ತಂದೆ-ತಾಯಿಯ ಕನಸು ನನಸಾಗಿಸಿ: ರಾಘವೇಂದ್ರ ಹಿಟ್ನಾಳ

KannadaprabhaNewsNetwork | Published : Feb 2, 2025 11:49 PM

ಸಾರಾಂಶ

ನಾನು ಮೊದಲನೇ ಬಾರಿಗೆ 2013ರಲ್ಲಿ ಶಾಸಕನಾಗಿ ಆಯ್ಕೆ ಆಗಿದ್ದೆ, ಅಲ್ಲಿಂದ ಇಲ್ಲಿಯತನಕ 20ಕ್ಕೂ ಅಧಿಕ ಕೊಠಡಿಗಳನ್ನು ನಿರ್ಮಾಣ ಮಾಡಿದ್ದಲ್ಲದೆ ಹೈಟೆಕ್ ಶೌಚಾಲಯ ನಿರ್ಮಾಣ ಮಾಡಿದ್ದೇವೆ.

ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಕೊಠಡಿ ನಿರ್ಮಾಣಕ್ಕೆ ಅಡಿಗಲ್ಲುಕನ್ನಡಪ್ರಭ ವಾರ್ತೆ ಕೊಪ್ಪಳ

ತಂದೆ, ತಾಯಿಗಳು ಶ್ರಮವಹಿಸಿ, ದುಡಿಯುತ್ತಾ ನಿಮ್ಮನ್ನು ಶಾಲೆಗೆ ಕಳುಹಿಸುತ್ತಿರುತ್ತಾರೆ. ಹೀಗಾಗಿ, ಅವರ ಕನಸು ನನಸು ಮಾಡುವಂತೆ ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದ್ದಾರೆ.

ನಗರದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ₹1.47 ಕೋಟಿ ವೆಚ್ಚದಲ್ಲಿ 6 ಕೊಠಡಿ ನಿರ್ಮಾಣದ ಕಾಮಗಾರಿಗೆ ಅಡಿಗಲ್ಲು, ₹23 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಹೈಟೆಕ್ ಮಹಿಳಾ ಶೌಚಾಲಯ ಹಾಗೂ ₹90 ಲಕ್ಷ ವೆಚ್ಚದಲ್ಲಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಫಿಜಿಕ್ಸ್ ಲ್ಯಾಬ್ ಕಟ್ಟಡ ಉದ್ಘಾಟಿಸಿ ಮಾತನಾಡಿದರು.

ತಂದೆ-ತಾಯಂದಿರು ಕಷ್ಟ ಪಟ್ಟು ದುಡಿದು ನಿಮ್ಮನ್ನು ಓದಲು ಕಾಲೇಜಿಗೆ ಕಳಿಸಿರುತ್ತಾರೆ. ಅವರಿಗೆ ನಿರಾಸೆ ಮಾಡದಂತೆ ಒಳ್ಳೆಯ ರೀತಿಯಿಂದ ವಿದ್ಯಾಭ್ಯಾಸ ಮಾಡಿ ಅವರ ಕಷ್ಟಕ್ಕೆ ಪ್ರತಿಫಲ ಒದಗಿಸುವ ಕೆಲಸ ಮಾಡಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ನಾನು ಮೊದಲನೇ ಬಾರಿಗೆ 2013ರಲ್ಲಿ ಶಾಸಕನಾಗಿ ಆಯ್ಕೆ ಆಗಿದ್ದೆ, ಅಲ್ಲಿಂದ ಇಲ್ಲಿಯತನಕ 20ಕ್ಕೂ ಅಧಿಕ ಕೊಠಡಿಗಳನ್ನು ನಿರ್ಮಾಣ ಮಾಡಿದ್ದಲ್ಲದೆ ಹೈಟೆಕ್ ಶೌಚಾಲಯ ನಿರ್ಮಾಣ ಮಾಡಿದ್ದೇವೆ. ರಂಗಮಂದಿರ, ಕಂಪ್ಯೂಟರ್ ಕೊಠಡಿ ನಿರ್ಮಾಣ ಮಾಡಿ ಕಂಪ್ಯೂಟರ್ ಕೂಡ ನೀಡಿದ್ದೇವೆ, ಕುಡಿಯುವ ನೀರಿನ ಆರ್ ಓ ಪ್ಲಾಂಟ್ ನ ವ್ಯವಸ್ಥೆ ಕೂಡ ಮಾಡಿದ್ದೇವೆ ಇನ್ನೂ ಈ ಕಾಲೇಜಿಗೆ ಬೇಕಿರುವ ಎಲ್ಲಾ ಸೌಲಭ್ಯಗಳನ್ನು ಒದಗಿಸುವ ಕೆಲಸ ಮಾಡುತ್ತೇವೆ ಎಂದರು.

ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯಕ್, ನಗರಸಭೆಯ ಅಧ್ಯಕ್ಷ ಅಮ್ಜದ್ ಪಟೇಲ್, ಯಮನೂರಪ್ಪ ನಾಯಕ್, ಮಲ್ಲಿಕಾರ್ಜುನ ಪೂಜಾರ್, ಭರಮಪ್ಪ ಗೊರವರ್, ಆನಂದ ಕಿನ್ನಾಳ, ಗವಿಸಿದ್ದಪ್ಪ ಕಲ್ಲನ್ನನವರ್, ಕಾಲೇಜಿನ ಪ್ರಿನ್ಸಿಪಾಲ್ ಎ.ಆರ್. ಶಿವಾನಂದ, ವಿದ್ಯಾರ್ಥಿ ಪ್ರತಿನಿಧಿ ಕೀರ್ತನ ಸೇರಿದಂತೆ ಇತರರು ಉಪಸ್ಥಿತರಿದ್ದರು.

Share this article