ಕನ್ನಡಪ್ರಭ ವಾರ್ತೆ ಕುಣಿಗಲ್ ಸರ್ಕಾರಿ ಶಾಲಾ ಶಿಕ್ಷಕರು, ಅಧಿಕಾರಿಗಳು ತಮ್ಮ ಮಕ್ಕಳನ್ನು ಕನ್ನಡ ಶಾಲೆಗೆ ಸೇರಿಸುವ ಪ್ರಯತ್ನ ನಡೆಯಬೇಕು ಎಂದು ಸಮಾನ ಮನಸ್ಕರ ವೇದಿಕೆಯ ರೂಪೇಶ್ ಒತ್ತಾಯಿಸಿದ್ದಾರೆ. ಕನ್ನಡದ ಉಳಿವಿಗಾಗಿ ಬೀದರ್ ನಿಂದ ಬೆಂಗಳೂರುವರೆಗೆ ಪಾದಯಾತ್ರೆ ನಡೆಸುವಾಗ ಮಾರ್ಗ ಮಧ್ಯೆ ಕುಣಿಗಲ್ ನಲ್ಲಿ ಮಾಧ್ಯಮದೊಂದಿಗೆ ಮಾತನಾಡಿದರು. ಕನ್ನಡ ಶಾಲೆಗಳನ್ನು ಮುಚ್ಚುವ ಕೆಲಸವನ್ನು ನಿಲ್ಲಿಸಿ ಅವುಗಳನ್ನು ಆಧುನಿಕರಣ ಗೊಳಿಸುವುದರ ಜೊತೆಗೆ ಮಕ್ಕಳನ್ನು ಶಾಲೆಗೆ ಆಕರ್ಷಣೆ ಮಾಡಬೇಕಾಗಿದೆ. ಪೋಷಕರನ್ನು ಶಾಲೆಯತ್ತ ಕರೆಸಿ ಮಾತನಾಡುವುದರ ಜೊತೆಗೆ ಸರ್ಕಾರದ ಸವಲತ್ತುಗಳನ್ನು ಪಡೆದ ಪ್ರತಿಯೊಬ್ಬರು ಕೂಡ ಕನ್ನಡ ಶಾಲೆಗೆ ಸೇರಿಸುವಂತೆ ಮತ್ತು ಸರ್ಕಾರಿ ಸಿಬ್ಬಂದಿ ನೌಕರರು ಹಾಗೂ ಅಧಿಕಾರಿಗಳ ಮಕ್ಕಳು ಖಂಡಿತವಾಗಿ ಕನ್ನಡ ಶಾಲೆಯಲ್ಲಿ ಓದಬೇಕು ಎಂಬ ನಿಯಮವನ್ನು ಸರ್ಕಾರ ಜಾರಿಗೆ ತಂದಾಗ ಕನ್ನಡ ಉಳಿವು ಸಾಧ್ಯ ಎಂದರು. ಕೈಗಾರಿಕೆಗಳಲ್ಲಿ ಕನ್ನಡ ಬಿಟ್ಟು ಬೇರೆಯವರಿಗೆ ಉದ್ಯೋಗ ನೀಡುವುದನ್ನು ಹೆಚ್ಚು ಕಂಡಿದ್ದೇನೆ ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ ಮೊದಲು 80% ಮೀಸಲಾತಿಯನ್ನು ಕನ್ನಡಿಗರಿಗೆ ನೀಡಬೇಕು ಎಂದು ಒತ್ತಾಯಿಸಿದರು. ಪಾದಯಾತ್ರೆ ಸಂದರ್ಭದಲ್ಲಿ ನೋಡಿದ ಮಟ್ಟಿಗೆ ಹಲವಾರು ಸ್ಥಳಗಳು ಅಭಿವೃದ್ಧಿ ಆಗಬೇಕಿದೆ ಕರ್ನಾಟಕ ಪ್ರವಾಸೋದ್ಯಮದ ಹಿನ್ನೆಲೆಯಲ್ಲಿ ತುಂಬಾ ಬಡವಾಗಿದೆ ಹಾಗಾಗಿ ವಿಶೇಷವಾದ ವರದಿಯನ್ನು ತಯಾರಿಸಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ನೀಡುವುದರ ಜೊತೆಗೆ ಮುಖ್ಯಮಂತ್ರಿಗಳಿಗೂ ಕೂಡ ಮನವಿ ಸಲ್ಲಿಸುತ್ತೇವೆ ಎಂದರು. ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ದಿನೇಶ್ ಕುಮಾರ್, ಆಡಿಟರ್ ಸುರೇಶ್, ರವಿಕುಮಾರ್ ಸೇರಿದಂತೆ ಇತರರಿದ್ದರು. ಫೋಟೋ ಇದೆ :-6 ಕೆಜಿಎಲ್ 1 : ಕುಣಿಗಲ್ ಗೆ ಪಾದಯಾತ್ರೆ ಬಂದ ರೂಪೇಶ್