ಮಂಗಳೂರು: ಚುನಾವಣಾ ಪ್ರಚಾರ ವೇಳೆ ಕಾಂಗ್ರೆಸ್‌- ಬಿಜೆಪಿಗರ ಗಲಾಟೆ

KannadaprabhaNewsNetwork | Updated : Apr 19 2024, 11:53 AM IST

 ಶ್ರೀಸಾಯಿ ಮಂದಿರದ ಬಳಿ ಬಿಜೆಪಿಗರು   ಚುನಾವಣೆ ಪ್ರಚಾರಕ್ಕೆ ಮುಂದಾಗಿದ್ದರು. ಮಂದಿರದ ಬಳಿ ಪ್ರಚಾರ ನಡೆಸುವುದಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದಾಗ ವಾಗ್ವಾದ, ಮಾತಿನ ಚಕಮಕಿ, ಹೊಯ್‌ ಕೈ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

 ಮಂಗಳೂರು :  ನಗರ ಹೊರವಲಯದ ಚಿಲಿಂಬಿ ಶ್ರೀಸಾಯಿ ಮಂದಿರದ ಬಳಿ ಚುನಾವಣಾ ಪ್ರಚಾರ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ಮಧ್ಯೆ ಹೊಯ್‌ಕೈ ಘಟನೆ ಗುರುವಾರ ಸಂಭವಿಸಿದೆ.

ಇಲ್ಲಿನ ಶ್ರೀಸಾಯಿ ಮಂದಿರದ ಬಳಿ ಬಿಜೆಪಿಗರು ಚುನಾವಣಾ ಪ್ರಚಾರ ಮಾಡುತ್ತಿದ್ದಾಗ ಕಾಂಗ್ರೆಸಿಗರು ಪ್ರಚಾರ ನಡೆಸದಂತೆ ಸೂಚಿಸಿದರು ಎನ್ನಲಾಗಿದೆ. ಇದನ್ನು ಬಿಜೆಪಿಗರು ವಿರೋಧಿಸಿದ್ದು, ಈ ಸಂದರ್ಭ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿ, ಹೊಯ್‌ಕೈ ನಡೆದಿದೆ. ಅಷ್ಟರಲ್ಲಿ ಶಾಸಕ ವೇದವ್ಯಾಸ ಕಾಮತ್‌ ಮತ್ತು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಮಧ್ಯಪ್ರವೇಶಿಸಿ ಆಯಾ ಪಕ್ಷದ ಕಾರ್ಯಕರ್ತರನ್ನು ಸಮಾಧಾನಪಡಿಸಿದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಮಾಹಿತಿ ತಿಳಿದ ಪೊಲೀಸರು ತಕ್ಷಣ ಸ್ಥಳಕ್ಕೆ ತೆರಳಿ ಇತ್ತಂಡದ ಗುಂಪುಗಳನ್ನು ಚದುರಿಸಿದ್ದಾರೆ.

ರಾಮನವಮಿಯ ಹಿನ್ನೆಲೆಯಲ್ಲಿ ಚಿಲಿಂಬಿಯ ಸಾಯಿ ಮಂದಿರದ ಬಳಿ ಭಾರೀ ಸಂಖ್ಯೆಯ ಭಕ್ತರು ಸೇರಿದ್ದರು. ಈ ವೇಳೆ ಬಿಜೆಪಿಗರು ಇಲ್ಲೇ ಚುನಾವಣೆ ಪ್ರಚಾರಕ್ಕೆ ಮುಂದಾಗಿದ್ದರು. ಮಂದಿರದ ಬಳಿ ಪ್ರಚಾರ ನಡೆಸುವುದಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದಾಗ ವಾಗ್ವಾದ, ಮಾತಿನ ಚಕಮಕಿ, ಹೊಯ್‌ಕೈ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾಂಗ್ರೆಸ್‌ ದಬ್ಬಾಳಿಕೆ ಬಿಜೆಪಿ ಆರೋಪ: ಸಂವಿಧಾನದ ಪ್ರಕಾರ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮತಯಾಚನೆ ಮಾಡುವ ಅಧಿಕಾರ ಇದೆ. ಆದರೆ ಕಾಂಗ್ರೆಸಿಗರು ತಮ್ಮ ಗೂಂಡಾ ವರ್ತನೆಯಿಂದ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರ ಮೇಲೆ ದೌರ್ಜನ್ಯ ನಡೆಸಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.

ಚಿಲಿಂಬಿ ಪರಿಸರದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಗುರುವಾರ ಬಿಜೆಪಿ ಮಂಗಳೂರು ದಕ್ಷಿಣದ ಯುವಮೋರ್ಚಾ ಕಾರ್ಯಕರ್ತರು ಪಕ್ಷದ ಅಭ್ಯರ್ಥಿಯ ಪರ ಪ್ರಚಾರ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮುಸ್ಲಿಂ ಯುವಕರೊಂದಿಗೆ ಅಲ್ಲಿಗೆ ಆಗಮಿಸಿ ಬಿಜೆಪಿ ಕಾರ್ಯಕರ್ತರಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ನೀವು ಇಲ್ಲಿ ಪ್ರಚಾರ ಮಾಡಬಾರದು ಎಂದು ಜೋರು ಮಾಡಿ ಹಲ್ಲೆಗೆ ಯತ್ನಿಸಿದ್ದಾರೆ. ಆದರೆ ಬಿಜೆಪಿ ಕಾರ್ಯಕರ್ತರು ಶಾಂತಿಯುತವಾಗಿ ವರ್ತಿಸಿ ಯಾವುದೇ ಗಲಭೆಗೆ ಆಸ್ಪದ ನೀಡಲಿಲ್ಲ. ಕಾಂಗ್ರೆಸ್‌ ಸೋಲುವ ಭಯದಿಂದ ಹತಾಶೆಗೊಂಡು ಗಲಾಟೆಗೆ ಕುಂಟು ನೆಪ ಹುಡುಕುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.