ಮಂಡ್ಯ ನಗರವನ್ನು ತಂಬಾಕು ಮುಕ್ತಗೊಳಿಸಿ: ಡಾ.ಕುಮಾರ

KannadaprabhaNewsNetwork |  
Published : Jun 26, 2026, 01:30 AM IST
೨೫ಕೆಎಂಎನ್‌ಡಿ-೫ಜಿಲ್ಲಾಡಳಿತದ ವತಿಯಿಂದ ನಗರಸಭೆ ಆವರಣದಲ್ಲಿ ನಡೆದ ಪೌರ ಕಾರ್ಮಿಕರಿಗಾಗಿ ಬಾಯಿ ಆರೋಗ್ಯ, ಸಾಂಕ್ರಾಮಿಕವಲ್ಲದ ರೋಗಗಳು (ಎನ್‌ಸಿಡಿ) ಮತ್ತು ಕ್ಷಯರೋಗ ತಪಾಸಣಾ ಶಿಬಿರ ನಡೆಸಲಾಯಿತು. | Kannada Prabha

ಸಾರಾಂಶ

ಮಂಡ್ಯ ಜಿಲ್ಲಾಡಳಿತದ ಮಾರ್ಗದರ್ಶನದಲ್ಲಿ ಕಳೆದ ವರ್ಷ ೬೫ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಿ, ಅವರ ಪೋಷಕರಿಗೆ ಪತ್ರ ಅಭಿಯಾನ ನಡೆಸಲಾಗಿದೆ. ಪ್ರತಿಯೊಬ್ಬರೂ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದಲ್ಲದೆ ಸ್ವಚ್ಛತೆ ಮತ್ತು ಮದ್ಯವ್ಯಸನದಿಂದ ದೂರ ಇರಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ಸೂರ್ಯೋದಯಕ್ಕೂ ಮುನ್ನ ಎದ್ದು ನಗರವನ್ನು ಸ್ವಚ್ಛಗೊಳಿಸುವ ಪೌರ ಕಾರ್ಮಿಕರ ಪಾತ್ರ ಅತ್ಯಮೂಲ್ಯ. ಇವರ ಆರೋಗ್ಯ ಕಾಪಾಡುವುದು ನಮ್ಮ ಜವಾಬ್ದಾರಿ. ಮಂಡ್ಯ ನಗರವನ್ನು ತಂಬಾಕು ಮುಕ್ತವನ್ನಾಗಿಸಲು ಎಲ್ಲರೂ ಅರಿವು ಆಂದೋಲನ ನಡೆಸಬೇಕು ಎಂದು ಜಿಲ್ಲಾಧಿಕಾರಿ ಡಾ. ಕುಮಾರ ಸಲಹೆ ನೀಡಿದರು.

ಜಿಲ್ಲಾಡಳಿತದಿಂದ ನಗರಸಭೆ ಆವರಣದಲ್ಲಿ ನಡೆದ ಪೌರ ಕಾರ್ಮಿಕರಿಗಾಗಿ ಬಾಯಿ ಆರೋಗ್ಯ, ಸಾಂಕ್ರಾಮಿಕವಲ್ಲದ ರೋಗಗಳು (ಎನ್‌ಸಿಡಿ) ಮತ್ತು ಕ್ಷಯರೋಗ ತಪಾಸಣಾ ಶಿಬಿರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲಾಡಳಿತದ ಮಾರ್ಗದರ್ಶನದಲ್ಲಿ ಕಳೆದ ವರ್ಷ ೬೫ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಿ, ಅವರ ಪೋಷಕರಿಗೆ ಪತ್ರ ಅಭಿಯಾನ ನಡೆಸಲಾಗಿದೆ. ಪ್ರತಿಯೊಬ್ಬರೂ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದಲ್ಲದೆ ಸ್ವಚ್ಛತೆ ಮತ್ತು ಮದ್ಯವ್ಯಸನದಿಂದ ದೂರ ಇರಬೇಕು ಎಂದರು.

ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಆನಂದ್ ಮಾತನಾಡಿ, ಪೌರ ಕಾರ್ಮಿಕರಿಗೆ ಹಮ್ಮಿಕೊಂಡಿರುವ ಈ ಆರೋಗ್ಯ ತಪಾಸಣಾ ಶಿಬಿರ ಅತ್ಯಂತ ಮಹತ್ವದ್ದಾಗಿದೆ. ಎಲ್ಲರೂ ಸದಾ ಆರೋಗ್ಯ ಕಾಪಾಡಿಕೊಂಡು ತಂಬಾಕು ಉತ್ಪನ್ನಗಳ ಬಳಕೆಯಿಂದ ದೂರವಿದ್ದು, ನಗರವನ್ನು ತಂಬಾಕು ಮುಕ್ತಗೊಳಿಸಲು ಕೈಜೋಡಿಸಿ ಎಂದು ಸಲಹೆ ನೀಡಿದರು.

ಇದೇ ವೇಳೆ ಸುಮಾರು ೨೫೦ಕ್ಕೂ ಹೆಚ್ಚು ಪೌರ ಕಾರ್ಮಿಕರಿಗೆ ಬಾಯಿ ತಪಾಸಣೆ, ರಕ್ತದೊತ್ತಡ, ಮಧುಮೇಹ ಮತ್ತು ಕ್ಷಯ ರೋಗ ತಪಾಸಣೆ ನಡೆಸಲಾಯಿತು.

ನಗರಸಭೆ ಆಯುಕ್ತೆ ಯು.ಪಿ.ಪಂಪಾಶ್ರೀ, ಐಎಂಎ ಅಧ್ಯಕ್ಷ ಡಾ.ಟಿ.ಎನ್.ಮರೀಗೌಡ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಕುಮಾರ್, ಡಾ.ಕಾಂತರಾಜು, ಡಾ.ಸೋಮಶೇಖರ್, ಡಾ.ಕೆ.ಪಿ.ಅಶ್ವಥ್, ಡಾ.ಜಿ.ಸಿ.ಬೆಟ್ಟಸ್ವಾಮಿ, ಡಾ.ಎಂ.ಎನ್.ಆಶಾಲತಾ, ಡಾ.ಜವರೇಗೌಡ, ಡಾ. ಜಿ.ಎನ್.ಇಂದ್ರಾಣಿ, ಪರಿಸರ ಅಭಿಯಂತರ ರುದ್ರೇಗೌಡ, ಜಿಲ್ಲಾ ಸಲಹೆಗಾರ ತಿಮ್ಮರಾಜು ಸೇರಿದಂತೆ ಆರೋಗ್ಯ ಇಲಾಖೆ ಮತ್ತು ನಗರಸಭೆ ಅಧಿಕಾರಿಗಳು ಉಪಸ್ಥಿತರಿದ್ದರು.

ಮೃತರ ಕುಟುಂಬದ ಪರಿಹಾರಕ್ಕಾಗಿ ಸರ್ಕಾರಕ್ಕೆ ವರದಿ ಸಲ್ಲಿಕೆ: ಡೀಸಿ

ಮಂಡ್ಯ:ಮುತ್ತತ್ತಿ ಕಾವೇರಿ ನದಿಯಲ್ಲಿ ಐವರು ಜಲಸಮಾಧಿಯಾದ ಘಟನೆ ನಂತರ ಶವಗಳನ್ನು ನಗರದ ಮಿಮ್ಸ್ ಆಸ್ಪತ್ರೆ ಶವಗಾರಕ್ಕೆ ತರಲಾಗಿತ್ತು. ಇಲ್ಲಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಡಾ.ಕುಮಾರ್, ಮೃತ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಇದೊಂದು ಅಚಾತುರ್ಯದ ಘಟನೆಯಾಗಿದೆ. ಸಣ್ಣ ನಿರ್ಲಕ್ಷ್ಯ, ಒಂದು ಕ್ಷಣದ ಆತುರ ಇಡೀ ಕುಟುಂಬವನ್ನೇ ಇಲ್ಲವಾಗಿಸಿದೆ. ಸಾರ್ವಜನಿಕರು ನದಿ ಆಳದ ಅರಿವಿಲ್ಲದೆ ಇಳಿಯಬಾರದು. ಪರಿಹಾರಕ್ಕಾಗಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಹೆಚ್ಚಿನ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಗರಪೇಟೆ ಗುಡ್ಡದಲ್ಲಿ ಮಣ್ಣು ಗಣಿಗಾರಿಕೆ ನಿಲ್ಲಿಸಿ
ಹಿರೀಕಾಟಿ: ಒತ್ತುವರಿದಾರರಿಗೆ ಜಾಗ ತೆರವು ಮಾಡಲು ಖಡಕ್‌ ಆದೇಶ, 7 ದಿನದ ಗಡುವು