ರಸ್ತೆಗೆ ಹಾಲು ಸುರಿದು ಮಾಡರಹಳ್ಳಿ ರೈತರ ಪ್ರತಿಭಟನೆ

KannadaprabhaNewsNetwork |  
Published : Feb 19, 2026, 01:45 AM IST
18ಕೆಎಂಎನ್‌ಡಿ-16ಕಾರ್ಯದರ್ಶಿ ಹಾಗೂ ಸೂಪರ್ ವೈಸರ್ ವರ್ತನೆ ಖಂಡಿಸಿ ರೈತರು ರಸ್ತೆಗೆ ಹಾಲು ಸುರಿದು ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ಕಳೆದೆರಡು ದಿನಗಳಿಂದ ಹಾಲು ಸರಬರಾಜು ಮಾಡದ ಕಾರಣ ಸುಮಾರು 960 ಲೀಟರ್ ಹಾಲು ನಷ್ಟವಾಗಿದೆ. ರೈತರಿಗೆ ಹಾಲಿನ ನಷ್ಟವನ್ನು ಅಧಿಕಾರಿಗಳು ಭರಿಸಬೇಕು. ಪ್ರತಿಭಟನೆ ಸ್ಥಳಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಬರುವವರೆಗೂ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಬಿಗಿಪಟ್ಟು ಹಿಡಿದರು.

ಕನ್ನಡಪ್ರಭ ವಾರ್ತೆ ಪಾಂಡವಪುರ

ತಾಲೂಕಿನ ಮಾಡರಹಳ್ಳಿ ಗ್ರಾಮದಲ್ಲಿ ಡೈರಿ ಕಾರ್ಯದರ್ಶಿ ಹಾಗೂ ಸೂಪರ್ ವೈಸರ್ ವರ್ತನೆ ಖಂಡಿಸಿ ರೈತರು ರಸ್ತೆಗೆ ಹಾಲು ಸುರಿದು ಪ್ರತಿಭಟನೆ ನಡೆಸಿದರು.

ಡೈರಿ ಪ್ರಾರಂಭಗೊಂಡು 15 ವರ್ಷಗಳಾಗಿದೆ. ಒಮ್ಮೆ ಚುನಾವಣೆ ನಡೆದಿರುವುದು ಬಿಟ್ಟರೆ ಆನಂತರದಲ್ಲಿ ಚುನಾವಣೆ ನಡೆಸಿಲ್ಲ. ಡೈರಿಯಿಂದ ಷೇರುದಾರರಿಗೆ ಯಾವುದೇ ಪ್ರೋತ್ಸಾಹ ಧನ ನೀಡುತ್ತಿಲ್ಲ. ಬೋನಸ್ ಹಣವನ್ನೂ ಸರಿಯಾಗಿ ಪಾವತಿಸುತ್ತಿಲ್ಲ. ಗಲಾಟೆ ಮಾಡಿದಾಗ ಕೇವಲ 4 ವರ್ಷದ ಬೋನಸ್ ಹಣ ನೀಡಿದ್ದಾರೆ. ರಾಷ್ಟ್ರೀಯ ಹಬ್ಬಗಳಿಗೆ ಶಾಲೆಗಳಿಗೂ ಡೈರಿಯಿಂದ ಹಣ ನೀಡುವುದಿಲ್ಲ. ಬೋನಸ್ ಹಣ ಏನಾಗಿದೆ ಎಂಬುದು ಗೊತ್ತಾಗಿಲ್ಲ. ಆದರೆ ಎಲ್ಲಾ ಖರ್ಚು-ವೆಚ್ಚವನ್ನು ಬರೆದಿಟ್ಟು ಆಡಿಟ್ ಮಾಡಿಸುತ್ತಾರೆ. ಇವರ ಜತೆಗೆ ಸೂಪರ್ ವೈಸರ್ ಉಷಾ ಕೂಡ ಶಾಮೀಲಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಡೇರಿ ಕಾರ್ಯದರ್ಶಿ ಚಿಕ್ಕತಾಯಮ್ಮ ಅವರು ತಮಗಿಷ್ಟ ಬಂದವರನ್ನು ನಿರ್ದೇಶಕರನ್ನಾಗಿ ಸ್ವಯಂ ಆಯ್ಕೆ ಮಾಡಿಕೊಂಡು ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ. ನೆಪ ಮಾತ್ರಕ್ಕೆ ಈಗ ಮಾ.1 ಕ್ಕೆ ಚುನಾವಣೆ ಘೋಷಿಸಿದ್ದಾರೆ. ಗಲಾಟೆ ಎಬ್ಬಿಸಿ ಡೈರಿಯನ್ನು ಸೂಪರ್ ಸೀಡ್ ಮಾಡಿಸಿ ನಂತರ ಇವರಿಗೆ ಇಷ್ಟ ಬಂದವರನ್ನು ಆಯ್ಕೆ ಮಾಡಿಕೊಳ್ಳುವ ಹುನ್ನಾರ ನಡೆಸಿದ್ದಾರೆ. ಹೀಗಾಗಿ ಚುನಾವಣೆ ಮುಂದೂಡಬೇಕು ಎಂದು ಆಗ್ರಹಿಸಿದರು.

ಹಾಲು ಸರಬರಾಜು ಮಾಡಿದ ಹಣವನ್ನು ಕಾಲ ಕಾಲಕ್ಕೆ ಬಟವಾಡೆ ಮಾಡುವುದಿಲ್ಲ ಎಂದು ಡೈರಿ ಕಾರ್ಯದರ್ಶಿ ಚಿಕ್ಕತಾಯಮ್ಮ ಹಾಗೂ ಸೂಪರ್ ವೈಸರ್ ಉಷಾ ವಿರುದ್ಧ ದೂರಿದ ರೈತರು, ಹಾಲು ಪೂರೈಸಲು ಬಂದ ರೈತರಿಂದ ಸರಿಯಾಗಿ ಹಾಲು ಪರೀಕ್ಷೆ ನಡೆಸದೆ ಗುಣಮಟ್ಟವಿಲ್ಲ ಎಂದು 12 ಜನರ ಹಾಲನ್ನು ವಾಪಸ್ ಕಳುಹಿಸುತ್ತಾರೆ. ಇದನ್ನು ಪ್ರಶ್ನಿಸುವ ಮಹಿಳೆಯರ ವಿರುದ್ಧ ದುರ್ನಡತೆ ಪ್ರದರ್ಶಿಸುವರು. ಪುರುಷರು ಪ್ರಶ್ನೆ ಮಾಡಿದರೆ ಅವರ ವಿರುದ್ಧ ಪ್ರಕರಣ ದಾಖಲಿಸುತ್ತಾರೆ ಎಂದು ಆರೋಪಿಸಿದರು.

ಕಳೆದೆರಡು ದಿನಗಳಿಂದ ಹಾಲು ಸರಬರಾಜು ಮಾಡದ ಕಾರಣ ಸುಮಾರು 960 ಲೀಟರ್ ಹಾಲು ನಷ್ಟವಾಗಿದೆ. ರೈತರಿಗೆ ಹಾಲಿನ ನಷ್ಟವನ್ನು ಅಧಿಕಾರಿಗಳು ಭರಿಸಬೇಕು. ಪ್ರತಿಭಟನೆ ಸ್ಥಳಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಬರುವವರೆಗೂ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಬಿಗಿಪಟ್ಟು ಹಿಡಿದರು. ಸಮಸ್ಯೆ ಬಗೆಹರಿಸದಿದ್ದರೆ ಜಾನುವಾರುಗಳೊಂದಿಗೆ ಪಾಂಡವಪುರ ಉಪ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು. ಅಲ್ಲಿಯೂ ಸಮಸ್ಯೆ ಬಗೆಹರಿಯದಿದ್ದರೆ ಮನ್ ಮುಲ್ ಕಚೇರಿ ಬಳಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಮುಖಂಡರಾದ ಚಲುವೇಗೌಡ, ನಾರಾಯಣಗೌಡ, ಶೇಖರ್, ಶಂಕರೇಗೌಡ, ಯೋಗಣ್ಣ, ಆನಂದ, ರಾಜಮ್ಮ, ವಿಜಯಮ್ಮ, ಲಕ್ಷ್ಮಮ್ಮ, ನಿಂಗಮ್ಮ, ಯಜಮಾನರಾದ ವೆಂಕಟೇಗೌಡ, ಮಂಜು, ಎಂ.ಎಸ್.ಜವರೇಗೌಡ ಇತರರು ಭಾಗವಹಿಸಿದ್ದರು.

-

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮದ್ಯದಂಗಡಿಯಲ್ಲಿದ್ದ ಬಾಲಕಿ ರಕ್ಷಣೆ: ಮಾಲೀಕನ ವಿರುದ್ಧ ಕೇಸ್‌
ಭಕ್ತ ಸಮೂಹದೊಂದಿಗೆ ವಿಜೃಂಭಣೆಯಿಂದ ಜರುಗಿದ ಸವದತ್ತಿಶ್ರೀ ಎಲ್ಲಮ್ಮ ದೇವಿ ಜಾತ್ರೆ