ಮಲೆನಾಡಿನ ಮಳೆಯಿಂದ ಹಡಗಲಿ ಕೆರೆಗಳಿಗೆ ಜೀವ ಕಳೆ

KannadaprabhaNewsNetwork |  
Published : Aug 03, 2026, 02:30 AM IST
ಹೂವಿನಹಡಗಲಿ ತಾಲೂಕಿನ ಸಿಂಗಟಾಲೂರು ಯೋಜನೆ ಬ್ಯಾರೇಜ್‌ಗೆ ಹಿನ್ನೀರು ಹೆಚ್ಚಳವಾಗಿರುವುದು.ತಾಲೂಕಿನ ವಿವಿಧ ಕೆರೆಗಳು ನೀರಿಲ್ಲದೇ ಬತ್ತಿ ಹೋಗಿದ್ದವು, ನೀರು ಹರಿಸಿದ ಪರಿಣಾಮ ಮತ್ತೆ ಜೀವ ಕಳೆ ಬಂದಿದೆ.  | Kannada Prabha

ಸಾರಾಂಶ

ಸಿಂಗಟಾಲೂರು ಏತ ನೀರಾವರಿ ಯೋಜನೆ ಹಿನ್ನೀರಿನ ಮಾಗಳ ಗ್ರಾಮದ ಬಳಿಯ, 10 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಿಂದ ಎಲ್ಲ ಕೆರೆಗಳಿಗೂ ನೀರು ಹರಿಸಲಾಗುತ್ತಿದೆ. ಬತ್ತಿ ಬರಿದಾಗಿದ್ದ ಕೆರೆಗಳಿಗೆ ಮಲೆನಾಡಿನ ಮಳೆಯಿಂದ ಜೀವ ಕಳೆ ಬಂದಿದೆ.

ಚಂದ್ರು ಕೊಂಚಿಗೇರಿ

ಹೂವಿನಹಡಗಲಿ: ಮಲೆನಾಡಿನಲ್ಲಿ ವರುಣನ ಕೃಪೆಯಿಂದ ತುಂಗಭದ್ರೆ ತುಂಬಿ ಹರಿಯುತ್ತಿದ್ದಾಳೆ. ಇದರಿಂದಾಗಿ ಇಲ್ಲಿನ ಸಿಂಗಟಾಲೂರು ಬ್ಯಾರೇಜ್‌ಗೆ 32100 ಕ್ಯೂಸೆಕ್‌ ನೀರು ಒಳ ಹರಿವಿದೆ. ಸಿಂಗಟಾಲೂರು ಏತ ನೀರಾವರಿ ಯೋಜನೆ ಹಿನ್ನೀರಿನ ಮಾಗಳ ಗ್ರಾಮದ ಬಳಿಯ, 10 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಿಂದ ಎಲ್ಲ ಕೆರೆಗಳಿಗೂ ನೀರು ಹರಿಸಲಾಗುತ್ತಿದೆ. ಬತ್ತಿ ಬರಿದಾಗಿದ್ದ ಕೆರೆಗಳಿಗೆ ಮಲೆನಾಡಿನ ಮಳೆಯಿಂದ ಜೀವ ಕಳೆ ಬಂದಿದೆ.

ಸಿಂಗಟಾಲೂರು ಬ್ಯಾರೇಜ್‌ 509 ಮೀಟರ್‌ಗೆ ಗೇಟ್‌ ಅಳವಡಿಸಿದ್ದು ಒಟ್ಟು 3.117 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ಪೂರ್ಣ ಪ್ರಮಾಣದಲ್ಲಿ ನೀರು ನಿಲುಗಡೆಗೆ ಪುನರ್‌ ನಿರ್ಮಾಣ ಮತ್ತು ಪುನರ್‌ ವಸತಿ ಯೋಜನೆಯ ಕಾಮಗಾರಿಗಳ ಬಾಕಿ ಇರುವುದೇ ಅಡ್ಡಿಯಾಗಿದೆ. ಆದ್ದರಿಂದ ಸದ್ಯ 507.70 ಮೀಟರ್‌ಗೆ ನೀರು ನಿಲ್ಲಿಸಲಾಗಿದೆ. ಇದರಿಂದ 2.300 ಟಿಎಂಸಿ ನೀರು ಸಂಗ್ರಹವಾಗಿದೆ. ಭಾನುವಾರ ಬ್ಯಾರೇಜ್‌ಗೆ 32100 ಕ್ಯೂಸೆಕ್‌ ನೀರು ಒಳ ಹರಿವು ಇದ್ದು, ಅಷ್ಟೇ ಪ್ರಮಾಣದಲ್ಲಿ ಹೊರ ಹರಿವು ಇದೆ. ಯೋಜನೆಯ ಕೆಳ ಭಾಗದಲ್ಲಿ ಕೂಡ್ಲಿಗಿಯ 74 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಮತ್ತು ಹಗರಿಬೊಮ್ಮನಹಳ್ಳಿಯ ಮಾಲ್ವಿ ಜಲಾಶಯಕ್ಕೆ, ನೀರು ತುಂಬಿಸುವ ಯೋಜನೆಯ ಜಾಕ್ವೆಲ್‌ಗಳಿಗೂ ನೀರು ಲಭ್ಯವಿದ್ದು, ಆ ಭಾಗಕ್ಕೂ ನೀರು ಪೂರೈಕೆ ಮಾಡಲಾಗುತ್ತಿದೆ.

ತಾಲೂಕಿನ ಎಲ್ಲ ಹಳ್ಳಿಗಳಿಗೂ ತುಂಗಭದ್ರ ನದಿಯೇ ನೀರಿನ ಮೂಲವಾಗಿದೆ. ಈ ಬಾರಿ ಬರಕ್ಕೆ ತುತ್ತಾಗಿ ನೀರಿನ ತತ್ವಾರದಲ್ಲಿದ್ದ ಅನ್ನದಾತರಿಗೆ, ಸಿಂಗಟಾಲೂರು ಯೋಜನೆ ನೀರು ಆಸರೆಯಾಗಿ ನೀರಿನ ಬರ ನೀಗಿಸಿದೆ.

ಇಲ್ಲಿನ 10 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಿಂದ ದೂರವಿರುವ ಹಳ್ಳಿಗಳ ಕೆರೆಗಳಿಗೆ ನೀರು ತುಂಬಿಸಲಾಗುತ್ತಿದೆ. ಈಗಾಗಲೇ ಹಿರೇಹಡಗಲಿ ಕೆರೆ, ಅರಳಿಹಳ್ಳಿ ಕೆರೆ, ಹಗರನೂರು ಕೆರೆ, ಮುದೇನೂರು ಕೆರೆ, ದೇವಗೊಂಡನಹಳ್ಳಿ ಕೆರೆ, ಮಾನ್ಯರ ಮಸಲವಾಡ ಕೆರೆ, ಕಗ್ಗಲಗಟ್ಟಿ ತಾಂಡಾ ಕೆರೆ, ನಾಗತಿ ಬಸಾಪುರ ಕೆರೆ, ಹ್ಯಾರಡ ಗ್ರಾಮದ ಹಳೆ ಮಲಿಯಮ್ಮ ಕೆರೆ, ಹೊಸ ಮಲಿಯಮ್ಮ ಕೆರೆ, ಹಗರಿಬೊಮ್ಮನಹಳ್ಳಿ ತಾಲೂಕಿನ ಬನ್ನಿಕಲ್ಲು ಕೆರೆ, ದಾಸನಹಳ್ಳಿ ಬಳಿಯ ಪೋತಲಗಟ್ಟಿ ಕೆರೆಗಳಿಗೆ ನೀರು ಹರಿಸಲಾಗುತ್ತಿದೆ. ಉಳಿದಂತೆ ಮಲ್ಲನಕೆರೆ ಗ್ರಾಮದ ಕೆರೆ, ತಳಕಲ್ಲು ಗ್ರಾಮದ ಕೆರೆಗಳಿಗೂ ನೀರು ಹರಿಸುತ್ತೇವೆಂದು ಅಧಿಕಾರಿಗಳು ಹೇಳುತ್ತಾರೆ.

ಬರದಲ್ಲಿ ಕೊಳವೆ ಬಾವಿಗಳು ಬತ್ತಿ ಹೋಗಿದ್ದವು. ಕೆರೆಗಳಿಗೆ ನೀರು ತುಂಬುವುದರಿಂದ, ರೈತರ ಕೊಳವೆ ಬಾವಿಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಳವಾಗಿ ಬಿತ್ತನೆ ಮಾಡಿರುವ ಬೆಳೆಗಳಿಗೂ ಅನುಕೂಲವಾಗುತ್ತಿದೆ.

ತುಂಗಭದ್ರಾ ನದಿಯಲ್ಲಿ ಸಾಕಷ್ಟು ನೀರಿದೆ. ಕೂಡಲೇ ಅಧಿಕಾರಿಗಳು ಕೆರೆ, ಕಾಲುವೆಗಳಿಗೆ ನೀರು ಹರಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ, ತಳಕಲ್ಲು ಕೆರೆ ಹೋರಾಟ ಸಮಿತಿ ಸೇರಿದಂತೆ ಈ ಯೋಜನೆಯ, ಅಚ್ಚುಕಟ್ಟು ಪ್ರದೇಶದ ಎಲ್ಲ ರೈತರೂ ನೀರು ಹರಿಸುವಂತೆ ಪ್ರತಿಭಟನೆ, ಧರಣಿ ಸತ್ಯಾಗ್ರಹ ಮಾಡಿದ್ದರು.

ಮಲೆನಾಡು ಪ್ರದೇಶದಲ್ಲಿ ನಿರಂತರ ಮಳೆಯಾಗುತ್ತಿದ್ದು, ತುಂಗಭದ್ರಾ ನದಿಗೆ ಒಳ ಹರಿವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಯೋಜನೆ ವ್ಯಾಪ್ತಿಯ ಎಲ್ಲ ಕೆರೆಗಳಿಗೂ ನೀರು ಹರಿಸುತ್ತಿದ್ದೇವೆ. ಶೀಘ್ರದಲ್ಲೇ ಹಿರೇಮಲ್ಲನಕೆರೆ ಮತ್ತು ತಳಕಲ್ಲು ಕೆರೆಗೂ ನೀರು ಹರಿಸುತ್ತೇವೆ ಎನ್ನುತ್ತಾರೆ ಯೋಜನೆಯ ಎಇಇ ಎಚ್‌.ಸಿ. ರಾಘವೇಂದ್ರ.

ಹ್ಯಾರಡ ಕಾಯ್ದಿಟ್ಟ ಅರಣ್ಯ ಪ್ರದೇಶದ ಪಕ್ಕದಲ್ಲೇ ಇರುವ ಕೆರೆಗೆ ನೀರು ಹರಿದು ಬರುತ್ತಿದೆ. ವನ್ಯ ಜೀವಿಗಳಿಗೆ ಮತ್ತು ಜನ ಜಾನುವಾರು ನೀರಿನ ದಾಹ ನೀಗಿಸಿದೆ ಎನ್ನುತ್ತಾರೆ ಶಾಂತರಾಜ್‌ ಜೈನ್‌.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸ್ವಯಂ ಉದ್ಯೋಗಕ್ಕೆ ಆದ್ಯತೆ ನೀಡಿ: ರುದ್ರಪ್ಪ ಲಮಾಣಿ
ಗ್ರಾಪಂ ಡಿ ದರ್ಜೆ ನಿವೃತ್ತರಿಗೆ ಉಪಧನ ಮರೀಚಿಕೆ