ಲೇಡಿಗೋಷನ್‌ ಮಾದರಿ ಇತರೆ ಆಸ್ಪತ್ರೆಗಳಿಗೆ ವಿಸ್ತರಣೆಗೆ ಸೂಚನೆ: ಡಾ.ನಾಗಲಕ್ಷ್ಮೀ ಚೌಧರಿ

KannadaprabhaNewsNetwork |  
Published : Mar 07, 2026, 01:00 AM IST
ಮಂಗಳೂರಿನ ಲೇಡಿಗೋಷನ್‌ ಆಸ್ಪತ್ರೆಗೆ ಡಾ.ನಾಗಲಕ್ಷ್ಮೀ ಚೌಧರಿ ಭೇಟಿ  | Kannada Prabha

ಸಾರಾಂಶ

ಮಂಗಳೂರಿನ ಲೇಡಿಗೋಷನ್ ತಾಯಿ ಮಗುವಿನ ಆಸ್ಪತ್ರೆ ನಿರ್ವಹಣೆ ಮತ್ತು ಕಾರ್ಯವೈಖರಿ ಅತ್ಯುತ್ತಮವಾಗಿದ್ದು, ಈ ಆಸ್ಪತ್ರೆಯ ಮಾದರಿಯನ್ನು ರಾಜ್ಯದ ಇತರ ಆಸ್ಪತ್ರೆಗಳಲ್ಲಿಯೂ ಅಳವಡಿಸುವ ಬಗ್ಗೆ ಆರೋಗ್ಯ ಸಚಿವರ ಗಮನಕ್ಕೆ ತರುವುದಾಗಿ ಕರ್ನಾಟಕ ರಾಜ್ಯ ಮಹಿಳಾ ಆಯೋಗ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮಂಗಳೂರು: ಮಂಗಳೂರಿನ ಲೇಡಿಗೋಷನ್ ತಾಯಿ ಮಗುವಿನ ಆಸ್ಪತ್ರೆ ನಿರ್ವಹಣೆ ಮತ್ತು ಕಾರ್ಯವೈಖರಿ ಅತ್ಯುತ್ತಮವಾಗಿದ್ದು, ಈ ಆಸ್ಪತ್ರೆಯ ಮಾದರಿಯನ್ನು ರಾಜ್ಯದ ಇತರ ಆಸ್ಪತ್ರೆಗಳಲ್ಲಿಯೂ ಅಳವಡಿಸುವ ಬಗ್ಗೆ ಆರೋಗ್ಯ ಸಚಿವರ ಗಮನಕ್ಕೆ ತರುವುದಾಗಿ ಕರ್ನಾಟಕ ರಾಜ್ಯ ಮಹಿಳಾ ಆಯೋಗ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಅವರು ಶುಕ್ರವಾರ ನಗರದ ಲೇಡಿಗೋಷನ್ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿನ ಅಲ್ಟ್ರಾ ಸೌಂಡ್ ಕೊಠಡಿ, ತುರ್ತು ನಿಗಾ ವಿಭಾಗ, ಸಖಿ ಕೇಂದ್ರ, ಅಧೀಕ್ಷಕರ ಕೊಠಡಿ ಸೇರಿದಂತೆ ವಿವಿಧ ವಿಭಾಗಗಳಿಗೆ ಭೇಟಿ ನೀಡಿದ ಬಳಿಕ ಅವರು ಸುದ್ದಿಗಾರರಲ್ಲಿ ಮಾತನಾಡಿದರು.

ಆಯೋಗದ ಅಧ್ಯಕ್ಷೆಯಾಗಿ ಇಂತಹ ಆಸ್ಪತ್ರೆಗಳಿಗೆ ಭೇಟಿ ನೀಡುವ ಸಂದರ್ಭ ಮುಖ್ಯವಾಗಿ ಅಲ್ಲಿನ ಲೋಪದೋಷಗಳ ಬಗ್ಗೆಯೇ ಹೆಚ್ಚಿನ ನಿಗಾ ವಹಿಸುತ್ತೇನೆ. ಆದರೆ ಲೇಡಿಗೋಷನ್ ಆಸ್ಪತ್ರೆಯಲ್ಲಿ ಅಂತಹ ಯಾವುದೇ ಲೋಪಗಳು ಕಂಡುಬಂದಿಲ್ಲ. ಬದಲಾಗಿ ತಾಯಿ ಮಗುವಿನ ಆರೈಕೆಯ ವಿಚಾರದಲ್ಲಿ ಎಲ್ಲರಿಗಿಂತಲ್ಲೂ ಭಿನ್ನವಾಗಿ ಕೆಲಸ ಮಾಡುತ್ತಿದೆ. ಮಗುವಿನ ಜತೆಗೆ ತಾಯಿಯ ಹಾರೈಕೆಯಲ್ಲಿ ಲೇಡಿಗೋಶನ್ ಎಲ್ಲರಿಗೂ ಮಾದರಿಯಾಗುವಂತಹ ವ್ಯವಸ್ಥೆಯನ್ನು ಮಾಡಿಕೊಂಡಿದೆ ಎಂದರು. ಲೇಡಿಗೋಷನ್ ಆಸ್ಪತ್ರೆಯ ಅಧೀಕ್ಷಕ ಡಾ.ದುರ್ಗಾಪ್ರಸಾದ್ ಎಂ.ಆರ್., ಆರ್‌ಎಂಒ ಡಾ.ಜಗದೀಶ್, ಆಸ್ಪತ್ರೆಯ ಹಿರಿಯ ತಜ್ಞರಾದ ಡಾ.ದಯಾನಂದ್, ಡಾ.ರವಿಕುಮಾರ್, ಸಖಿ ಒನ್ ಸ್ಟಾಪ್ ಸೆಂಟರ್‌ನ ಪ್ರಿಯಾ ಕೆ.ಸಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಉಸ್ಮಾನ್ ಮತ್ತಿತರರು ಇದ್ದರು. ಆಸ್ಪತ್ರೆ ಅಧೀಕ್ಷಕರ ಬಗ್ಗೆ ಮೆಚ್ಚುಗೆ

ಆಸ್ಪತ್ರೆಯ ಅಧೀಕ್ಷಕರು ನಿಜಕ್ಕೂ ತಾಯಿ ಹೃದಯದ ವ್ಯಕ್ತಿ ಎಂದು ಬಣ್ಣಿಸಿದ ಡಾ.ನಾಗಲಕ್ಷ್ಮಿ ಚೌಧರಿ, ತಾಯಿ ನೋವಿನ ಜೊತೆಯಲ್ಲಿ ಆಸ್ಪತ್ರೆಗೆ ಬಂದಾಗ ಅವರು ತಾಯಿ ಮಗುವಿನ ಆರೈಕೆಯಲ್ಲಿ ತೋರುವ ಕಾಳಜಿ ಬಹಳ ದೊಡ್ದದು. ಮುಖ್ಯವಾಗಿ ಆಸ್ಪತ್ರೆಯ ಅಟೆಂಡರ್ ಹಾಗೂ ಸಿಬ್ಬಂದಿಯನ್ನು ಬಳಸಿಕೊಳ್ಳುವ ರೀತಿ ಉತ್ತಮವಾಗಿದ್ದು, ಗರ್ಭಿಣಿ, ಬಾಣಂತಿಯರ ಜೊತೆಗೆ ಬಂದ ಪುರುಷರಿಗೆ ಮಾಡಿದ ಪ್ರತ್ಯೇಕವಾದ ವ್ಯವಸ್ಥೆ ಮಾದರಿಯಾಗಿದೆ. ವಿಶೇಷವಾಗಿ ಔಷಧ ದಾಸ್ತಾನು ವಿಚಾರದಲ್ಲಿ ಆಸ್ಪತ್ರೆಯ ಮುಂಜಾಗ್ರತಾ ವ್ಯವಸ್ಥೆ ಬಹಳ ಉತ್ತಮವಾಗಿದೆ. ಮೂರು ತಿಂಗಳ ಮೊದಲೇ ಆಸ್ಪತ್ರೆಗೆ ಬೇಕಾಗುವ ಔಷಧವನ್ನು ಮುಂಚೆಯೇ ಇಂಡೆಂಟ್ ಮಾಡಿಕೊಳ್ಳುವ ಮೂಲಕ ಔಷಧಕ್ಕೆ ಯಾವುದೇ ಕೊರತೆ ಇಲ್ಲದ ವ್ಯವಸ್ಥೆ ಇಲ್ಲಿದೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

17ರಿಂದ ರೋಶನಿ ನಿಲಯದಲ್ಲಿ ಅಂ.ರಾ. ‘ಫೋರೆನ್ಸಿಕ್‌ ಫ್ಯೂಷನ್’
ಆಯುರ್ವೇದ ಸಂಶೋಧನೆಗಳು ವ್ಯಾಪಾರ ಅವಕಾಶಗಳಾಗಿ ರೂಪುಗೊಳ್ಳಲಿ: ಡಾ.ಲಕ್ಷ್ಮೀ ನಾರಾಯಣ ಶೆಣೈ