ರಾಣಿಬೆನ್ನೂರು: ರಾಜ್ಯದಲ್ಲಿಯೇ ಪ್ರಪ್ರಥಮ ಬಾರಿಗೆ ತಾಲೂಕಿನ ಅರೇಮಲ್ಲಾಪುರದ ಶರಣಬಸವೇಶ್ವರ ಮಹಾಸಂಸ್ಥಾನದಲ್ಲಿ ಮುಂದಿನ ವರ್ಷ ಮಾರ್ಚ್ ಒಳಗೆ 5 ಅಡಿ ಎತ್ತರದ ನಿಂತ ಮಹಾಗಣಪತಿ ಹಾಗೂ 4 ಅಡಿ ಎತ್ತರದ ಸರ್ಪ ಮೂರ್ತಿ ಮತ್ತು ಕೇರಳದ ಭದ್ರಕಾಳಿ(ಭಗವತಿ) ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುವುದು ಎಂದು ಶ್ರೀಮಠದ ಪೀಠಾಧಿಪತಿ ಡಾ. ಪ್ರಣವಾನಂದ ಸ್ವಾಮೀಜಿ ನುಡಿದರು.
ಸಂಕಲ್ಪದ 108 ಮೂರ್ತಿಗಳ ಪೈಕಿ ಉಳಿದ 72 ಮೂರ್ತಿಗಳನ್ನು ವರ್ಷದ ಒಳಗೆ ಪ್ರತಿಷ್ಠಾಪಿಸಲಾಗುವುದು. ಗರ್ಭಗುಡಿ ಒಳಗೆ ಹಾಗೂ ಹೊರಗೆ ಮೂರ್ತಿ ಪ್ರತಿಷ್ಠಾಪಿಸಲಾಗುವುದು. ಮನುಷ್ಯನ ಎಲ್ಲ ಸಮಸ್ಯೆಗಳಿಗೆ ಪ್ರತ್ಯಂಗಿರಾದೇವಿ ಹೋಮವೊಂದೇ ಮಾರ್ಗದರ್ಶನ ಹಾಗೂ ಪರಿಹಾರವಾಗಿದೆ. ಈ ಹೋಮವನ್ನು ದೇವಿ ಉಪಾಸಕರು, ದೇವಿಯ ಆರಾಧಕರು, ಮಾರ್ಗದರ್ಶಕರು ಮಾತ್ರ ನಡೆಸಬಹುದು. ಈ ಹೋಮ ಮಾಡುವುದರಿಂದ ಮಾನಸಿಕ ಶಾಂತಿ, ಸ್ಥಿರತೆ ಸಿಗುವುದು. ಮನುಷ್ಯನಲ್ಲಿ ನಕಾರಾತ್ಮಕ ಶಕ್ತಿ ಅಥವಾ ದುಷ್ಟ ಶಕ್ತಿ ನಮಗೆ ತೊಂದರೆಯನ್ನು ನೀಡುವುದಿಲ್ಲ. ಪ್ರತ್ಯಂಗಿರಾ ಹೋಮವನ್ನು ಯಾವ ಸ್ಥಳದಲ್ಲಿ ಮಾಡುತ್ತೇವೋ ಆ ಸ್ಥಳದಲ್ಲಿ ಎಂದಿಗೂ ನಕಾರಾತ್ಮಕ ಶಕ್ತಿಗಳು ಪ್ರವೇಶ ಮಾಡುವುದಿಲ್ಲ. ನಮ್ಮ ಸುತ್ತಲಿನ ನಕಾರಾತ್ಮಕ ಶಕ್ತಿಗಳು, ನಮ್ಮೆಲ್ಲ ದುರಾದೃಷ್ಟಗಳು ದೂರವಾಗುತ್ತದೆ. ಕೆಟ್ಟ ಕಣ್ಣಿನ ದೃಷ್ಟಿ ನಾಶವಾಗುವುದು. ಅಪಘಾತಗಳನ್ನು ಮತ್ತು ಕಾಯಿಲೆಗಳನ್ನು ತಡೆಗಟ್ಟಲು, ಉತ್ತಮ ಆರೋಗ್ಯವನ್ನು, ಸಂಪತ್ತನ್ನು, ಶಾಂತಿ ಮತ್ತು ಸಮೃದ್ಧಿಯನ್ನು ಪಡೆಯಲು ಈ ಹೋಮವನ್ನು ನೆರವೇರಿಸಲಾಗುತ್ತದೆ ಎಂದರು.
ನೆಗಳೂರ ಸಂಸ್ಥಾನಮಠದ ಗುರುಶಾಂತೇಶ್ವರ ಶಿವಾಚಾರ್ಯರು, ಐರಣಿಯ ಪ್ರಭುಲಿಂಗ ಸ್ವಾಮಿಗಳು, ಚಿತ್ರದುರ್ಗದ ಕುಂಬಾರ ಗೊಂಡಯ್ಯ ಸ್ವಾಮಿಗಳು, ಶ್ರೀಮಠದ ಉತ್ತರಾಧಿಕಾರಿ ಶರಣಬಸವ ವೇದಪ್ರಕಾಶ ನೇತೃತ್ವ ವಹಿಸಿದ್ದರು. ಮಾಧ್ವಶ್ರೀಮೀರಾ, ಎಲ್ಲಪ್ಪ ಸುರ್ವೆ, ಮಂಜುನಾಥ ಹಲವಾಗಲ, ಗಾಳೆಪ್ಪ ಮರಿಯಮ್ಮನವರ, ಬಸವಂತಪ್ಪ ಕೊಪ್ಪದ, ನಾಗರಾಜ ನಾಗರಜ್ಜಿ, ನಿಂಗಪ್ಪ ಹಲವಾಗಲ, ಮಹಾಂತೇಶ ಪ್ರತಾಪ, ಕೇರಳ ಹಾಗೂ ರಾಜ್ಯದ ವಿವಿಧ ಜಿಲ್ಲೆಗಳಿಂದ ಸಹಸ್ರಾರು ಭಕ್ತರು ಹರ, ಗುರು, ಚರಮೂರ್ತಿಗಳು ಇದ್ದರು.ವಿಶ್ವಗುರು ಬಸವಣ್ಣನವರ 892ನೇ ಜಯಂತಿ ಆಚರಣೆಹಾವೇರಿ: ವಿಶ್ವಕ್ಕೆ ಅನುಭವ ಮಂಟಪವನ್ನು ನೀಡಿದ ಮಹಾನ್ ಮಾನವತಾವಾದಿ ಸಮಾನತೆಯ ಹರಿಕಾರ ವಿಶ್ವಗುರು ಬಸವಣ್ಣನವರ 892ನೇ ಜಯಂತಿಯನ್ನು ಹಾವೇರಿಯ ಬಸವ ಭವನದಲ್ಲಿ ಆಚರಿಸಲಾಯಿತು.