ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ತಾಲೂಕಿನ ಪೆರೇಸಂದ್ರ ಗ್ರಾಮದ ಶಾಂತಾ ವಿದ್ಯಾಸಂಸ್ಥೆಯ ಶಾಂತ ಆರೋಗ್ಯ ವಿಜ್ಞಾನ ಕೋರ್ಸುಗಳಲ್ಲಿ ವಿದ್ಯಾರ್ಥಿ ಪರಿಷತ್ತಿನ ಪ್ರತಿನಿಧಿಗಳಾಗಿ ಡಿಜಿಟಲ್ ಚುನಾವಣೆಯ ಮೂಲಕ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿ, ಶಾಲಾ- ಕಾಲೇಜುಗಳ ಹಂತದ ಚುನಾವಣೆಗಳು ಹಾಗೂ ಪ್ರತಿನಿಧಿಗಳ ಆಯ್ಕೆ ವಿದ್ಯಾರ್ಥಿಗಳಲ್ಲಿ ನಾಯಕತ್ವ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿ ಕುಟುಂಬ, ಶಾಲೆ, ತರಗತಿ, ಸಮಾಜ, ಕೈಗಾರಿಕೆ ಹಾಗೂ ಸಂಘ- ಸಂಸ್ಥೆಗಳಿಗೆ ವಿವಿಧ ಹಂತದ ನಾಯಕರು ಅಗತ್ಯವಿದ್ದು ಶಾಲಾ ಹಂತದಲ್ಲಿಯೇ ಅಂತಹ ಗುಣಗಳನ್ನು ಕಲಿತು ಮೈಗೂಡಿಸಿಕೊಳ್ಳಬೇಕು ಎಂದರು.
ಆತ್ಮವಿಶ್ವಾಸ, ಜವಾಬ್ದಾರಿ ಹೊರುವುದು, ಸಮಯಪಾಲನೆ, ಸಂಘಟನೆ, ಉತ್ತರದಾಯಿತ್ವ ಹಾಗೂ ಪರಿಣಾಮಕಾರಿ ಸಂವಹನ ಮತ್ತು ಆತ್ಮ ವಿಶ್ವಾಸಗಳನ್ನು ಗಳಿಸಿಕೊಳ್ಳಬೇಕು. ವೃತ್ತಿಪರ ಕೋರ್ಸ್ ಗಳಲ್ಲಿ ನಾಯಕತ್ವ ತರಬೇತಿ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ಅಗತ್ಯ ಚಟುವಟಿಕೆಗಳನ್ನು ರೂಪಿಸಿ ಪ್ರಸ್ತುತ ಪಡಿಸಬೇಕು. ನಾಳಿನ ನಾಯಕರು ಶಾಲಾ ಕಾಲೇಜುಗಳಲ್ಲಿ ರೂಪುಗೊಳ್ಳುತ್ತಿದ್ದಾರೆ ಎಂಬ ಮಾತಿದೆ, ಈ ದಿಕ್ಕಿನಲ್ಲಿ ಶಾಲಾ-ಕಾಲೇಜುಗಳು ಹಾಗೂ ಅಧ್ಯಾಪಕರು ಅಕಾಡೆಮಿಕ್ ಕಲಿಕೆಯನ್ನು ಉತ್ತೇಜಿಸುವಂತೆಯೇ ನಾಯಕತ್ವದ ವಿಚಾರಗಳು ಮತ್ತು ಆದರ್ಶಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಬೇಕು. ಆಗ ವಿದ್ಯಾರ್ಥಿಗಳಲ್ಲಿ ನಾಯಕತ್ವದ ಪರಿಕಲ್ಪನೆ ಮತ್ತು ಅಗತ್ಯತೆ ಮತ್ತು ನಾಯಕರಾಗಿ ರೂಪುಗೊಳ್ಳುವ ವಿಧಿ ವಿಧಾನಗಳ ಬಗ್ಗೆ ತಿಳಿವಳಿಕೆ ಮೂಡಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.ಇತ್ತೀಚಿನ ವರ್ಷಗಳಲ್ಲಿ ಚುನಾವಣೆಗಳಲ್ಲಿ ಆಗುತ್ತಿರುವ ತಂತ್ರಜ್ಞಾನ ಅನ್ವಯವನ್ನು ಬಳಸುವ ದಿಕ್ಕಿನಲ್ಲಿ ವಿದ್ಯಾರ್ಥಿ ಪರಿಷತ್ತಿನ ಚುನಾವಣೆಯನ್ನು ಯೋಚಿತವಾಗಿ ಡಿಜಿಟಲ್ ಸ್ವರೂಪದಲ್ಲಿ ಅತ್ಯಂತ ಕರಾರುವಕ್ಕಾಗಿ ರೂಪಿಸಿದ್ದ ಸಹಾಯಕ ಪ್ರಾಧ್ಯಾಪಕರಾದ ಅನುಷ್, ವಿನಯ್, ಪ್ರಾರ್ಥನಾ ತಂಡವನ್ನು ಅಭಿನಂದಿಸಲಾಯಿತು.
ಕಾಲೇಜು ಪರಿಷತ್ತಿನ ಪ್ರತಿನಿಧಿಗಳಾಗಿ ಆಯ್ಕೆಯಾಗಿರುವ ವಿದ್ಯಾರ್ಥಿಗಳಿಗೆ ಶಾಂತಾ ಶಿಕ್ಷಣ ಸಂಸ್ಥೆಗಳ ಡೀನ್ ಮತ್ತು ಪ್ರಾಧ್ಯಾಪಕ ಡಾ. ನವೀನ್ ಸೈಮನ್ ಅಭಿನಂದನೆಗಳನ್ನು ತಿಳಿಸುತ್ತಾ ಪ್ರತಿ ವಿದ್ಯಾರ್ಥಿಯ ಹಾಗೂ ಸಂಸ್ಥೆಯ ಸರ್ವಾಂಗೀಣ ಉನ್ನತಿಯಲ್ಲಿ ಕಾಲೇಜು ಪರಿಷತ್ ವಿಶಿಷ್ಟ ಕೊಡುಗೆ ನೀಡಲು ಮುಂದಾಗಬೇಕೆಂದು ಕೋರಿದರು.