ಕನ್ನಡಪ್ರಭ ವಾರ್ತೆ ಹೊಸದುರ್ಗ
ಶಾಸಕರ ಮನೆಗೆ ತಿಂಡಿಗೆ ಬಂದ ಸಚಿವರಿಗೆ ಹೊಸದುರ್ಗ ತಾಲೂಕಿನ ಬರ ಪರಿಶೀಲನೆಗೆ ಸಮಯವೇ ಇರಲಿಲ್ಲ. ಬೆಳಗ್ಗೆ 9 ಗಂಟೆಗೆ ಬಿ.ಜಿ.ಗೋವಿಂದಪ್ಪ ಅವರ ಸ್ವಗ್ರಾಮದ ಬೆಲಗೂರಿನ ನಿವಾಸಕ್ಕೆ ಬೇಟಿ ನೀಡಿದ್ದ ಸಚಿವರು ಬಳಿಕ ಇಬ್ಬರು ಪರಸ್ಪರ ಗೌರವಿಸಿಕೊಂಡರು. ಜಿಲ್ಲೆಯ ಅಭಿವೃದ್ಧಿ, ಆಡಳಿತಾತ್ಮಕ ವಿಷಯಗಳು ಹಾಗೂ ಬರ ಪರಿಸ್ಥಿತಿಯ ಕುರಿತು ಚರ್ಚೆ ನಡೆಸಿದ ಸಚಿವರು ನನ್ನ ರಾಜಕೀಯ ಯಶಸ್ಸಿನ ಹಿಂದೆ ಬಿ.ಜಿ.ಗೋವಿಂದಪ್ಪನವರ ಆಶೀರ್ವಾದವಿದೆ. ಮುಂದೆಯೂ ಇದೇ ರೀತಿ ಆಶೀರ್ವಾದ ನೀಡಬೇಕು ಎಂದು ಮನವಿ ಮಾಡಿಕೊಂಡರು.
ಸರ್ಕಾರದ ನಿರ್ದೇಶನದಂತೆ ಬರ ಪರಿಸ್ಥಿತಿಯ ಪರಿಶೀಲನೆ ನಡೆಸುತ್ತಿರುವುದಾಗಿ ತಿಳಿಸಿದ ಸಚಿವರು ಹೊಸದುರ್ಗ ತಾಲೂಕಿನಲ್ಲಿ ಕೂಡ ಬರ ಪರಿಶೀಲನಾ ಸಭೆ ನಡೆಸಲು ಒಂದು ದಿನಾಂಕ ನಿಗದಿಪಡಿಸಿ ಎಂದು ಶಾಸಕರಿಗೆ ಕೋರಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು ಇತರ ತಾಲೂಕುಗಳಲ್ಲಿ ನಡೆಸಿದ ರೀತಿಯಲ್ಲಿಯೇ ಇಲ್ಲಿಯೂ ಪರಿಶೀಲನೆ ನಡೆಸಿ ಎಂದಿದ್ದಾರೆ.ಸಪಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಕೆಳಗೋಟೆ ರಘು, ಭೋವಿ ಅಭಿವೃದ್ದಿ ನಿಗಮದ ಅಧ್ಯಕ್ಷ ರಾಮಪ್ಪ ಈ ವೇಳೆ ಉಪಸ್ಥಿತರಿದ್ದರು. ನಮ್ಮಲ್ಲಿ ಏಕಿಲ್ಲ ಬರ ಅಧ್ಯಯನ ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಅಧ್ಯಯನ ಮಾಡುತ್ತಿರುವ ಸಚಿವರು ಗುರುವಾರ ಬೆಳಗ್ಗೆ ಹೊಸದುರ್ಗಕ್ಕೆ ಆಗಮಿಸಿದ್ದರೂ ಇಲ್ಲಿನ ಯಾವುದೇ ಗ್ರಾಮ ಅಥವಾ ಕೃಷಿ ಪ್ರದೇಶಕ್ಕೆ ಭೇಟಿ ನೀಡಿ ಬರ ಪರಿಸ್ಥಿತಿಯನ್ನು ವೀಕ್ಷಿಸದಿರುವುದು ಸ್ಥಳೀಯ ರೈತರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.
ಇತ್ತೀಚಿನ ದಿನಗಳಲ್ಲಿ ಮುಖ್ಯಮಂತ್ರಿ ಸೇರಿದಂತೆ ವಿರೋಧ ಪಕ್ಷದ ನಾಯಕರು ನಡೆಸುತ್ತಿರುವ ಬರ ಪರಿಶೀಲನೆ ಪ್ರವಾಸಗಳು ಕೂಡ ಹೆದ್ದಾರಿ ಪಕ್ಕದ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿವೆ. ಬರ ಪರಿಶೀಲನೆ ಎನ್ನುವುದು ರಾಷ್ಟ್ರೀಯ ಹೆದ್ದಾರಿ ಪಕ್ಕದ ಪ್ರದೇಶಗಳಿಗೆ ಮಾತ್ರ ಸೀಮಿತವಾಗಬಾರದು. ನಿಜವಾದ ಬರದ ಚಿತ್ರಣ ಕಾಣಬೇಕಾದರೆ ಒಳನಾಡಿನ ಗ್ರಾಮಗಳು, ಮಳೆಯಾಶ್ರಿತ ಜಮೀನುಗಳಿಗೆ ಭೇಟಿ ನೀಡಬೇಕು ಎಂಬ ಮಾತುಗಳು ಕೇಳಿಬರುತ್ತಿವೆ.