ಧಾರವಾಡ: ಭಗವಾನ ಮಹಾವೀರರು ಜಗತ್ತಿಗೆ ಅಹಿಂಸೆ, ಶಾಂತಿ ಸೇರಿದಂತೆ ಸುಂದರ ಸಮಾಜ ರೂಪಗೊಳ್ಳಲು ಅಗತ್ಯವಿರುವ ನೀತಿ, ತತ್ವ,ಸಿದ್ಧಾಂತ ಬೋಧಿಸಿದರು. ಜೈನ ಧರ್ಮವು, ಭಾರತವು ಜಗತ್ತಿಗೆ ನೀಡಿದ ಬಹು ದೊಡ್ಡ ಕೊಡುಗೆ ಎಂದು ಅಂತಾರಾಷ್ಟ್ರೀಯ ಜೈನ ವಿದ್ವಾಂಸ ಮೈಸೂರಿನ ಡಾ. ಶುಭಚಂದ್ರ ಹೇಳಿದರು.
ಇಲ್ಲಿನ ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ಭಗವಾನ್ ಶ್ರೀ ಮಹಾವೀರ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಉಪನ್ಯಾಸ ನೀಡಿದರು.ಬುದ್ದ, ಮಹಾವೀರರು ಪ್ರಾಕೃತ ಭಾಷೆ ಬಳಸಿ ಸಾಹಿತ್ಯ ಸೃಷ್ಟಿಸಿದರು. ಸಂಸ್ಕೃತ ಬಳಸಿ ಉಪದೇಶ ಮಾಡಿದರೆ ಅಂದಿನ ಜನಸಾಮಾನ್ಯರಿಗೆ ತಲುಪುವ ಅವಕಾಶ ಕಡಿಮೆ ಇದೆ ಎಂದು ಭಾವಿಸಿದ್ದರು. ಮಾಗದಿ ಭಾಷೆಯಲ್ಲಿ ಬುದ್ದ, ಅರ್ಧಮಾಗದಿಯಲ್ಲಿ ಮಹಾವೀರರು ತಮ್ಮ ಧರ್ಮೋಪದೇಶ ನೀಡಿದರು ಎಂದರು.
ಅಧರ್ಮ ಉಂಟುಮಾಡುವ ಯಾವ ಕೆಲಸ ಮಾಡಬಾರದು. ಭಾರತೀಯ ಧರ್ಮಗಳು ನೀತಿ,ಸಂಸ್ಕಾರವನ್ನು ಸದಾಕಾಲವೂ ಬೋಧಿಸುತ್ತಾ ಬಂದಿವೆ ಎಂದರು.ಲೌಕಿಕ ಪ್ರಪಂಚದಲ್ಲಿ ಬದುಕುವದನ್ನು ಜೈನಧರ್ಮ ಕಲಿಸಿದೆ. ಸದೃಢ ಸಮಾಜಕ್ಕೆ ಜೈನ,ಬೌದ್ದ ಸೇರಿದಂತೆ ಅನೇಕ ಧರ್ಮಗಳು ತಮ್ಮ ಕೊಡುಗೆ ನೀಡಿವೆ. ಇದನ್ನು ಎಲ್ಲರೂ ಅಳವಡಿಸಿಕೊಳ್ಳಬೇಕೆಂದರು.
ಕಾರ್ಯಕ್ರಮ ಉದ್ಘಾಟಿಸಿದ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಅಪ್ಪಾಸಿ ಬಬಲೇಶ್ವರ ಮಾತನಾಡಿ, ಭಾರತದಲ್ಲಿನ ಧರ್ಮದಾರ್ಶನಿಕರು ಶಾಂತಿ, ಸಂಸ್ಕಾರ, ಮೌಲ್ಯಯುತ ಬದುಕನ್ನು ವಿಶ್ವಕ್ಕೆ ನೀಡಿದ್ದು ಮಹಾನ್ ಕೊಡುಗೆ ಆಗಿದೆ. ಭಗವಾನ ಮಹಾವೀರರು ಬೋಧಿಸಿದ ಸತ್ಯ, ಅಹಿಂಸೆ, ಶಾಂತಿ ಇಂದು ಎಲ್ಲೆಡೆ ಪಸರಿಸಬೇಕು ಎಂದರು.ಜೈನ ಧರ್ಮ ಸೇರಿದಂತೆ ಭಾರತೀಯ ಎಲ್ಲ ಧರ್ಮಗಳ ಸಾರವನ್ನು ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಯುವಕರಾದಿಯಾಗಿ ಮಕ್ಕಳವರೆಗೂ ತಲುಪಿಸಬೇಕು ಎಂದರು.
ಬಾಲ ವಿಕಾಸ ಅಕೆಡಾಮಿಯಿಂದ ಮಹಾನ ಪುರುಷರ, ದಾರ್ಶನಿಕರ ತತ್ವಗಳನ್ನು ಮತ್ತು ಧರ್ಮದ ಮೌಲ್ಯಗಳನ್ನು ಮಕ್ಕಳಿಗೆ ತಲುಪಿಸುವ ಮತ್ತು ಸಂಸ್ಕಾರವಂತ ಸಮಾಜ ರೂಪಿಸಲು ವಿನೂತನ ಕಾರ್ಯಕ್ರಮ ರೂಪಿಸಲಾಗುವುದು ಎಂದು ತಿಳಿಸಿದರು.ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಅಧ್ಯಕ್ಷತೆ ವಹಿಸಿದ್ದರು.
ಕೇರಳ ರಾಜ್ಯದ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸಿದ್ದು ಆಲಗೂರ, ಉಪ ಪೊಲೀಸ್ ಆಯುಕ್ತ ಮಹಾನಿಂಗ ನಂದಗಾವಿ, ಧಾರವಾಡ ದಿಗಂಬರ ಜೈನ್ ಸಮಾಜ ಟ್ರಸ್ಟ್ ಅಧ್ಯಕ್ಷ ಡಾ. ಅಶೋಕ ರೋಖಡೆ, ಶ್ವೇತಾಂಬರ ಜೈನ್ ಸಮಾಜದ ಅಧ್ಯಕ್ಷ ಫತೇಚಂದ ಸಾಗರಮಲಜಿ ಸೋಲಂಕಿ, ಸನ್ಮತಿ ಸೇವಾ ಸಮಿತಿ ಅಧ್ಯಕ್ಷ ಅಶೋಕ ಬಾಗಿ, ಜನತಾ ಶಿಕ್ಷಣ ಸಮಿತಿ ಕಾರ್ಯದರ್ಶಿ ಡಾ. ಅಜೀತ ಪ್ರಸಾದ, ಸಮಾಜದ ಮುಖಂಡ ದತ್ತಾ ಡೋರ್ಲೆ, ಸಹಾಯಕ ಪೊಲೀಸ್ ಆಯುಕ್ತ ಪ್ರಶಾಂತ ಸಿದ್ದನಗೌಡರ, ಸಿಪಿಐ ದಯಾನಂದ ಹಾಗೂ ಇತರರು ಇದ್ದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ. ಜಿನದತ್ತ ಹಡಗಲಿ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಕುಲಪತಿ ಡಾ.ಸಿದ್ದು ಆಲಗೂರ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.