ಸ್ಮಾರ್ಟ್ ಕ್ಲಾಸ್ ಮಾಡಿ ಕಂಪ್ಯೂಟರ್ ಜ್ಞಾನ ವೃದ್ಧಿಗೆ ಶ್ರಮಿಸಿ:ಶಿಲ್ಪಾನಾಗ್

KannadaprabhaNewsNetwork | Published : Jul 30, 2024 12:34 AM

ಸಾರಾಂಶ

ಚಾಮರಾಜನಗರ ಜಿಲ್ಲೆಯ ಎಲ್ಲಾ ವಿದ್ಯಾರ್ಥಿ ನಿಲಯಗಳಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಕಲಿಕೆಯ ಗುಣಮಟ್ಟವನ್ನು ಹೆಚ್ಚಿಸಲು ಆ.15ರಿಂದ ನುರಿತ ಶಿಕ್ಷಕರಿಂದ ವಿಶೇಷ ತರಗತಿ ಪ್ರಾರಂಭ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಶಿಲ್ಪಾನಾಗ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ಯಳಂದೂರು

ಚಾಮರಾಜನಗರ ಜಿಲ್ಲೆಯ ಎಲ್ಲಾ ವಿದ್ಯಾರ್ಥಿ ನಿಲಯಗಳಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಕಲಿಕೆಯ ಗುಣಮಟ್ಟವನ್ನು ಹೆಚ್ಚಿಸಲು ಆ.15ರಿಂದ ನುರಿತ ಶಿಕ್ಷಕರಿಂದ ವಿಶೇಷ ತರಗತಿ ಪ್ರಾರಂಭ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಶಿಲ್ಪಾನಾಗ್ ತಿಳಿಸಿದರು.

ತಾಲೂಕಿನ ಹೊನ್ನೂರು ಗ್ರಾಮದ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯಕ್ಕೆ ದೀಢೀರ್ ಭೇಟಿ ನೀಡಿ ಕುಡಿಯುವ ನೀರು, ಶೌಚಗೃಹ, ಸ್ವಚ್ಛತೆ, ಅಡುಗೆ ಮನೆ, ಕಂಪ್ಯೂಟರ್ ಘಟಕ, ಆಹಾರದ ದಾಸ್ತನು, ಮಕ್ಕಳಿಗೆ ನೀಡುವ ವಸ್ತುಗಳು, ಅಡುಗೆ ಮನೆ ಪರಿಶೀಲಿಸಿ ಮಾತನಾಡಿದರು.

ವಿದ್ಯಾರ್ಥಿಗಳ ನಿಲಯಕ್ಕೆ 6 ಕಂಪ್ಯೂಟರ್ ನೀಡಿದ್ದು, ಇವುಗಳನ್ನು ಬಳಕೆ ಮಾಡಲು ತರಗತಿ ನೀಡಬೇಕು. ವಿದ್ಯಾರ್ಥಿಗಳು ಮಲುಗುವ ಹಾಸಿಗೆಗಳು ಹರಿದು ಹೋಗಿದ್ದು, ತಕ್ಷಣ ಹೊಸ ಹಾಸಿಗೆ ನೀಡಬೇಕು. ಮಕ್ಕಳು ಇಂಗ್ಲೀಷ್ ಓದುವುದಕ್ಕೆ ತಡವಡಿಸಿದರು. ವಸತಿ ನಿಲಯಗಳಲ್ಲಿ ಬಹುತೇಕ ಮಕ್ಕಳು ಇಂಗ್ಲೀಷ್‌ನಲ್ಲಿ ಹಿಂದುಳಿದ್ದು, ಈ ಬಗ್ಗೆ ಇನ್ಫೋಸಿಸ್‌ ಸಹಯೋಗದೊಂದಿಗೆ ಸ್ಮಾರ್ಟ್ ಕ್ಲಾಸ್ ಮಾಡಿ ಕಂಪ್ಯೂಟರ್ ಜ್ಞಾನ ವೃದ್ಧಿಗೆ ಶ್ರಮಿಸಬೇಕು ಎಂದರು. ದಿನಚರಿಯಂತೆ ತಿಂಡಿ, ಊಟ, ಹಾಲನ್ನು ನೀಡಬೇಕು. ನಿಲಯದಲ್ಲಿ ದಾಸ್ತಾನು ಮಾಡಿರುವ ಆಹಾರ ಪದಾರ್ಥಗಳಲ್ಲಿ ಕೆಲವು ಅವಧಿ ಮೀರಿರುವ ಆಹಾರ ಪದಾರ್ಥಗಳು ಪತ್ತೆಯಾಗಿದ್ದು, ನಿಲಯದ ಕಾರ್ಯ ಚಟುವಟಿಕೆಯ ಬಗ್ಗೆ ತಾಲೂಕು ಸಮಾಜ ಕಲ್ಯಾಣಾಧಿಕಾರಿ ಕೇಶವಮೂರ್ತಿಗೆ ಒಂದು ವಾರದೊಳಗೆ ವರದಿ ನೀಡಬೇಕು. ಆರೋಗ್ಯದ ಮೇಲೆ ನಿಗಾವಹಿಸಬೇಕು. ಪ್ರಸುತ್ತ ಡೆಂಘೀ ಪ್ರಕರಣ ಹೆಚ್ಚು ಇರುವುದರಿಂದ ನಿಲಯಗಳಲ್ಲಿ ಸೊಳ್ಳೇ ಪರದೆ, ಕಟ್ಟಡದ ಸುತ್ತಮುತ್ತ ಸ್ವಚ್ಛತೆಯನ್ನು ಮಾಡಬೇಕು ಸೂಚಿಸಿದರು.

ಅಪರ ಜಿಲ್ಲಾಧಿಕಾರಿ ಗೀತಾ ಹುಡೇದ್, ಉಪವಿಭಾಗಧಿಕಾರಿ ಮಹೇಶ್, ತಹಸೀಲ್ದಾರ್ ಜಯಪ್ರಕಾಶ್, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಕೇಶವಮೂರ್ತಿ, ನಿಲಯ ಪಾಲಕ ನಾಗರಾಜು, ಮುಖಂಡರಾದ ನಿರಂಜನ್, ರೇವಣ್ಣ, ಸೋಮಣ್ಣ, ರಾಜಶೇಖರ್ ಹಾಜರಿದ್ದರು.

Share this article