ಹೊಸಪೇಟೆ: ನಗರದ ವಿಜಯನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಪುಣ್ಯಸ್ಮರಣೆ ಹಾಗೂ ಹುತಾತ್ಮರ ದಿನಾಚರಣೆಯನ್ನು ಮಂಗಳವಾರ ನಡೆಸಲಾಯಿತು.
ಪತಂಜಲಿ ಯೋಗ ಸಮಿತಿ: ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಮಂಗಳವಾರ ಪತಂಜಲಿ ಯೋಗ ಸಮಿತಿವತಿಯಿಂದ ಹುತಾತ್ಮ ದಿನಾಚರಣೆ ಕಾರ್ಯಕ್ರಮ ನಡೆಯಿತು. ಮಹಾತ್ಮ ಗಾಂಧೀಜಿ ಅವರ ಪುತ್ಥಳಿಗೆ ಪುಷ್ಪನಮನ ಸಲ್ಲಿಸಲಾಯಿತು.
ಕಂಪ್ಲಿ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಧ್ಯಾಪಕ ಪ್ರೊ. ವಾಗೀಶ್ ಮಾತನಾಡಿ, ನುಡಿದಂತೆ ನಡೆಯುವುದು ಕಷ್ಟ. ತಾವು ಬದುಕಿದ ರೀತಿಯನ್ನೇ ಸಂದೇಶವಾಗಿ ಮಾರ್ಪಡಿಸುವುದು ಇನ್ನೂ ಕಷ್ಟ. ಇದನ್ನು ಸಾಧಿಸಿ ಮಹಾನ್ ದಾರ್ಶನಿಕನಾಗಿ ನಮಗೆಲ್ಲ ಸ್ವಾತಂತ್ರ್ಯದ ಬೆಳಕು ನೀಡಿದ ಮಹಾತ್ಮ ಗಾಂಧೀಜಿ ನಮ್ಮ ನಿತ್ಯ ಜೀವನದ ಆದರ್ಶವಾಗಬೇಕು ಎಂದರು.ಪತಂಜಲಿ ಯೋಗ ಸಮಿತಿಯ ಜಿಲ್ಲಾ ಪ್ರಭಾರಿ ಪ್ರೊ. ಎಫ್.ಟಿ. ಹಳ್ಳಿಕೇರಿ ಮಾತನಾಡಿದರು. ಯುವ ಭಾರತದ ರಾಜ್ಯ ಪ್ರಭಾರಿ ಕಿರಣ್ ಕುಮಾರ್, ಜಿಲ್ಲಾ ಪ್ರಭಾರಿ ವೀರೇಶ್, ಪತಂಜಲಿ ಯೋಗ ಸಮಿತಿ ಬಳ್ಳಾರಿ ಉಸ್ತುವಾರಿ ರಾಜೇಶ್ ಕಾರ್ವಾ, ಯೋಗ ಸಾಧಕರಾದ ಅಶೋಕ್ ಚಿತ್ರಗಾರ್, ಯರಿಯಪ್ಪ, ಶ್ರೀರಾಮ್, ಚಂದ್ರಿಕಾ ಶ್ರೀರಾಮ್, ಅನಂತ ಜೋಶಿ ಮತ್ತಿತರರಿದ್ದರು. ಇದಕ್ಕೂ ಮೊದಲು ನಿತ್ಯದಂತೆ ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆದ ಯೋಗ ಶಿಬಿರದ ಉದ್ದಕ್ಕೂ ಮಹಾತ್ಮ ಗಾಂಧೀಜಿ ಅವರಿಗೆ ಇಷ್ಟವಾದ ಹಾಡುಗಳು ಝೇಂಕರಿಸಿದವು.
ಜಿಲ್ಲಾಡಳಿತ ಭವನದಲ್ಲಿ ಮೌನಾಚರಣೆ: ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತ್ಯಾಗ ಬಲಿದಾನಗಳ ಮೂಲಕ ಪ್ರಾಣತೆತ್ತು ಹುತಾತ್ಮರಾದವರ ಸ್ಮರಣಾರ್ಥವಾಗಿ ಜಿಲ್ಲಾಡಳಿತದಿಂದ ಜನವರಿ 30ರಂದು ಮೌನಾಚರಣೆ ಕಾರ್ಯಕ್ರಮ ನಡೆಯಿತು.