ಕನ್ನಡಪ್ರಭ ವಾರ್ತೆ ಕಲಬುರಗಿ/ಕಮಲಾಪುರ,
ಕಲಬುರಗಿಯಿಂದ ಬೈಕ್ ಸವಾರರಾಗಿ ಬಂದಿದ್ದ ಈ ಜೋಡಿ ಕುರಿಕೋಟಾ ಸೇತುವೆ ಬಳಿ ಬಂದು ಪರಸ್ಪರ ಮಾತುಕತೆ ನಡೆಸಿದ್ದಾರೆ. ಅಲ್ಲೇ ಇವರಿಬ್ಬರ ನಡುವೆ ವಾಗ್ವಾದ ಶುರುವಾಗಿದೆ. ಹಾಗೆಯೇ ಮೊದಲು ಯುವತಿ ನದಿ ಹಿನ್ನೀರಿಗೆ ಹಾರಿದಾಗ ಅದನ್ನು ಕಂಡು ಯುವಕನೂ ಹಾರಿದ್ದಾನೆಂದು ಪೊಲೀಸ್ ಮೂಲಗಳು ತಿಳಿಸಿವೆ.
ಸದರಿ ಪ್ರಕರಣದಲ್ಲಿ ನದಿಗೆ ಹಾರಿ ಸಾವನ್ನಪ್ಪಿದವರನ್ನು ಮುದ್ದಡಗಾ ಗ್ರಾಮದ ಯುವಕ ಅನೀಲಕುಮಾರ ರೇವಣಸಿದ್ದಪ್ಪ ಮುಲಗೆ (27) ಹಾಗೂ ಕಲಬುರಗಿ ಮೂಲದ ಯುವತಿ ಸಂಧ್ಯಾರಾಣಿ (25) ಎಂದು ಗುರುತಿಸಲಾಗಿದ.ಸುದ್ದಿ ತಿಳಿದಾಕ್ಷಣ ಮಹಾಗಾಂವ್ ಠಾಣೆಯ ಪೊಲೀಸರು ಧಾವಿಸಿದ್ದಾರೆ. ಅಗ್ನಿ ಶಾಮಕ ಸಿಬ್ಬಂದಿ ಬೆಣ್ಣತೊರಾ ನದಿ ಹಿನ್ನೀರಿಗೆ ಇಳಿದು ಶೋಧಕಾರ್ಯ ಕೈಗೊಂಡಿದ್ದು ಅನೀಲ ಕುಮಾರನ ಶವ ಹೊರತೆಗೆದಿದ್ದರೆ. ಯುವತಿ ಸಂಧ್ಯಾರಾಣಿಯ ಶವ ಇನ್ನೂ ದೊರಕಿಲ್ಲ.
ಸಾವನ್ನಪ್ಪಿರುವ ಯುವಕ ಅನೀಲ ಕುಮಾರ್ ಕಲಬುರಗಿ ಕಪನೂರ್ ಕೈಗಾರಿಕಾ ವಸಾಹತಿನಲ್ಲಿರುವ ವಾಶಿಂಗ್ ಮಶೀನ್ ಫ್ಯಾಕ್ಟರಿಯಲ್ಲಿ ಮೆನೆಜರ್ ಎಂದು ಕೆಲಸದಲ್ಲಿದ್ದ. ಸಂಧ್ಯಾರಾಣಿ ಕಲಬುರಗಿ ದಂತ ವಿದ್ಯಾಲಯದಲ್ಲಿ ಕೆಲಸದಲ್ಲಿದ್ದಳು ಎಂದು ಗೊತ್ತಾಗಿದೆ. ಇವರಿಬ್ಬರು ಪರಸ್ಪರ ಪ್ರೇಮಿಸುತ್ತಿದ್ದರು, ಇದೇ ಕಾರಣಕ್ಕೆ ಜೊತೆಯಾಗಿ ಕುರಿಕೋಟಾ ಬೆಣ್ಣೆತೊರಾ ಹಿನ್ನೀರು ಇರುವ ಕುರಿಕೋಟಾ ಸೇತುವೆ ಬಳಿ ಬಂದಿದ್ದರು ಎನ್ನಲಾಗಿದೆ.ಅಲ್ಲಿನ ಜಗಳ ಹಾಗೂ ಇತರೆ ಬೆಳವಣಿಗೆ ಬಗ್ಗೆ ತನಿಖೆಯ ನಂತರವಷ್ಟೇ ವಿವರಗಲು ಹೊರಬರಲಿವೆ ಎಂದು ಮಹಾಗಾಂವ್ ಠಾಣೆ ಪೊಲೀಸರು ಹೇಳಿದ್ದಾರೆ. ಯುವತಿಯ ಪತ್ತೆಗಾಗಿ ಮಹಾಗಾಂವ ಪೊಲೀಸರು ಮತ್ತು ಈಜು ತಜ್ಞರು ಹುಡುಕಾಟ ನಡೆಸುತ್ತಿದ್ದಾರೆ. ಮಹಾಗಾಂವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.