ಮಹಾಲಕ್ಷ್ಮೀ ಬ್ಯಾಂಕ್‌ ವಂಚನೆ: 14 ಜನರ ಆಸ್ತಿ ಮುಟ್ಟುಗೋಲು

KannadaprabhaNewsNetwork |  
Published : Sep 24, 2024, 01:52 AM IST
ಎಸ್ಪಿ ಭೀಮಾಶಂಕರ ಗುಳೇದ | Kannada Prabha

ಸಾರಾಂಶ

ಗೋಕಾಕ ಮಹಾಲಕ್ಷ್ಮೀ ಕೋ ಆಪರೇಟಿವ್‌ ಬ್ಯಾಂಕ್‌ನಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ 14 ಆರೋಪಿಗಳ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಭೀಮಾಶಂಕರ ಗುಳೇದ ಮಾಹಿತಿ ನೀಡಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಗೋಕಾಕ ಮಹಾಲಕ್ಷ್ಮೀ ಕೋ ಆಪರೇಟಿವ್‌ ಬ್ಯಾಂಕ್‌ನಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ 14 ಆರೋಪಿಗಳ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಭೀಮಾಶಂಕರ ಗುಳೇದ ಮಾಹಿತಿ ನೀಡಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾಲಕ್ಷ್ಮೀ ಅರ್ಬನ್ ಕೋ ಆಪ್‌ ಕ್ರೆಡಿಟ್‌ ಬ್ಯಾಂಕಿನ ಈ ಅವ್ಯವಹಾರದಲ್ಲಿ 14 ಆರೋಪಿಗಳ ಪೈಕಿ ಐವರು ಬ್ಯಾಂಕ್ ಸಿಬ್ಬಂದಿಯೇ ಆಗಿದ್ದಾರೆ. ಅದರಲ್ಲಿ ಸಾಗರ ಹನಮಂತ ಸಬಕಾಳೆ ಮುಖ್ಯ ಆರೋಪಿಯಾಗಿದ್ದಾನೆ. ಅವ್ಯವಹಾರಕ್ಕೆ ಸಂಬಂಧಿಸಿದಂತೆ ಗೋಕಾಕ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಪ್ರಕರಣದಲ್ಲಿ ಒಟ್ಟು 14 ಜನರು ಭಾಗಿಯಾಗಿದ್ದಾರೆ. ಅವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ತಿಳಿಸಿದರು.

ಬ್ಯಾಂಕ್ ಅವ್ಯವಹಾರದಲ್ಲಿ ಸಾಗರ ಸಬಕಾಳೆ ಎ1 ಆರೋಪಿಯಾಗಿದ್ದು, ಈತನ ಆಸ್ತಿ ಮೌಲ್ಯ ₹ 6. 97 ಕೋಟಿಯಾಗಿದೆ. ಇದನ್ನು ಠೇವಣಿಯಿಟ್ಟು ಬೇರೆ ಬೇರೆಯವರ ಹೆಸರಿನಲ್ಲಿ ₹81 ಕೋಟಿ ಸಾಲ ಪಡೆದಿದ್ದಾನೆ. ಮಹಾಲಕ್ಷ್ಮೀ ಬ್ಯಾಂಕಿನ ವಹಿವಾಟು ನಾಲ್ಕು ಬಾರಿ ಆಡಿಟ್ ಆಗಿದೆ. ಆದರೂ ಈ ಅವ್ಯವಹಾರದ ಬಗ್ಗೆ ಸಣ್ಣ ಅಂಶವನ್ನೂ ಕಂಡು ಹಿಡಿಯಲು ಸಾಧ್ಯವಾಗಿರಲಿಲ್ಲ ಎಂದು ಹೇಳಿದರು.ಈ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಬ್ಯಾಂಕ್ ಅಧಿಕಾರಿಗಳ ಜೊತೆಗೆ ಪೊಲೀಸ್ ಸಿಬ್ಬಂದಿಯೂ ಸೇರಿ ಒಟ್ಟು 14 ಆರೋಪಿಗಳ ಸುಮಾರು 112 ಆಸ್ತಿಗಳನ್ನು ಜಪ್ತಿ ಮಾಡಲಾಗಿದೆ ಎಂದರು. ಈ ಆಸ್ತಿಯ ಒಟ್ಟು ಸರ್ಕಾರಿ ಮೌಲ್ಯ ₹13.17 ಕೋಟಿ ಆಗಿದೆ. ಮಾರುಕಟ್ಟೆ ಮೌಲ್ಯ ₹50 ಕೋಟಿಗಳಷ್ಟಿದೆ ಎಂದು ಹೇಳಿದರು.

2021ರಿಂದ 2024ರವರೆಗೆ 11 ಆರೋಪಿಗಳು ಈ ಬ್ಯಾಂಕಿನಲ್ಲಿ ₹6 ಕೋಟಿ ಠೇವಣಿಯಿಟ್ಟು, ಬೇರೆ ಬೇರೆಯವರ ಹೆಸರಿನಲ್ಲಿ ₹81 ಕೋಟಿ ಸಾಲ ಪಡೆದಿದ್ದಾರೆ. ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಪತ್ತೆಗೆ 7 ತಂಡ ರಚಿಸಲಾಗಿದೆ. ಪ್ರಕರಣವನ್ನು ಸಿಐಡಿಗೆ ಹಸ್ತಾಂತರಿಸಲಾಗುವುದು. ಬ್ಯಾಂಕಿನಲ್ಲಿ ಠೇವಣಿ ಇಟ್ಟಿರುವ ಗ್ರಾಹಕರು ಯಾವುದೇ ಕಾರಣಕ್ಕೂ ಆತಂಕ ಪಡುವ ಅಗತ್ಯವಿಲ್ಲ. ಬ್ಯಾಂಕಿನ ಆಡಳಿತ ಮಂಡಳಿ ಗ್ರಾಹಕರಿಗೆ ಠೇವಣಿ ಹಣ ಮರಳಿಸಲು ನಿರ್ಧರಿಸಿದೆ ಎಂದು ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತರಕಾರಿಯಲ್ಲಿ ಹಾನಿಕಾರಕ ಅಂಶ ಪತ್ತೆ: ಶೀಘ್ರ ಸೂಕ್ತ ಮಾರ್ಗಸೂಚಿ
ಸಿಲಿಂಡರ್‌ಗೆ ಹಾಹಾಕಾರ: ಊಟ, ತಿಂಡಿ ಹರೋಹರ!