ಚಲಿಸುತ್ತಿದ್ದ ಬಸ್‌ನಲ್ಲಿಯೇ ವ್ಯಕ್ತಿಗೆ ಚಾಕು ಇರಿದು ಕೊಲೆ

KannadaprabhaNewsNetwork | Published : Feb 23, 2025 12:30 AM

ಸಾರಾಂಶ

ಸಾಗರದವನೇ ಆದ ಪ್ರೀತಮ್‌ ಡಿಸೋಜಾ ಕೊಲೆ ಮಾಡಿದ ಆರೋಪಿ.

ಶಿರಸಿ: ಚಲಿಸುತ್ತಿದ್ದ ಸಾರಿಗೆ ಸಂಸ್ಥೆ ಬಸ್‌ನಲ್ಲಿಯೇ ವ್ಯಕ್ತಿಯೋರ್ವನನ್ನು ಚೂರಿಯಿಂದ ಇರಿದು ಬರ್ಬರವಾಗಿ ಹತ್ಯೆಗೈದ ಘಟನೆ ಶನಿವಾರ ರಾತ್ರಿ ಶರಸಿಯಲ್ಲಿ ನಡೆದಿದೆ. ಅಕ್ರಮ ಸಂಬಧವೇ ಈ ಹತ್ಯೆಗೆ ಕಾರಣ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಸಾಗರ ತಾಲೂಕಿನ ಗಂಗಾಧರ ಮಂಜುನಾಥ ವಸಂತೆ (35) ಮೃತ ವ್ಯಕ್ತಿ. ಸಾಗರದವನೇ ಆದ ಪ್ರೀತಮ್‌ ಡಿಸೋಜಾ ಕೊಲೆ ಮಾಡಿದ ಆರೋಪಿ. ಕೊಲೆ ಮಾಡಿದ ಬಳಿಕ ಆತ ಚಲಿಸುತ್ತಿದ್ದ ಬಸ್ಸಿನಿಂದ ಇಳಿದು ಪರಾರಿಯಾಗಿದ್ದಾನೆ.

ಗಂಗಾಧರ ತನ್ನ ಪತ್ನಿಯ ಜೊತೆ ಅಂಕೋಲಾದಿಂದ ಶಿರಸಿ ಮಾರ್ಗವಾಗಿ ಬೆಂಗಳೂರಿಗೆ ತೆರಳುತ್ತಿದ್ದ ಬಸ್‌ನಲ್ಲಿ ತೆರಳುತ್ತಿದ್ದ. ಶಿರಸಿಯ ಹೊಸ ಬಸ್‌ ನಿಲ್ದಾಣದಿಂದ ಕೇಂದ್ರೀಯ ಬಸ್‌ ನಿಲ್ದಾಣ (ಹಳೆ ಬಸ್‌ ಸ್ಟ್ಯಾಂಡ್‌)ಕ್ಕೆ ಬಸ್‌ ತೆರಳುತ್ತಿರುವ ಸಂದರ್ಭದಲ್ಲಿಯೇ ಆರೋಪಿ ಚಾಕುವಿನಿಂದ ಇರಿದಿದ್ದಾನೆ. ಆರೋಪಿ ಪ್ರೀತಮ್ ಡಿಸೋಜಾ ಸಹ ಅದೇ ಬಸ್‌ನಲ್ಲಿ ಇದ್ದ. ಆದರೆ ಅದು ಗಂಗಾಧರನ ಗಮನಕ್ಕೆ ಬಂದಿಲ್ಲ ಎನ್ನಲಾಗಿದೆ. ಗಂಗಾಧರನ ಜೊತೆ ಜಗಳ ತೆಗೆದು ಎದೆಗೆ ಚಾಕುವಿನಿಂದ ಭೀಕರವಾಗಿ ಇರಿದಿದ್ದಾನೆ. ಸ್ಥಳದಲ್ಲಿಯೇ ಗಂಗಾಧರ ಕುಸಿದು ಬಿದ್ದಿದ್ದಾನೆ. ಬಸ್ ಚಾಲಕ ಪಂಡಿತ್ ಸಾರ್ವಜನಿಕ ಆಸ್ಪತ್ರೆ ಒಳಗೆ ಬಸ್ನಿ ಒಯ್ದು ನಿಲ್ಲಿಸಿ, ಪ್ರಾಣ ಉಳಿಸಲು ಪ್ರಯತ್ನಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ.

ಪ್ರೀತಮ್‌ ಡಿಸೋಜಾನ ಪತ್ನಿಯ ಜೊತೆ ಗಂಗಾಧರ ಅಕ್ರಮ ಸಂಬಂಧ ಹೊಂದಿದ್ದ ಎಂದು ಹೇಳಲಾಗಿದೆ. ಅದೇ ಕಾರಣಕ್ಕೆ ಇಬ್ಬರ ನಡುವೆ ಗಲಾಟೆ ನಡೆಯುತ್ತಿತ್ತು. ಇತ್ತೀಚಿಗೆ ಜಾತ್ರೆಯೊಂದರ ಸಂದರ್ಭದಲ್ಲೂ ಜಗಳ ನಡೆದಿತ್ತು ಎಂದು ಮೂಲಗಳು ತಿಳಿಸಿವೆ. ಈ ಕುರಿತು ತನಿಖೆ ನಡೆಯಬೇಕಿದೆ.

ಆರೋಪಿ ಬಂಧನಕ್ಕೆ ಪಿಎಸ್‌ಐ ನಾಗಪ್ಪ ಬಿ. ನೇತೃತ್ವದಲ್ಲಿ ತನಿಖೆ ಕೈಗೊಂಡದ್ದಾರೆ. ಸ್ಥಳಕ್ಕೆ ಡಿಎಸ್ಪಿ ಕೆ.ಎಲ್.ಗಣೇಶ ಭೇಟಿ ನೀಡಿದ್ದಾರೆ.

Share this article