ಭಾರತಪ್ರಪಂಚವಿಶೇಷರಾಜಕೀಯಮನರಂಜನೆಅಪರಾಧಕ್ರೀಡೆಕರ್ನಾಟಕಇ- ಪೇಪರ್

ಮಲ್ಲಿಕಾರ್ಜುನ ಕಡಕೋಳ ರಂಗಕರ್ಮಿಯೇ ಅಲ್ಲ, ನಿರ್ದೇಶಕಗಿರಿಯಿಂದ ಕೈಬಿಡಿ

KannadaprabhaNewsNetwork | Published : Mar 11, 2025 12:50 AM

ದಾವಣಗೆರೆಯಲ್ಲಿ ಮಾ.15ರಿಂದ ಮೂರು ದಿನಗಳ ಕಾಲ ನಡೆಯುವ ರಾಷ್ಟ್ರೀಯ ವೃತ್ತಿ ರಂಗೋತ್ಸವವನ್ನು ವೃತ್ತಿ ರಂಗಭೂಮಿ ಪ್ರಜ್ಞಾವಂತ ಕಲಾವಿದರು ಬಹಿಷ್ಕರಿಸುತ್ತಿರುವುದಾಗಿ ರಾಜ್ಯ ವೃತ್ತಿ ರಂಗಭೂಮಿ ಕಲಾವಿದರ ಸಂಘದ ಅಧ್ಯಕ್ಷ ಎ.ಭದ್ರಪ್ಪ ಹೇಳಿದ್ದಾರೆ.

- ಸ್ಥಳೀಯ ಕಂಪನಿ ಕಲಾವಿದರಿಗೆ ನಿರ್ಲಕ್ಷ್ಯ ಹಿನ್ನೆಲೆ ರಾಷ್ಟ್ರೀಯ ವೃತ್ತಿ ರಂಗೋತ್ಸವಕ್ಕೆ ಬಹಿಷ್ಕಾರ: ಭದ್ರಪ್ಪ ಎಚ್ಚರಿಕೆ - - - ಕನ್ನಡಪ್ರಭ ವಾರ್ತೆ ದಾವಣಗೆರೆ

ದಾವಣಗೆರೆಯಲ್ಲಿ ಮಾ.15ರಿಂದ ಮೂರು ದಿನಗಳ ಕಾಲ ನಡೆಯುವ ರಾಷ್ಟ್ರೀಯ ವೃತ್ತಿ ರಂಗೋತ್ಸವವನ್ನು ವೃತ್ತಿ ರಂಗಭೂಮಿ ಪ್ರಜ್ಞಾವಂತ ಕಲಾವಿದರು ಬಹಿಷ್ಕರಿಸುತ್ತಿರುವುದಾಗಿ ರಾಜ್ಯ ವೃತ್ತಿ ರಂಗಭೂಮಿ ಕಲಾವಿದರ ಸಂಘದ ಅಧ್ಯಕ್ಷ ಎ.ಭದ್ರಪ್ಪ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಾವಣಗೆರೆಯಲ್ಲಿ ನಡೆಯುವ ವೃತ್ತಿ ರಂಗೋತ್ಸವಕ್ಕೆ ಸ್ಥಳೀಯ ಕಲಾವಿದರ ಕಂಪನಿಗಳಿಗೆ ಅವಕಾಶವನ್ನೇ ಕೊಡದೇ ಬೇರೆಯವರಿಗೆ ಅವಕಾಶ ನೀಡಿದ್ದು ಖಂಡನೀಯ ಎಂದರು.

ವೃತ್ತಿ ರಂಗಭೂಮಿ ರಂಗಾಯಣ ನಿರ್ದೇಶಕ ಮಲ್ಲಿಕಾರ್ಜುನ ಕಡಕೋಳರ ಸ್ವಜನ ಪಕ್ಷಪಾತ, ಸ್ಥಳೀಯರ ಕಡೆಗಣನೆ ವಿರೋಧಿಸಿ, ವೃತ್ತಿ ರಂಗಭೂಮಿ ಕಲಾವಿದರ ಸಂಘ ಮತ್ತು ವೃತ್ತಿ ರಂಗಭೂಮಿ ಕಲಾವಿದರ ಒಕ್ಕೂಟದಿಂದ ರಾಷ್ಟ್ರೀಯ ವೃತ್ತಿ ರಂಗೋತ್ಸವವನ್ನು ಬಹಿಷ್ಕರಿಸಲು ನಿರ್ಧರಿಸಲಾಗಿದೆ. ಮೂರು ದಿನಗಳ ರಂಗೋತ್ಸವದಲ್ಲಿ ನಾವ್ಯಾರೂ ಸಹ ಭಾಗವಹಿಸುವುದಿಲ್ಲ ಎಂದರು.

ಅಲ್ಲದೇ, ವೃತ್ತಿ ರಂಗಭೂಮಿ ರಂಗಾಯಣಕ್ಕೆ ಯಾವುದೇ ರೀತಿ ಅರ್ಹರಲ್ಲದ ಮಲ್ಲಿಕಾರ್ಜುನ ಕಡಕೋಳ ರಂಗಭೂಮಿ ಕಲಾವಿದರೂ ಅಲ್ಲ. ರಂಗ ಸಂಗೀತ ನಿರ್ದೇಶಕರಲ್ಲ. ನಾಟಕಗಳ ಲೇಖಕರೂ, ನಿರ್ದೇಶಕರಲ್ಲ. ಕಂಪನಿ ಮಾಲೀಕರಲ್ಲ. ಇದೆಲ್ಲಾ ಹೋಗಲಿ, ಕನಿಷ್ಠ ಪಕ್ಷ ರಂಗಕರ್ಮಿಯೂ ಅಲ್ಲ. ಇಂಥವರು ವೃತ್ತಿ ರಂಗಭೂಮಿ ರಂಗಾಯಣ ನಿರ್ದೇಶಕರಾಗಿದ್ದೇ ಆಶ್ಚರ್ಯಕರ ಸಂಗತಿಯಾಗಿದೆ. ಇಂತಹವರು ವೃತ್ತಿ ರಂಗಭೂಮಿಗೆ ಯಾವುದೇ ಬದ್ಧತೆ, ಅರ್ಹತೆ ಇಲ್ಲದ ವ್ಯಕ್ತಿಯಾಗಿದ್ದಾರೆ ಎಂದು ದೂರಿದರು.

ರಂಗೋತ್ಸವದಲ್ಲಿ ದಾವಣಗೆರೆ ವೃತ್ತಿ ರಂಗ ಕಲಾವಿದರಿಗೆ ಅವಕಾಶ ಕೇಳಿದ್ದಕ್ಕೆ ನೀವು ಬರೀ ಹಳೆ ನಾಟಕ ಆಡುತ್ತೀರಿ. ನಿಮ್ಮ ನಾಟಕದಲ್ಲಿ ಗುಣಮಟ್ಟ ಇಲ್ಲ ಎಂದು ನೇರವಾಗಿಯೇ ಹೇಳಿದ್ದಾರೆ. ಇಲ್ಲಿ 2 ವೃತ್ತಿ ರಂಗಭೂಮಿಯ ಕಂಪನಿಗಳಿವೆ. ಅದ್ಯಾವುದನ್ನೂ ಪರಿಗಣಿಸದೇ ಅವಮಾನಿಸಲಾಗಿದೆ. ದಾವಣಗೆರೆ ಕೆಬಿಆರ್‌ ಡ್ರಾಮಾ ಕಂಪನಿ, ಜಯಲಕ್ಷ್ಮೀ ನಾಯಕ ಸಂಘ ಇನ್ನೂ ಜೀವಂತವಾಗಿವೆ. ಹೊಸ ನಾಟಕ ಮಾಡುವುದಿಲ್ಲ ಎನ್ನುವ ನಿರ್ದೇಶಕರು ತಾವೇ ಈಚೆಗೆ ನಡೆಸಿದ ಹೊಸ ನಾಟಕಗಳ ರಚನಾ ಶಿಬಿರದಿಂದ ಹೊಸ ನಾಟಕಗಳನ್ನು ಸ್ಥಳೀಯ ವೃತ್ತಿ ಕಲಾವಿದರಿಂದ ಪ್ರದರ್ಶಿಸಬೇಕಿತ್ತಲ್ಲವೇ ಎಂದು ಪ್ರಶ್ನಿಸಿದರು.

ನಿರ್ದೇಶಕ ಕಡಕೋಳರ ಹೇಳಿಕೆಯಿಂದ ದಾವಣಗೆರೆ ವೃತ್ತಿ ಕಲಾವಿದರ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ. ರಂಗಾಯಣದಿಂದ ಮುಂದಿನ ದಿನಗಳಲ್ಲಿ ಯಾವುದೇ ಕಾರ್ಯಕ್ರಮ ಆಯೋಜಿಸಿದರೂ ಅವುಗಳನ್ನು ಸ್ವಾಭಿಮಾನಿ ಕಲಾವಿದರು ಬಹಿಷ್ಕರಿಸುತ್ತೇವೆ. ವೃತ್ತಿ ರಂಗಭೂಮಿಗೆ ಸಂಬಂಧಿಸದ ಕಡಕೋಳ ಅವರನ್ನು ತಕ್ಷಣ ಬದಲಿಸಿ, ವೃತ್ತಿ ರಂಗಭೂಮಿಯ ಅರ್ಹ, ಅನುಭವ ಇರುವ ವ್ಯಕ್ತಿಗಳನ್ನು ನೇಮಿಸಬೇಕು. ಈ ಬಗ್ಗೆ ಕಲಾವಿದರು, ಪತ್ರಕರ್ತ ಅಹಮ್ಮದ್ ಷರೀಫ್ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಅವರಿಗೆ ಫೋನ್ ಮೂಲಕ, ಲಿಖಿತ ಪತ್ರ ಬರೆದು ಒತ್ತಾಯಿಸಿದ್ದಾರೆ ಎಂದು ತಿಳಿಸಿದರು.

ರಾಜ್ಯ ರಂಗಭೂಮಿ ಕಲಾವಿದರ ಒಕ್ಕೂಟದ ಪದಾಧಿಕಾರಿ, ಸುವರ್ಣ ಕರ್ನಾಟಕ ಪ್ರಶಸ್ತಿ ಪುರಸ್ಕೃತ ಹಿರಿಯ ಕಲಾವಿದೆ ಸಾವಿತ್ರಿ ರಿತ್ತಿ ಮಾತನಾಡಿ, ವೃತ್ತಿ ರಂಗಭೂಮಿಯ ಕೆಲ ಸಂಘಗಳನ್ನು ಸಂಪರ್ಕಿಸದೇ, ಅಂತಹ ಸಂಘಗಳ ಹೆಸರನ್ನು ಹಾಕಿಕೊಳ್ಳುವುದು ಎಷ್ಟರಮಟ್ಟಿಗೆ ಸರಿ? ಕಳೆದ 29 ವರ್ಷದಿಂದ ನಿರಂತರ ಚಟುವಟಿಕೆಯಲ್ಲಿರುವ ರಾಜ್ಯ ವೃತ್ತಿ ರಂಗಭೂಮಿ ಕಲಾವಿದರ ಸಂಘದ ಹೆಸರನ್ನು ಸ್ಮರಿಸದೇ, ವೃತ್ತಿ ರಂಗಭೂಮಿಗೆ ಸಂಬಂಧಿಸದ ಸಂಘದ ಹೆಸರನ್ನು ಹಾಕಿಕೊಳ್ಳಲಾಗಿದೆ ಎಂದು ದೂರಿದರು.

ಸಂಘದ ತುರುವನೂರು ಅಹಮ್ಮದ್ ಷರೀಫ್ ಮಾತನಾಡಿ, ವೃತ್ತಿ ರಂಗಭೂಮಿ ರಂಗಾಯಣ ನಿರ್ದೇಶಕರಾದವರಿಗೆ ವೃತ್ತಿ ರಂಗಭೂಮಿಯ ಯಾವುದೇ ಚಟುವಟಿಕೆಗೆ ಸಂಬಂಧವೇ ಇಲ್ಲ. ಅಂತಹವರು ಯಾರದ್ದೋ ಶಿಫಾರಸು ಮಾಡಿಸಿ, ನಿರ್ದೇಶಕರಾಗಿದ್ದಾರೆ. ತಕ್ಷಣವೇ ನಿರ್ದೇಶಕ ಸ್ಥಾನದಿಂದ ತೆಗೆದು ಹಾಕಬೇಕು ಎಂದು ಒತ್ತಾಯಿಸಿದರು.

ಸಂಘದ ಕೆ.ಎಸ್. ಕೊಟ್ರೇಶ, ಶಶಿಕಲಾ, ಮಹೇಶ, ಜಿ.ನಾಗವೇಣಿ, ಮಹೇಶ್ವರಪ್ಪ ದೊಡ್ಡಮನಿ, ತಿಪ್ಪೇಸ್ವಾಮಿ ಚೌಹಾಣ್, ಹನುಮಂತ ರಾವ್ ಪವಾರ್‌ ಇತರರು ಇದ್ದರು.

- - - -10ಕೆಡಿವಿಜಿ65.ಜೆಪಿಜಿ:

ದಾವಣಗೆರೆಯಲ್ಲಿ ಸೋಮವಾರ ರಾಜ್ಯ ವೃತ್ತಿ ರಂಗಭೂಮಿ ಕಲಾವಿದರ ಸಂಘದ ಅಧ್ಯಕ್ಷ ಎ.ಭದ್ರಪ್ಪ, ತುರುವನೂರು ಅಹಮ್ಮದ್ ಷರೀಫ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.