಜಾಪ್ರಭುತ್ವ, ಆಡಳಿತ, ಸಮಾನತೆ, ಸ್ತ್ರೀವಾದ, ಭ್ರಾತೃತ್ವ ಹೀಗೆ ಎಲ್ಲದರ ಪರಿಕಲ್ಪನೆಯೂ ಅಡಗಿದೆ ಎಂದರು.

ಕುಲಸಚಿವ ಶಂಕರಗೌಡ ಸೋಮನಾಳ ಮಾತನಾಡಿ, ಮಹರ್ಷಿ ವಾಲ್ಮೀಕಿ ಅವರ ರಾಮಾಯಣದ ಜೀವನ ಮೌಲ್ಯಗಳನ್ನು ನಾವು ಪಾಲನೆ ಮಾಡಬೇಕಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಕುಲಪತಿ ಪ್ರೊ.ಬಿ.ಕೆ.ತುಳಸಿಮಾಲ ಮಾತನಾಡಿ, ರಾಮಾಯಣ ಇಂದು ಹಲವು ಅವತರಣಿಕೆಗಳನ್ನು ಕಂಡಿದೆ. ಆದರೂ, ಅದರ ಮೂಲ ತತ್ವ ಹಾಗೇ ಉಳಿದುಕೊಂಡಿದೆ. ರಾಮಾಯಣ ನೋಡುವವರ ದೃಷ್ಟಿಕೋನವನ್ನು ಅವಲಂಭಿಸಿದೆ. ನಾವು ಯಾವ ಮನಸ್ಥಿತಿಯಿಂದ ಅದನ್ನು ವಿಶ್ಲೇಷಿಸುತ್ತೇವೆ ಎನ್ನುವುದು ಮುಖ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಮೌಲ್ಯಮಾಪನ ಕುಲಸಚಿವ ಪ್ರೊ.ಎಚ್.ಎಂ.ಚಂದ್ರಶೇಖರ್, ವಿವಿಧ ವಿಭಾಗಗಳ ಮುಖ್ಯಸ್ಥರು, ಸಂಶೋಧನಾ ವಿದ್ಯಾರ್ಥಿಗಳು, ಸ್ನಾತಕೋತ್ತರ ವಿದ್ಯಾರ್ಥಿಗಳ ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

ಪರಿಶಿಷ್ಟ ಜಾತಿ,ಪಂಗಡ ಘಟಕದ ನಿರ್ದೇಶಕ ಪ್ರೊ.ಹನುಮಂತಯ್ಯ ಪೂಜಾರಿ ಸ್ವಾಗತಿಸಿದರು. ವಾಲ್ಮೀಕಿ ಅಧ್ಯಯನ ಪೀಠದ ಸಂಯೋಜಕ ಸಂದೀಪ್ ವಂದಿಸಿದರು. ಡಾ.ತಹಮೀನಾ ಕೋಲಾರ್ ಕಾರ್ಯಕ್ರಮ ನಿರೂಪಿಸಿದರು.

Share this article