ಮಾದಿಗ ಸಮಾಜ ಶಿಕ್ಷಣಕ್ಕೆ ಒತ್ತು ನೀಡಿ ಸಬಲವಾಗಲಿ: ಮಾಜಿ ಸಚಿವ ಎಚ್.ಆಂಜನೇಯ

KannadaprabhaNewsNetwork |  
Published : May 26, 2026, 01:15 AM IST
 | Kannada Prabha

ಸಾರಾಂಶ

ಬೀರೂರುಸುಧೀರ್ಘ ಇತಿಹಾಸವಿಲ್ಲದ ಮಾದಿಗ ಸಮಾಜ ಹೋರಾಟದ ಮೂಲಕವೇ ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಬೇಕು ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದರು.

ಮರವಂಜಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಅನಾವರಣ

ಕನ್ನಡಪ್ರಭ ವಾರ್ತೆ, ಬೀರೂರು

ಸುಧೀರ್ಘ ಇತಿಹಾಸವಿಲ್ಲದ ಮಾದಿಗ ಸಮಾಜ ಹೋರಾಟದ ಮೂಲಕವೇ ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಬೇಕು ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದರು.

ಸೋಮವಾರ ತಾಲೂಕಿನ ಮರವಂಜಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಅನಾವರಣಗೊಳಿಸಿ ಮಾತನಾಡಿದರು. ಬಹಳಷ್ಟು ವರ್ಷಗಳ ಹಿಂದೆ ಮಾದಿಗ ಸಮಾಜವನ್ನು ಬಡತನ ಭಯಂಕರವಾಗಿ ಕಾಡುತ್ತಿತ್ತು. ಅದೆಷ್ಟೋ ಕುಟುಂಬಗಳು ತಿನ್ನಲು ಅನ್ನವಿಲ್ಲದೆ ಹಸಿವಿನಿಂದ ಸತ್ತ ಉದಾಹರಣೆಗಳಿವೆ. ಆದರೆ ಈಗ ಸಮಾಜದ ಪರಿಸ್ಥಿತಿ ಬದಲಾಗಿದೆ. ಊಟ,ಬಟ್ಟೆಗೆ ಬರವಿಲ್ಲ. ಹಾಗಾಗಿ ಸಮಾಜದವರು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ಅಂಬೇಡ್ಕರ್ ಆದರ್ಶಗಳನ್ನು ಯುವಕರು ಮೈಗೂಡಿಸಿಕೊಳ್ಳಬೇಕು. ಕುಡಿತ ಮತ್ತಿತರೆ ದುಶ್ಚಟಗಳಿಂದ ಸಮಾಜ ಮುಕ್ತವಾಗಬೇಕು. ಶಿಕ್ಷಣ ಪಡೆಯಿರಿ ಮತ್ತು ಸಂಘಟಿತರಾಗಿ ಎಂದು ಎಲ್ಲಾ ಸಮುದಾಯಗಳಿಗೂ ಅಂಬೇಡ್ಕರ್ ಕರೆ ಕೊಟ್ಟರು. ಇದನ್ನು ಇತರೆ ಸಮಾಜದವರು ಕೇವಲ ಮಾದಿಗ ಸಮಾಜಕ್ಕೆ ಅಂಬೇಡ್ಕರ್ ಕರೆ ಕೊಟ್ಟಿದ್ದಾರೆ ಎಂದು ತಪ್ಪಾಗಿ ಅರ್ಥೈಸಿ ಕೊಂಡರು. ಆದರೆ ಇದೀಗ ಎಲ್ಲಾ ಸಮುದಾಯಗಳಿಗೂ ಅಂಬೇಡ್ಕರ್ ಅರ್ಥವಾಗಿದ್ದಾರೆ ಎಂದರು.

ನ್ಯಾಯಯುತವಾಗಿ ಮೀಸಲಾತಿ ದೊರೆಯದ ಸಮುದಾಯಕ್ಕೆ ಒಳ ಮೀಸಲಾತಿ ನೀಡಬಹುದು ಎಂದು ಸುಪ್ರೀಂಕೋರ್ಟ ಹೇಳಿತ್ತು. ಇದನ್ನೇ ಮಾನದಂಡವಾಗಿಟ್ಟುಕೊಂಡ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಒಳ ಮೀಸಲಾತಿ ಜಾರಿಗೊಳಿಸಿದೆ. 15 ಕ್ಕಿಂತ ಕಡಿಮೆ ಹುದ್ದೆಗಳನ್ನು ಭರ್ತಿ ಮಾಡುವ ಸಂದರ್ಭ ಒಳ ಮೀಸಲಾತಿ ಅನ್ವಯಿಸುವುದಿಲ್ಲ ಎಂಬ ನಿಯಮವಿದೆ. ಈ ನ್ಯೂನ್ಯತೆ ಸರಿಪಡಿಸುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

ಶಾಸಕ ಕೆ.ಎಸ್.ಆನಂದ್ ಮಾತನಾಡಿ ಪಟ್ಟಣಗಳಲ್ಲಿ ಮಾತ್ರ ಅಂಬೇಡ್ಕರ್ ಪ್ರತಿಮೆ ಕಾಣಬಹುದಾಗಿತ್ತು. ಆದರೆ ಇದೇ ಮೊದಲ ಬಾರಿಗೆ ಗ್ರಾಮೀಣ ಭಾಗ ಮರವಂಜಿಯಲ್ಲಿ ಎಲ್ಲಾ ಸಮುದಾಯದವರ ಸಹಕಾರದೊಂದಿಗೆ ಅಂಬೇಡ್ಕರ್ ಪ್ರತಿಮೆ ಸ್ಥಾಪಿಸಲಾಗಿದೆ. ಅಂಬೇಡ್ಕರ್ ಇಲ್ಲಿನ ಯುವಕರಿಗೆ ಸ್ಫೂರ್ತಿಯಾಗಬೇಕು. ಪ್ರತಿಮೆ ಅನಾವರಣಕ್ಕೆ ಮಾಜಿ ಸಚಿವ ಎಚ್. ಆಂಜನೇಯ ಮತ್ತು ಸಂಸದ ಬಿ.ಎನ್.ಚಂದ್ರಪ್ಪ ಅವರನ್ನು ಕರೆಸಿರುವುದು ಸಮಾಜಕ್ಕೆ ಅವರ ಮೇಲಿರುವ ಪ್ರೀತಿ ಮತ್ತು ವಿಶ್ವಾಸವನ್ನು ತೋರಿಸುತ್ತದೆ. ಯಾವುದೇ ಸಮಾಜ ತಮ್ಮ ನಾಯಕರ ಮೇಲೆ ಪ್ರೀತಿ ವಿಶ್ವಾಸ ತೋರಿಸಿದಾಗ ಸಮಾಜದ ಪರವಾಗಿ ಹೋರಾಟ ಮಾಡಲು ನಾಯಕರಲ್ಲಿ ಮತ್ತಷ್ಟು ಹುಮ್ಮಸ್ಸು ಮೂಡುತ್ತದೆ. ವೈವಿಧ್ಯತೆಯಿಂದ ಕೂಡಿದ ಭಾರತಕ್ಕೆ ಸಂವಿಧಾನ ರಚಿಸುವುದು ಅಷ್ಟು ಸುಲಭದ ಕೆಲಸವಾಗಿರಲಿಲ್ಲ. ಆದರೆ ಅಂಬೇಡ್ಕರ್ ಎಲ್ಲಾ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಒದಗಿಸುವ ಸಂವಿಧಾನವನ್ನು ದೇಶಕ್ಕೆ ಕೊಟ್ಟರು. ಯಾವುದೇ ಸರ್ಕಾರದಲ್ಲಿ ವಿಭಿನ್ನ ಅಭಿಪ್ರಾಯಗಳಿರುತ್ತವೆ. ಆದರೆ ಎಲ್ಲರ ಸಹಮತ ಪಡೆದು ಒಳಮೀಸಲಾತಿ ಜಾರಿ ಮಾಡಿಸಿದ ಕೀರ್ತಿ ಎಚ್.ಆಂಜನೇಯ ಅವರಿಗೆ ಸಲ್ಲುತ್ತದೆ ಎಂದರು.

ಚಿತ್ರದುರ್ಗದ ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಜಿಪಂ ಮಾಜಿ ಸದಸ್ಯ ಶರತ್ ಕೃಷ್ಣಮೂರ್ತಿ, ದಲಿತ ಮುಖಂಡರಾದ ಪ್ರಮೋದ್, ಶೂದ್ರ ಶ್ರೀನಿವಾಸ್,ಶೋಭ,ಭೋಗಪ್ಪ, ಮಾದಾರ ಮಹಾಸಭಾದ ತಾಲೂಕು ಅಧ್ಯಕ್ಷ ಆರ್.ಜಿ.ಕೃಷ್ಣಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಎಂ.ಕೆ.ರಂಗಪ್ಪ,ನರಸಿಂಹಪ್ಪ, ಶೂದ್ರ ಶ್ರೀನಿವಾಸ್ ಮತ್ತಿತರರು ಉಪಸ್ಥಿತರಿದ್ದರು.

-- ಕೋಟ್‌ --

ಸಂಘಟನೆ ಹೆಸರಲ್ಲಿ ದಲಿತ ಸಮುದಾಯ ಇತರೆ ಸಮುದಾಯಗಳ ಜತೆ ಸಂಘರ್ಷಕ್ಕೆ ಇಳಿಯಬಾರದು.ಇತರೆ ಸಮುದಾಯಗಳ ಜತೆ ಸಹಬಾಳ್ವೆ ನಡೆಸಬೇಕು. ಕೇವಲ ನಮ್ಮ ಒಂದು ಸಮಾಜದದಿಂದ ನಾವು ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ಅಭಿವೃದ್ಧಿ ಹೊಂದಲು ಇತರೆ ಸಮುದಾಯಗಳ ಸಹಕಾರ ಅಗತ್ಯ

- ಬಿ.ಎನ್.ಚಂದ್ರಪ್ಪ,ಮಾಜಿ ಸಂಸದ , ಚಿತ್ರದುರ್ಗ

-- ಕೋಟ್‌ --

2013 ರಲ್ಲಿ ರಚನೆಯಾದ ಕಾಂಗ್ರೆಸ್ ಸರ್ಕಾರದಲ್ಲಿ ಆರ್.ವಿ.ತಿಮ್ಮಾಪುರ ಅವರನ್ನು ವಿಧಾನ ಪರಿಷತ್ತು ಸದಸ್ಯರನ್ನಾಗಿ ಆಯ್ಕೆ ಮಾಡಿ ಮಂತ್ರಿ ಮಂಡಲಕ್ಕೆ ಸೇರ್ಪಡೆ ಮಾಡಿಕೊಳ್ಳಲಾಯಿತು. ಅದೇ ರೀತಿ ಹೋರಾಟಗಾರರಾದ ಎಚ್.ಆಂಜನೇಯ ಅವರನ್ನು ವಿಧಾನ ಪರಿಷತ್ತಿಗೆ ಆಯ್ಕೆ ಮಾಡಿ ಮಂತ್ರಿ ಮಂಡಲಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸುತ್ತೇನೆ.

- ಕೆ.ಎಸ್.ಆನಂದ್,ಶಾಸಕ,ಕಡೂರು

--ಬಾಕ್ಸ್ ಸುದ್ದಿ --

2023 ರ ವಿದಾನಸಭೆ ಚುನಾವಣೆಯಲ್ಲಿ ನನ್ನ ಸ್ವಾಭಿಮಾನವೇ ನನ್ನ ಸೋಲಿಗೆ ಕಾರಣವಾಯಿತು. ಕೆಲವರನ್ನು ಭೇಟಿ ಮಾಡುವಂತೆ ಸಲಹೆ ಬಂದಿತ್ತು. ಸ್ವಾಭಿಮಾನಿಯಾದ ನಾನು ಅವರನ್ನು ಭೇಟಿ ಮಾಡಲು ನಿರಾಕರಿಸಿದೆ. ಅವರನ್ನು ಭೇಟಿ ಮಾಡಬೇಕಿತ್ತು ಎಂದು ಈಗ ಅನ್ನಿಸುತ್ತಿದೆ. ಅದರ ಜತೆಗೆ ಚುನಾವಣೆ ಪ್ರಚಾರಕ್ಕೆ ಹೋದಾಗ ಹಳ್ಳಿಗಳಲ್ಲಿ ಸಿಡಿಸುತ್ತಿದ್ದ ಪಟಾಕಿಗಳು, ಮುಂದಿನ ಉಪ ಮುಖ್ಯಮಂತ್ರಿ ಆಂಜನೇಯ ಎಂದು ಜನರು ಕೂಗುತ್ತಿದ್ದದ್ದನ್ನು ನೋಡಿ ನಾನು ಗೆದ್ದು ಬಿಟ್ಟಿದ್ದೇನೆ ಎಂಬ ಭ್ರಮೆ ಮೂಡಿತ್ತು. ಆದರೆ ಚುನಾವಣೆ ಫಲಿತಾಂಶ ಬಂದಾಗ ನಾನು ಸೋತಿದ್ದೆ. ಆದರೆ ಹೋರಾಟಗಾರನಾದ ನನಗೆ ಸೋಲು ಗೆಲುವು ಎರಡೂ ಒಂದೇ ಎಂದು ಎಚ್.ಆಂಜನೇಯ ಹೇಳಿದರು.

ಫೋಟೊ

25 ಬೀರೂರು 1

ಕಡೂರು ತಾಲೂಕಿನ ಮರವಂಜಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಅಂಬೇಡ್ಕರ್ ಪ್ರತಿಮೆಯನ್ನು ಮಾಜಿ ಸಚಿವ ಎಚ್.ಆಂಜನೇಯ ಅನಾವರಣಗೊಳಿಸಿದರು. ಮಾಜಿ ಸಂಸದ ಬಿ.ಎನ್.ಚಂದ್ರಪ್ಪ,ಶಾಸಕ ಕೆ.ಎಸ್.ಆನಂದ್ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೋಡಲ್ ಅಧಿಕಾರಿಗಳಿಂದ ಕಾಮಗಾರಿಗಳ ಪರಿಶೀಲನೆ
ಅನುವಾದಕ್ಕೆ ತಂತ್ರಜ್ಞಾನ ಪೂರಕವೇ ಹೊರತು ಪರ್ಯಾಯವಲ್ಲ