ಕನ್ನಡಪ್ರಭ ವಾರ್ತೆ ಚಾಮರಾಜನಗರಚಾಮರಾಜನಗರ ತಾಲೂಕಿನ ಮಂಗಲ ಗ್ರಾಮದಲ್ಲಿ 12 ವರ್ಷಗಳಿಗೊಮ್ಮೆ ವಿಶೇಷ ಜಾತ್ರೆ ನಡೆಯಲಿದೆ. ಆದರೆ, ಈ ಜಾತ್ರೆಯಲ್ಲಿ ವಿಶೇಷವಾಗಿ ಒಂದು ಸಮುದಾಯದ ಜನರು ಎಲ್ಲಾರನ್ನೂ ಬೈದು, ವಿಡಂಬನೆ ಮಾಡಿ ಹಾಸ್ಯದ ಹೊನಲು ಹರಿಸುವುದೇ ಈ ಜಾತ್ರೆಯ ವಿಶೇಷವಾಗಿದೆ.
ಚಾಮರಾಜನಗರ ತಾಲೂಕಿನ ಮಂಗಲ ಎಂಬ ಗ್ರಾಮದಲ್ಲಿ ಕಳೆದ 17 ರಿಂದ ಇಂದಿನ ತನಕ ಮೂರು ದಿನಗಳ ಅದ್ಧೂರಿಯಾಗಿ ಹಬ್ಬ ನಡೆಯಲಿದ್ದು, ಇದು ಹಿರಿಯ ಹಬ್ಬ ಅಂಥಲೇ ಜನಪ್ರಿಯವಾಗಿದೆ. ಹತ್ತಾರು ಸಮುದಾಯಗಳು ಈ ಗ್ರಾಮದಲ್ಲಿ ನೆಲೆಸಿದ್ದು ಎಲ್ಲರೂ ಸೇರಿ ಈ ಹಬ್ಬವನ್ನು ಆಚರಿಸಿಕೊಂಡು ಬರುತ್ತಾರೆ. ಕುರುಬ ಸಮುದಾಯ ಈ ಜಾತ್ರೆಯ ಆಕರ್ಷಣೆ ಕೇಂದ್ರವಾಗಿದ್ದು ಎದುರಿಗೆ ಬಂದ ಪ್ರಮುಖರನ್ನು, ಊರಿನ ಮುಖಂಡರನ್ನು ಅಶ್ಲೀಲವಾಗಿ, ಕೊಂಕು, ವಿಡಂಬನೆಯಿಂದ ಬಾಜಿ ಕಟ್ಟಿದ್ದಂತೆ ಬೈಯ್ಯಲಿದ್ದಾರೆ. ಇವರ ಬೈಗುಳವನ್ನು ಕೇಳಿ ಎಲ್ಲರೂ ನಕ್ಕು ಸುಮ್ಮನಾಗಲಿದ್ದು ಇವರ ಬೈಗುಳ ಕೇಳಲೆಂದೇ ಅಕ್ಕಪಕ್ಕದ ಊರಿನ ಜನರು ಸೇರಿ ಜಾತ್ರೆಯ ಸಂಭ್ರಮವನ್ನು ಹೆಚ್ಚಿಸುತ್ತಾರೆ. ಮಂಗಲ ಗ್ರಾಮದ ವಿಪ್ರ ಮುಖಂಡ ಶ್ರೀಕಂಠಮೂರ್ತಿ ಹಾಗೂ ಉಪ್ಪಾರ ಸಮುದಾಯದ ಯಜಮಾನರಾದ ಕ್ಯಾತಶೆಟ್ಟಿ ಈ ಕುರಿತು ಮಾತನಾಡಿ, ಶತಮಾನಗಳಿಂದಲೂ ಈ ಹಿರಿಯ ಹಬ್ಬ ಆಚರಣೆಯಲ್ಲಿದ್ದು ಬೀರೇಶ್ವರ ಸ್ವಾಮಿ ಉತ್ಸವ ಹಾಗೂ ಓಕುಳಿ ಆಡಲಿದ್ದಾರೆ. ಎಲ್ಲಾ ಸಮುದಾಯವೂ ಈ ಜಾತ್ರೆಯಲ್ಲಿ ಪಾಲ್ಗೊಂಡು ಸಹಬಾಳ್ವೆಗೆ ಮುನ್ನುಡಿ ಬರೆಯಲಿದ್ದು ಕುರುಬ ಸಮುದಾಯ ಈ ಹಬ್ಬಕ್ಕೆ ಮತ್ತಷ್ಟು ರಂಗು ತುಂಬಲಿದ್ದಾರೆ. ಆ ಸಮುದಾಯ ಮಾತ್ರ ಈ ಬೈಗುಳದಲ್ಲಿ ಪಾಲ್ಗೊಳ್ಳಬೇಕು, ಅವರು ಮಾತ್ರ ಬೈಯ್ಯಲಿದ್ದು ಒಂದು ರೀತಿ ಮನರಂಜನೆಯಾಗಿಯೂ ಇದು ಕಾಣಲಿದೆ ಎಂದರು.ಒಟ್ಟಿನಲ್ಲಿ ಜಾತ್ರೆ ಎಂದರೆ ಕೇವಲ ಉತ್ಸವ ಮಾತ್ರ ನಡೆಯುವುದು ಸಾಮಾನ್ಯ. ಆದರೆ, ವಾಚಮಗೋಚರವಾಗಿ ಬೈಯ್ಯುವುದು ಕೂಡ ಇದರ ಭಾಗವಾಗಿರುವುದು ವಿಶೇಷವೇ ಆಗಿದೆ.