ಕನ್ನಡಪ್ರಭ ವಾರ್ತೆ ಮೈಸೂರು
ಮರಳು ಮೂಟೆ ಭಾರ ಹೊತ್ತ ಮಹೇಂದ್ರ ಆನೆ ವಿಶ್ವಾಸದ ಹೆಜ್ಜೆ ಹಾಕಿತು. ಮಹೇಂದ್ರನನ್ನು ಹಿಂಬಾಲಿಸಿಕೊಂಡು ಕಾವೇರಿ, ಲಕ್ಷ್ಮೀ, ಧನಂಜಯ, ಏಕಲವ್ಯ, ಪ್ರಶಾಂತ, ಗೋಪಿ ಮತ್ತು ಶ್ರೀರಾಮ ಆನೆಗಳು ತಾಲೀಮಿನಲ್ಲಿ ಪಾಲ್ಗೊಂಡಿದ್ದವು.
ಮೈಸೂರು ಅರಮನೆಯಲ್ಲಿ ರಾಜವಂಶಸ್ಥರ ಪೂಜೆಯಲ್ಲಿ ಪಾಲ್ಗೊಂಡಿದ್ದ ಕಾರಣ ಶ್ರೀಕಂಠ ಆನೆಯು ತಾಲೀಮಿನಲ್ಲಿ ಪಾಲ್ಗೊಂಡಿರಲಿಲ್ಲ.ಮಹೇಂದ್ರ ಆನೆಗೆ ಬಾರ ಹೊರಿಸುವ ತಾಲೀಮಿಗೂ ಮುನ್ನ ಅರಮನೆ ಆವರಣದ ಕೋಡಿ ಸೋಮೇಶ್ವರ ದೇವಸ್ಥಾನದ ಮುಂಭಾಗ ಅರ್ಚಕ ಎಸ್.ವಿ. ಪ್ರಹ್ಲಾದ್ ರಾವ್ ಅವರು, ಮಹೇಂದ್ರ, ಕಾವೇರಿ ಮತ್ತು ಲಕ್ಷ್ಮೀ ಆನೆಗೆ ಕಾಲು ತೊಳೆದು ಅರಿಶಿನಿ, ಕುಂಕುಮ, ಗಂಧ ಇರಿಸಿ ಪೂಜಿಸಿದರು. ಬಳಿಕ ಎಲ್ಲಾ ಆನೆಗಳಿಗೂ ಪಂಚಫಲ ನೀಡಿ, ದೃಷ್ಠಿ ತೆಗೆದು ಆರತಿ ಬೆಳಗಿದರು.
ಅರಮನೆ ಮುಂಭಾಗದಿಂದ ಹೊರಟ ಮಹೇಂದ್ರ ನೇತೃತ್ವದ ಗಜಪಡೆಯು ಚಾಮರಾಜ ವೃತ್ತ, ಕೆ.ಆರ್. ವೃತ್ತ, ಸಯ್ಯಾಜಿ ರಾವ್ ರಸ್ತೆ, ಆಯುರ್ವೇದ ವೃತ್ತ, ಆರ್ ಎಂಸಿ ವೃತ್ತ, ಹೈವೇ ವೃತ್ತದ ಮೂಲಕ ಬನ್ನಿಮಂಟಪದ ಪಂಜಿನ ಕವಾಯತು ಮೈದಾನವನ್ನು ತಲುಪಿತು. ಕೆಲಕಾಲ ವಿಶ್ರಾಂತಿ ಬಳಿಕ ಗಜಪಡೆಯು ಬನ್ನಿಮಂಟಪದಿಂದ ಅರಮನೆಗೆ ವಾಪಸ್ ಆದವು.
----
ಫೋಟೋ- 6ಎಂವೈಎಸ್17, 18
----
ಮೈಸೂರು ಅರಮನೆ ಆವರಣದಿಂದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಆಗಮಿಸುತ್ತಿದ್ದಂತೆ ಸಾವಿರಾರು ಜನ ಆನೆಗಳನ್ನು ನೋಡಲು ಮುಗಿಬಿದ್ದರು. ತಮ್ಮ ಮೊಬೈಲ್, ಕ್ಯಾಮರಾಗಳಲ್ಲಿ ಆನೆಗಳ ಭಾವಚಿತ್ರವನ್ನು ಸೆರೆ ಹಿಡಿದರು.
ಇದರಿಂದಾಗಿ ಚಾಮರಾಜ ವೃತ್ತ, ಪುರಭವನ, ಆಲ್ಬರ್ಟ್ ವಿಕ್ಟರ್ ರಸ್ತೆ, ಕೆ.ಆರ್. ವೃತ್ತ, ಸಯ್ಯಾಜಿರಾವ್ ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಯಿತು. ಇದರಿಂದಾಗಿ ಒಂದು ಗಂಟೆಗೂ ಹೆಚ್ಚು ಕಾಲ ಸಂಚಾರ ಅಸ್ತವ್ಯಸ್ತಗೊಂಡಿತು. ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು.