ಹೂವಿನಹಡಗಲಿ: ನಾಡಿನ ಸುಕ್ಷೇತ್ರ ಮೈಲಾರಲಿಂಗೇಶ್ವರ ಜಾತ್ರೆ ಮಹೋತ್ಸವದ ಅಂಗವಾಗಿ ಭರತ ಹುಣ್ಣಿಮೆ ಆಚರಿಸಲಾಯಿತು. ದೇವಸ್ಥಾನದಲ್ಲಿನ ಉದ್ಭವ ಲಿಂಗುವಿಗೆ ಮೌನವಾಗಿ ಅಭಿಷೇಕ, ಅರ್ಚನೆ ಮಾಡುವ ಜತೆಗೆ ದೇಗುಲದ ವಿವಿಧ ಕಡೆಗಳಲ್ಲಿ, 9 ಹುಂಡಿಗಳನ್ನು ಅಳವಡಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಮೈಲಾರಲಿಂಗೇಶ್ವರನು ರಥ ಸಪ್ತಮಿ ದಿನದಿಂದ ಕಾರ್ಣಿಕದವರೆಗೂ 11 ದಿನಗಳ ಕಾಲ ಡೆಂಕಣ ಮರಡಿಯಲ್ಲಿ ಮಲ್ಲಾಸುರ ಮಣಿಕಾಸುರರೊಂದಿಗೆ ಯುದ್ಧ ಮಾಡುತ್ತಿದ್ದಾರೆ. ದೇವಸ್ಥಾನದಲ್ಲಿ ನೈವೇದ್ಯ, ಗಂಟೆನಾದ, ಮಂಗಳಾರತಿ ಪದ್ಧತಿ ಇರುವುದಿಲ್ಲ ಎನ್ನುತ್ತಾರೆ ಗುರು ವೆಂಕಪ್ಪಯ್ಯ ಒಡೆಯರ್.
ಮೈಲಾರ ಸುಕ್ಷೇತ್ರದಲ್ಲೇ ಭರತ ಹುಣ್ಣಿಮೆ ಆಚರಣೆ ಮಾಡಿದರೆ ಒಳ್ಳೆಯದು ಎಂಬ ಕಾರಣಕ್ಕಾಗಿ, ನಾಡಿನ ನಾನಾ ಕಡೆಗಳಿಂದ ಅಸಂಖ್ಯಾತ ಭಕ್ತರು ಆಗಮಿಸುತ್ತಿದ್ದಾರೆ. ದೇವರ ದರ್ಶನ ಪಡೆದ ಭಕ್ತರು ದೇವಸ್ಥಾನದ ಆವರಣ ಸುತ್ತಲೂ ದೋಣಿ ಸೇವೆ ಮಾಡುವ ಭಕ್ತರ ದಂಡೇ ನೆರೆದಿತ್ತು. ಮನೆಯಿಂದ ತಂದಿದ್ದ ಮೀಸಲು ಬುತ್ತಿ, ಹಣ್ಣು ತುಪ್ಪವನ್ನು ದೋಣಿಗೆ ಹಾಕಿ ಭಕ್ತರು ಪುನೀತರಾದರು. ಇನ್ನು ಜಾತ್ರೆ ಪರಿಷೆ ಸೇರುವ ಜಾಗದಲ್ಲಿ ಭಕ್ತರು ಗೊರವರನ್ನು ಕರೆದು ದೋಣಿ ಪೂಜೆ ಮಾಡುವ ಜತೆಗೆ ಮೀಸಲು ಬುತ್ತಿದೆಯನ್ನು ನೀಡಿದರು.ದೇವಸ್ಥಾನದ ಆವರಣದಲ್ಲಿಸಾವಿರಾರು ಭಕ್ತರು ಹರಕೆ ತೀರಿಸುತ್ತಿದ್ದರು. ದೀಡ್ ದಂಡ ನಮುಸ್ಕಾರ, ಚೌರಿ ಸೇವೆ, ಕುದುರೆಕಾರರ ಚಾಟಿ ಸೇವೆ, ದೀವಟಿಕೆ ಸೇವೆಗಳನ್ನು ಭಕ್ತರು ತೀರಿಸಿದರು.ಭರತ ಹುಣ್ಣಿಮೆಯಂದು ನಾಡಿನ ನಾನಾ ಕಡೆಗಳಿಂದ ಭಕ್ತರು ಎತ್ತಿನಬಂಡಿ, ಟ್ರ್ಯಾಕ್ಟರ್ ಸೇರಿದಂತೆ ಇತರೆ ವಾಹನಗಳ ಮೂಲಕ ಮೈಲಾರ ಭಕ್ತರು ಬಂದು ಸೇರುತ್ತಿದ್ದಾರೆ.
ಡೆಂಕಣ ಮರಡಿಯಲ್ಲಿ ಉಪವಾಸ ವ್ರತದಲ್ಲಿರುವ ಕಾರ್ಣಿಕ ನುಡಿಯುವ ಗೊರವಯ್ಯ, ಹಾಗೂ ಐತಿಹಾಸಿಕ ಬಿಲ್ಲಿಗೆ ಭಕ್ತರು ಪೂಜೆ ಸಲ್ಲಿಸಿ ದರ್ಶನ ಪಡೆದರು. ಜಾತ್ರೆಗೆ ಅಗತ್ಯ ಪೊಲೀಸ್ ಬಂದೋಬಸ್ತ್ ಆಯೋಜಿಸಲಾಗಿತ್ತು.