ಕಂಪ್ಲಿ: ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರೀಜಿಯವರ ಆದರ್ಶಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕು ಎಂದು ತಹಸೀಲ್ದಾರ್ ಶಿವರಾಜ್ ಶಿವಪುರ ತಿಳಿಸಿದರು.
ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರೀಜಿಯವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗಾಂಧೀಜಿಯವರು ಅಹಿಂಸಾವಾದಿಯಾಗಿದ್ದರು. ಸ್ವಚ್ಛತೆಗೆ ಬಹಳ ಮಹತ್ವ ನೀಡಿದ್ದಾರೆ. ಸತ್ಯ, ಸಾಮರಸ್ಯ ಮತ್ತು ಸಮಾನತೆಯ ಆಧಾರದ ಮೇಲಿನ ಅವರ ಜೀವನ ಮತ್ತು ಆದರ್ಶಗಳು ಯಾವಾಗಲೂ ಸ್ಫೂರ್ತಿದಾಯಕವಾಗಿವೆ. ಪ್ರತಿಯೊಬ್ಬರೂ ಸ್ವಚ್ಛತೆಗೆ ಆದ್ಯತೆ ನೀಡುವ ಮೂಲಕ ಗಾಂಧೀಜಿ ಅವರ ಸ್ವಚ್ಛ ಭಾರತ್ ಕನಸನ್ನು ನನಸಾಗಿಸೋಣ ಎಂದರು. ಜೈ ಜವಾನ್ ಜೈ ಕಿಸಾನ್ ಎಂಬ ಘೋಷ ವಾಖ್ಯದೊಂದಿಗೆ ದೇಶದ ಸೈನಿಕರು, ರೈತರು ಮತ್ತು ಸ್ವಾಭಿಮಾನಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಂತಹ ಮಹನೀಯರು ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರಾಗಿದ್ದಾರೆ. ಎರಡನೇ ಪ್ರಧಾನಿಯಾಗಿ ದೇಶಕ್ಕೆ ಅವರು ನೀಡಿದಂತಹ ಸೇವೆ ಅನನ್ಯವಾಗಿದೆ ಎಂದರು.ಇದೇ ವೇಳೆ ಶಾಲಾ ಮಕ್ಕಳಿಂದ ಗಾಂಧೀಜಿಯವರ ಗೀತಾ ಗಾಯನ ಮಾಡಲಾಯಿತು. ತಹಸೀಲ್ದಾರ್ ಶಿವರಾಜ್ ಸ್ವಚ್ಛತೆಯ ಪ್ರತಿಜ್ಞಾವಿಧಿ ಬೋಧಿಸಿದರು. ಬಳಿಕ ಎಪಿಎಂಸಿ ಆವರಣದಲ್ಲಿ ಪೌರ ಕಾರ್ಮಿಕರೊಂದಿಗೆ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಯಿತು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಇಒ ಆರ್.ಕೆ.ಶ್ರೀ ಕುಮಾರ್, ಪುರಸಭೆ ಮುಖ್ಯಾಧಿಕಾರಿ ಕೆ.ದುರುಗಣ್ಣ, ಗ್ರೇಡ್ 2 ತಹಸೀಲ್ದಾರ್ ರೇಣುಕಪ್ಪ, ಉಪ ತಹಸೀಲ್ದಾರ್ ರವೀಂದ್ರ ಕುಮಾರ್, ಮುಖಂಡರಾದ ಕೆ.ಎಂ.ಹೇಮಯ್ಯ ಸ್ವಾಮಿ, ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳಿದ್ದರು.