ಶಿವಮೊಗ್ಗ: ಇ-ಆಸ್ತಿ ನೋಂದಣಿ ವಿಚಾರದಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆ ಸಂಪೂರ್ಣ ವಿಫಲಗೊಂಡಿದೆ. ಈ ಹಿನ್ನೆಲೆಯಲ್ಲಿ ಇ-ಆಸ್ತಿ ತಂತ್ರಾಂಶವನ್ನು ಕಡ್ಡಾಯ ಮಾಡಿರುವುದನ್ನು ಕಂದಾಯ ಇಲಾಖೆ ಕನಿಷ್ಠ ಆರು ತಿಂಗಳು ಮುಂದೂಡಬೇಕು ಎಂದು ಶಿವಮೊಗ್ಗ ನಾಗರಿಕ ಹಿತರಕ್ಷಣಾ ವೇದಿಕೆಯ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕೆ.ವಿ.ವಸಂತಕುಮಾರ್ ಆಗ್ರಹಿಸಿದರು.
ಶಿವಮೊಗ್ಗ: ಇ-ಆಸ್ತಿ ನೋಂದಣಿ ವಿಚಾರದಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆ ಸಂಪೂರ್ಣ ವಿಫಲಗೊಂಡಿದೆ. ಈ ಹಿನ್ನೆಲೆಯಲ್ಲಿ ಇ-ಆಸ್ತಿ ತಂತ್ರಾಂಶವನ್ನು ಕಡ್ಡಾಯ ಮಾಡಿರುವುದನ್ನು ಕಂದಾಯ ಇಲಾಖೆ ಕನಿಷ್ಠ ಆರು ತಿಂಗಳು ಮುಂದೂಡಬೇಕು ಎಂದು ಶಿವಮೊಗ್ಗ ನಾಗರಿಕ ಹಿತರಕ್ಷಣಾ ವೇದಿಕೆಯ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕೆ.ವಿ.ವಸಂತಕುಮಾರ್ ಆಗ್ರಹಿಸಿದರು.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯಾದ್ಯಂತ ಇ-ಆಸ್ತಿ ತಂತ್ರಾಂಶದಲ್ಲಿ ಆಸ್ತಿಗಳನ್ನು ಅಳವಡಿಸಲು ಸೂಕ್ತ ನಿರ್ದೇಶನ ನೀಡಲಾಗಿದ್ದು, ಈ ನಿರ್ದೇಶನದ ಪ್ರಕಾರ ಕೆಎಂಡಿಎಸ್ (ಕರ್ನಾಟಕ ಮುನ್ಸಿಪಲ್ ಡೇಟಾ ಸೊಸೈಟಿ)ಯಿಂದ ಅಭಿವೃದ್ಧಿಪಡಿಸಿದ ತಂತ್ರಾಂಶದಲ್ಲಿಯೇ ಆಸ್ತಿಗಳ ನೋಂದಣಿಗಳ ಗಣಕೀಕರಣಗೊಳಿಸಲು ಇಲಾಖೆಯಿಂದ ಸೂಚಿಸಲಾಗಿತ್ತು. ಆದರೆ ಮಹಾನಗರ ಪಾಲಿಕೆ ಈ ನಿರ್ದೇಶನ ಪಾಲಿಸದೆ ಬೇರೆ ಬೇರೆ ತಂತ್ರಾಂಶಗಳಲ್ಲಿ ಅಂದರೆ ಎಂಆರ್ಸಿ ತಂತ್ರಾಂಶದಲ್ಲಿ ನಮೂದು ಮಾಡಿತ್ತು. ಇದು ಅನಧೀಕೃತ ತಂತ್ರಾಂಶವಾಗಿದ್ದು ಇಲ್ಲಿ ಮಾಡಿರುವ ನಮೂನೆ-2, ನಮೂನೆ-3ನ್ನು ಕಂದಾಯ ಇಲಾಖೆಯ ಕಾವೇರಿ ತಂತ್ರಾಂಶಕ್ಕೆ ಅಳವಡಿಸಲು ಸಾಧ್ಯವಾಗದೇ ಇರುವುದರಿಂದ ಇದುವರೆಗೂ ಇ-ಆಸ್ತಿ ಯೋಜನೆ ಅಡಿಯಲ್ಲಿ ಪಡೆದ ನಮೂನೆ 2, 3 ವ್ಯರ್ಥವಾಗಿದೆ ಎಂದು ದೂರಿದರು.ಶಿವಮೊಗ್ಗ ಮಹಾನಗರ ಪಾಲಿಕೆ ಇ-ಆಸ್ತಿಗೆ ಅಗತ್ಯವಾದ ನಮೂನೆ 2, 3ನ್ನು ನೀಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಆಯುಕ್ತರೂ ಸೇರಿದಂತೆ ಇಲ್ಲಿನ ಅಧಿಕಾರಿ ವರ್ಗ ಇ-ಆಸ್ತಿ ನೋಂದಣಿ ವಿಚಾರದಲ್ಲಿ ತಲೆ ಕೆಡಿಸಿಕೊಂಡಂತೆ ಕಾಣಿಸುತ್ತಿಲ್ಲ. ಮಹಾನಗರ ಪಾಲಿಕೆಯ ಆಡಳಿತಕ್ಕೇ ದೊಡ್ಡ ಸರ್ಜರಿಯ ಅವಶ್ಯಕತೆ ಇದೆ ಎಂದರು.ಇದಕ್ಕೆ ಸಂಬಂಧಿಸಿದಂತೆ ನಾವು ಸಾರ್ವಜನಕ ಸಭೆಯನ್ನು, ಅಧಿಕಾರಿಗಳ ಸಭೆಯನ್ನು ಮಾಡಿದ್ದೇವೆ. ಇ-ಆಸ್ತಿಗೆ ಸಂಬಂಧಿಸಿದಂತೆ ದಾಖಲೆಗಳೆಲ್ಲವೂ ಬೇಕು ಎಂದೇನೂ ಇಲ್ಲ. ಆದರೆ, ಪಾಲಿಕೆಯವರು ವಿನಾಕಾರಣ ಸಾರ್ವಜನಿಕರಿಗೆ ಬೇಡವಾದ ದಾಖಲೆಗಳನ್ನು ಬೇಕು ಎಂದು ಕೇಳುತ್ತಿದ್ದಾರೆ. ಇಷ್ಟು ಹೊತ್ತಿಗೆ ಸಾರ್ವಜನಿಕರಿಗೆ ಯಾವ ಖರ್ಚೂ ಇಲ್ಲದೆ ಕೇವಲ 100 ರು. ಶುಲ್ಕದಲ್ಲಿ ಇ-ಖಾತೆಯನ್ನು ಅಧಿಕಾರಿಗಳು ನೀಡಬಹುದಿತ್ತು. ಆದರೆ ಪಾಲಿಕೆಯ ಅಧಿಕಾರಿಗಳ ವೈಖರಿ ನೋಡಿದರೆ ಅವರು ಇ-ಆಸ್ತಿ ನೀಡಲು ಸಂಪೂರ್ಣ ವಿಫಲವಾಗಿದ್ದಾರೆ. ಶಿವಮೊಗ್ಗದಲ್ಲಿ ಸುಮಾರು 1.7 ಲಕ್ಷ ಖಾತೆದಾರರಿದ್ದಾರೆ. ಇದರಲ್ಲಿ ಶೇ.30ರಷ್ಟು ಖಾತೆಗಳು ಕೂಡ ಇ-ಆಸ್ತಿ ಪಡೆದಿಲ್ಲ ಎಂದು ಹೇಳಿದರು.ಈಗ ನೀಡಿರುವ ಇ-ಆಸ್ತಿ ದಾಖಲೆ ಕೂಡ ಅಧೀಕೃತ ತಂತ್ರಾಂಶದಿಂದ ನೀಡಿರುವ ದಾಖಲೆ ಅಲ್ಲವೇ ಅಲ್ಲ. ಒಟ್ಟಾರೆ ಈ ದಿನದ ವರೆಗೆ ಪಾಲಿಕೆಯ ಪ್ರಗತಿ ಶೂನ್ಯವಾಗಿದೆ. ಈಗ ಪಡೆದಿರುವುದೂ ಕೂಡ ಸರಿಯಲ್ಲ ಎಂದಾದರೆ ಇ-ಆಸ್ತಿ ಪಡೆದಿರುವವರು ಕೂಡ ಮತ್ತೆ ತೊಂದರೆ ಅನುಭವಿಸಬೇಕಾಗುತ್ತದೆ. ಪಾಲಿಕೆ ಆಡಳಿತ ಇ-ಆಸ್ತಿಗೆ ಸಂಬಂಧಿಸಿದಂತೆ ಹೊರಡಿಸಿದ ಸುತ್ತೋಲೆಗಳನ್ನು ಗಮನಿಸಲೇ ಇಲ್ಲ. ಅನುಷ್ಠಾನದಲ್ಲಂತೂ ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ ಎಂದರು.ಈಗ ಉಳಿದಿರುವ ಸುಮಾರ ಶೇ.65ರಷ್ಟು ಡಿಜಿಟಲಿಕರಣ ಕಾಮಗಾರಿಗೆ ಮಾ.10 ಕೊನೆಯ ದಿನವಾಗಿದೆ. ಈ ಅವಧಿಯಲ್ಲಿ ಇದು ಅಸಾಧ್ಯದ ಮಾತಾಗಿದೆ. ಶೇ.35ರಷ್ಟು ಪ್ರಗತಿ ಕಾಣಲು 6 ವರ್ಷ ಸಮಯ ತೆಗೆದುಕೊಂಡಿದೆ. ಇನ್ನು ಉಳಿದ 65ಷ್ಟು ಪ್ರಗತಿಯನ್ನು ಒಂದು ತಿಂಗಳಲ್ಲಿ ಮುಗಿಸುವುದು ಅಸಾಧ್ಯದ ಮಾತು. ಆದ್ದರಿಂದ ನೋಂದಾವಣೆಗೆ ಕಡ್ಡಾಯ ಮಾಡಿರುವ ಇ-ಆಸ್ತಿ ಪ್ರಕ್ರಿಯೆಗೆ ರಾಜ್ಯ ಸರ್ಕಾರ ಕನಿಷ್ಠ 6 ತಿಂಗಳಾದರೂ ಕಾಲಾವಕಾಶ ನೀಡಬೇಕು ಎಂದು ಒತ್ತಾಯಿಸಿದರು. ಪತ್ರಿಕಾಗೋಷ್ಠಿಯಲ್ಲಿ ಡಾ.ಸತೀಶ್ ಕುಮಾರ ಶೆಟ್ಟಿ, ಎಸ್.ಆರ್.ಗೋಪಾಲ್, ಎಸ್.ಬಿ.ಅಶೋಕಕುಮಾರ, ಸೀತಾರಾಮ್, ಎಸ್.ಎಸ್.ಜ್ಯೋತಿಪ್ರಕಾಶ್ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.