ಭವಿಷ್ಯ ರೂಪಿಸಿಕೊಳ್ಳುವುದು ನಿಮ್ಮ ಕೈಯಲ್ಲೇ ಇದೆ

KannadaprabhaNewsNetwork | Published : Mar 1, 2024 2:20 AM

ಸಾರಾಂಶ

ವಿಜಯಪುರ: ಭವಿಷ್ಯವನ್ನು ಉತ್ತಮವಾಗಿ ರೂಪಿಸಿಕೊಳ್ಳುವದು ನಿಮ್ಮ ಕೈಯಲ್ಲೆ ಇದೆ. ನಿಮಗೆ ಸಿಕ್ಕ ಅವಕಾಶಗಳನ್ನು ಸದ್ಭಳಕೆ ಮಾಡಿಕೊಂಡು ಗುರಿ ಮುಟ್ಟಬೇಕು ಎಂದು ರಾಜ್ಯೋತ್ಸವ ಪುರಸ್ಕೃತ ಮತ್ತು ಹಿರಿಯ ಪತ್ರಕರ್ತ ರಫೀ ಭಂಡಾರಿ ವಿದ್ಯಾರ್ಥಿನಿಯರಿಗೆ ಕಿವಿಮಾತು ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಭವಿಷ್ಯವನ್ನು ಉತ್ತಮವಾಗಿ ರೂಪಿಸಿಕೊಳ್ಳುವದು ನಿಮ್ಮ ಕೈಯಲ್ಲೆ ಇದೆ. ನಿಮಗೆ ಸಿಕ್ಕ ಅವಕಾಶಗಳನ್ನು ಸದ್ಭಳಕೆ ಮಾಡಿಕೊಂಡು ಗುರಿ ಮುಟ್ಟಬೇಕು ಎಂದು ರಾಜ್ಯೋತ್ಸವ ಪುರಸ್ಕೃತ ಮತ್ತು ಹಿರಿಯ ಪತ್ರಕರ್ತ ರಫೀ ಭಂಡಾರಿ ವಿದ್ಯಾರ್ಥಿನಿಯರಿಗೆ ಕಿವಿಮಾತು ಹೇಳಿದರು.

ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿನಿಯರಿಗಾಗಿ ಹಮ್ಮಿಕೊಂಡಿದ್ದ ನವೋಲ್ಲಾಸ- 2024 ಸ್ವಾಗತ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ನೀವು ಪತ್ರಿಕೋದ್ಯಮ ಅಧ್ಯಯನ ಆಯ್ಕೆ ಮಾಡಿಕೊಂಡಿರುವು ಒಳ್ಳೆಯ ಬೆಳವಣಿಗೆ. ಅಧ್ಯಯನಕ್ಕೆ ಆರ್ಥಿಕ ಸಮಸ್ಯೆ, ಒತ್ತಡ ಅಡ್ಡಿಯಾಗಬಹುದು. ಅಂತಹ ಸಮಸ್ಯೆಗಳನ್ನೆಲ್ಲ ಮೀರಿ ನಿಮ್ಮ ಗುರಿಯನ್ನು ನೀವು ಸಾಧಿಸಬೇಕು. ಪತ್ರಿಕೋದ್ಯಮ ವಿಷಯ ಆಯ್ಕೆ ಮಾಡಿಕೊಳ್ಳುವುದು ಅಷ್ಟು ಸುಲಭವಲ್ಲ, ಎಷ್ಟೋ ಕಷ್ಟಗಳು ಎದುರಾಗುತ್ತವೆ. ಅವುಗಳನ್ನು ಎದುರಿಸಿ ನಿಲ್ಲಬೇಕು. ಅಂದಾಗ ಮಾತ್ರ ಗುರಿ ಮುಟ್ಟಲು ಸಾಧ್ಯ ಎಂದರು.

ಮುಖ್ಯ ಅತಿಥಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷ ಸಂಗಮೇಶ ಚೂರಿ ಮಾತನಾಡಿ, ಪತ್ರಿಕೋದ್ಯಮವನ್ನು ಕಲಿಯುವ ತುಡಿತ, ಆಸಕ್ತಿ ಜೊತೆಗೆ ಶ್ರಮ ಪಟ್ಟರೆ ಈ ರಂಗದಲ್ಲಿ ಯಶಸ್ಸು ಕಂಡುಕೊಳ್ಳಲು ಸಾಧ್ಯ. ಈ ವೇಗದ ಜಗತ್ತಿನಲ್ಲಿ ಸ್ವ-ಇಚ್ಛೆಯಿಂದ ಈ ವಿಭಾಗಕ್ಕೆ ಆಗಮಿಸಿರುವ ಪತ್ರಿಕೋದ್ಯಮ ವಿದ್ಯಾರ್ಥಿನಿಯರಿಗೆ ಪರಿಪೂರ್ಣ ಜೀವನವನ್ನು ಕಟ್ಟಿಕೊಳ್ಳಲು ಸಹಾಯಕವಾಗುತ್ತದೆ. ಪತ್ರಿಕೋದ್ಯಮ ಎಂದರೆ ನಮ್ಮ ಸಂವಿಧಾನದ ನಾಲ್ಕನೆ ಅಂಗಯಿದ್ದಂತೆ. ಇಲ್ಲಿ ಪರಿಶ್ರಮ ಮತ್ತು ಪ್ರಾಮಾಣಿಕತೆ ಅತೀಮುಖ್ಯವಾಗಿದ್ದು, ಅಂದಾಗ ಮಾತ್ರ ನಾವು ಒಳ್ಳೆಯ ಪತ್ರಕರ್ತರಾಗಲು ಸಾಧ್ಯ ಎಂದರು.

ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಪ್ರೊ.ಓಂಕಾರ ಕಾಕಡೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಪತ್ರಿಕೋದ್ಯಮ ಕ್ಷೇತ್ರದಲ್ಲಿ ವಿಪುಲ ಅವಕಾಶಗಳಿದ್ದು, ಬದಲಾಗುತ್ತಿರುವ ತಂತ್ರಜ್ಞಾನ ಯುಗದಲ್ಲಿ ಇಲ್ಲಿರುವ ಅವಕಾಶಗಳನ್ನು ಬಳಸಿಕೊಂಡು ಯಶಸ್ಸು ಕಾಣುವಂತೆ ಹಾರೈಸಿದರು.

ಸಹಾಯಕ ಪ್ರಾಧ್ಯಾಪಕ ಸಂದೀಪ ನಾಯಕ ಮಾತನಾಡಿದರು. ರಫೀ ಭಂಡಾರಿ ಮತ್ತು ಸಂಗಮೇಶ ಚೂರಿ ಅವರನ್ನು ಸನ್ಮಾನಿಸಲಾಯಿತು. ಸಮಾರಂಭದಲ್ಲಿ ಬೋಧಕ- ಬೋಧಕೇತರ ಸಿಬ್ಬಂದಿ,ಸಂಶೋಧನಾ ಮತ್ತು ಸ್ನಾತಕೋತ್ತರ ವಿದ್ಯಾರ್ಥಿನಿಯರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಶೃತಿ ಬೆಳ್ಳುಂಡಗಿ ಸ್ವಾಗತಿಸಿದರು. ಖೋತಿಜಾ ಖಾನ್ ಪರಿಚಯಿಸಿದರು. ಮಲ್ಲಮ್ಮ ಪೂಜಾರಿ ನಿರೂಪಿಸಿದರು. ದೀಪಿಕಾ ಖತ್ರಿ ವಂದಿಸಿದರು.ಕೋಟ್

ಹಿಂದೆ ನಾವು ಆರ್ಥಿಕ ತೊಂದರೆಯಿಂದ ನನ್ನ ವಿದ್ಯಾಭ್ಯಾಸ ಪರಿಪೂರ್ಣಗೊಳಿಸಲು ಸಾಧ್ಯವಾಗಿರಲಿಲ್ಲ. ಇಂದಿನ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಆ ಸಂಕಷ್ಟ ಎದುರಾಗಬಾರದು ಎಂಬುವುದು ನಮ್ಮೆಲ್ಲರ ಆಶಯ. ಈ ಮೂಲಕ ನಾವು ಸರಕಾರಕ್ಕೆ ಮನವಿ ಸಲ್ಲಿಸಿ ಪತ್ರಿಕೋದ್ಯಮ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಸಹಾಯಧನ ನೀಡುವಂತೆ ಒತ್ತಾಯಿಸುತ್ತೇವೆ.

ಸಂಗಮೇಶ ಚೂರಿ, ಕಾನಿಪ ಜಿಲ್ಲಾಧ್ಯಕ್ಷ.

Share this article