ಕನ್ನಡಪ್ರಭ ವಾರ್ತೆ, ಹನೂರು
ಮಲೆ ಮಹದೇಶ್ವರ ವನ್ಯಜೀವಿಧಾಮವನ್ನು ಹುಲಿ ಸಂರಕ್ಷಿತ ಅರಣ್ಯ ಪ್ರದೇಶವೆಂದು ಘೋಷಣೆ ಮಾಡಬಾರದೆಂದು ಪೊನ್ನಾಚಿ ಗ್ರಾಪಂ ವ್ಯಾಪ್ತಿಯ ಸುತ್ತಮುತ್ತಲಿನ ಗ್ರಾಮಸ್ಥರು ಗುರವಾರ ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.ತಾಲೂಕಿನ ಪೊನ್ನಾಚಿ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಅಸ್ತೂರು, ಮರೂರು, ಗ್ರಾಮಸ್ಥರೆಲ್ಲರೂ ಸೇರಿ ಗ್ರಾಮ ಪಂಚಾಯಿತಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಅರಣ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಪೊನ್ನಾಚಿ ಗ್ರಾಮದ ಶಿವಣ್ಣ ಮಾತನಾಡಿ, ಹುಲಿ ಸಂರಕ್ಷಿತ ಅರಣ್ಯ ಪ್ರದೇಶವೆಂದು ಘೋಷಣೆಯಾದರೆ ನಮ್ಮ ಜನರ ಜೀವನ ಅತ್ಯಂತ ದುಸ್ತರವಾಗಲಿದೆ. ನಮ್ಮ ಸಾಂಪ್ರದಾಯಿಕ ಆಚರಣೆ ವಿಚಾರಗಳೆಲ್ಲವೂ ಕೂಡ ಮರೆಯಾಗಲಿದೆ. ಜೊತೆಗೆ ಸಮಯದ ಕಟ್ಟುಪಾಡಿನಿಂದ ಹೊರ ಬರಬೇಕಾಗುತ್ತದೆ ಎಂದರು.
ಅರಣ್ಯದಂಚಿನ ಕುಗ್ರಾಮದಲ್ಲಿ ವಾಸ ಮಾಡುತ್ತಿರುವ ನಾವು ಜಾನುವಾರುಗಳನ್ನು ನಂಬಿ ಬದುಕುತ್ತಿದ್ದೇವೆ. ಈ ಯೋಜನೆ ಜಾರಿಯಾದಲ್ಲಿ ಅರಣ್ಯದೊಳಗೆ ಹಸುವಿನ ಹೆಜ್ಜೆ ಇಡಲು ಬಿಡುವುದಿಲ್ಲ, ನಮ್ಮ ಗ್ರಾಮಗಳಿಗೆ ಪ್ರಸ್ತುತ ಕೆಲಸದ ನಿಮಿತ್ತ ನಾವು ಹೋಗಬಹುದು ಬರಬಹುದು. ಆದರೆ ಹುಲಿ ಸಂರಕ್ಷಿತ ಅರಣ್ಯ ಪ್ರದೇಶವಾದಲ್ಲಿ ನಮ್ಮ ಕೆಲಸ ಕಾರ್ಯಗಳು ಕೂಡ ಸಂಚಾರ ಮಾಡಲಾಗದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಮುಖ್ಯವಾಗಿ ಜನರ ಭಾವನೆಗಳಿಗೆ ಧಕ್ಕೆ ಉಂಟಾಗಲಿದೆ,ಸರ್ಕಾರದ ಮಟ್ಟಕ್ಕೆ ಅಧಿಕಾರಿಗಳು ಸ್ಥಳೀಯವಾಗಿ ವರದಿ ಪಡೆದು ಕುಗ್ರಾಮಗಳಲ್ಲಿ ಜನರ ಅಭಿಪ್ರಾಯ ಪಡೆದು ಅನಂತರ ಸರ್ಕಾರದ ಮಟ್ಟಕ್ಕೆ ವರದಿ ನೀಡಬೇಕು. ಅಧಿಕಾರಿಗಳು ನೇರವಾಗಿ ವರದಿಯನ್ನು ನೀಡಿರುವುದು ಅತ್ಯಂತ ಖಂಡನೀಯ. ಈ ಹುಲಿ ಸಂರಕ್ಷಿತ ಅರಣ್ಯ ಪ್ರದೇಶ ಯೋಜನೆಗೆ ನಮ್ಮೆಲ್ಲರ ವಿರೋಧ ಇದೆ ಎಂದರು.
ಇದೆ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು, ಪೊನ್ನಾಚಿ ಸ್ನೇಹ ಜೀವಿ ರಾಜ್, ಗ್ರಾಮದ ಪೊನ್ನಾಚಿ ಮಣಿಗಾರ ಪಿ ಕೆ ಬಸವರಾಜ್, ಗೌಡ್ರು ಶಿವಣ್ಣ,ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಕೇಶವಮೂರ್ತಿ, ಶಿವಬಸಪ್ಪ, ಪಿ. ಕೆ. ಬಾಲಸುಬ್ರಮಣ್ಯಂ, ರಂಗಮಾದಪ್ಪ,ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.