
ಗದಗ: ನಗರದ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಫೆ. 15ರಿಂದ 17ರ ವರೆಗೆ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ವತಿಯಿಂದ ಮಹಾಶಿವರಾತ್ರಿ ಮಹೋತ್ಸವ ಹಾಗೂ ನಾಗೇಶ್ವರ ಜ್ಯೋತಿರ್ಲಿಂಗ ದರ್ಶನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಈಶ್ವರೀಯ ವಿಶ್ವವಿದ್ಯಾಲಯದ ಜಯಂತಿ ಅಕ್ಕ ತಿಳಿಸಿದರು.
ಫೆ. 15ರಂದು ಸಂಜೆ ಉದ್ಘಾಟನಾ ಸಮಾರಂಭ ಜರುಗಲಿದ್ದು, ರಾಜ್ಯ ವಿಕೇಂದ್ರಿಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಡಿ.ಆರ್. ಪಾಟೀಲ ಮಹಾದ್ವಾರವನ್ನು ಉದ್ಘಾಟಿಸಲಿದ್ದಾರೆ. ವಿಧಾನಪರಿಷಥ್ ಸದಸ್ಯ ಎಸ್.ವಿ. ಸಂಕನೂರ ದೀಪಾರಾಧನೆ ನೆರವೇರಿಸಲಿದ್ದಾರೆ. ರಾಜಯೋಗಿನಿ ಬ್ರಹ್ಮಕುಮಾರಿ ಜಯಂತಿ ಅಕ್ಕ ಆಧ್ಯಾತ್ಮಿಕ ರಹಸ್ಯದ ಕುರಿತು ಮಾತನಾಡುವರು.
ಫೆ. 16ರಂದು ಕಾಯಕ ಯೋಗಿಗಳಿಗೆ ಗೌರವಾರ್ಪಣಾ ಮಹೋತ್ಸವ ನಡೆಯಲಿದೆ. ಅಪರ ಜಿಲ್ಲಾಧಿಕಾರಿ ಡಾ. ದುರ್ಗೇಶ್ ಕೆ.ಆರ್. ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸುವರು. ಫೆ. 17ರಂದು ಸಾಂಸ್ಕೃತಿಕ ಮಹೋತ್ಸವದ ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ನೆರವೇರಿಸುವರು. ಅಂದು ಸಂಜೆ ನಗರದ ವಿವಿಧ ನೃತ್ಯ ಮತ್ತು ಸಂಗೀತ ಅಕಾಡೆಮಿಗಳಿಂದ ಕಲಾ ಪ್ರದರ್ಶನ ನಡೆಯಲಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ರೇಖಾ ಅಕ್ಕ, ಜೋಶ್ನಾ ಮುಂತಾದವರು ಇದ್ದರು.ವಿಶೇಷ ಮೆರವಣಿಗೆ