ಕನ್ನಡಪ್ರಭ ವಾರ್ತೆ ಮಣಿಪಾಲಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ಹುಟ್ಟುಹಬ್ಬವನ್ನು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಯತೀಶ್ ಕರ್ಕೆರಾ ನೇತೃತ್ವದಲ್ಲಿ ಮಣಿಪಾಲದ ಇಂದಿರಾ ಕ್ಯಾಂಟಿನ್ ನಲ್ಲಿ ಕೇಕ್ ಕತ್ತರಿಸಿ, ಅಲ್ಲಿಯೇ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರು ಉಪಹಾರ ಸೇವಿಸುವುದರ ಮೂಲಕ ಗುರುವಾರ ವಿಶಿಷ್ಟವಾಗಿ ಆಚರಿಸಿದರು. ಈ ಸಂದರ್ಭ ಮಾತನಾಡಿದ ಕೆಪಿಸಿಸಿ ಉಪಾಧ್ಯಕ್ಷ ಎಂ. ಎ. ಗಫೂರ್, ರಾಹುಲ್ ಗಾಂಧಿ ಅವರು ಸದಾ ಸತ್ಯವನ್ನು ಮಾತನಾಡುತ್ತಾ ಸುಳ್ಳಿನ ವಿರುದ್ಧ ಹೋರಾಟ ಮಾಡಿಕೊಂಡು ಬಂದಿದ್ದಾರೆ. ದೇಶದಲ್ಲಿ ನಿರುದ್ಯೋಗ ನಿವಾರಣೆ ನಿಟ್ಟಿನಲ್ಲಿ ಸದಾ ಕಾಳಜಿ ವ್ಯಕ್ತಪಡಿಸುವುದರೊಂದಿಗೆ ದೇಶದಲ್ಲಿ ಶಾಂತಿ ಸೌಹಾರ್ದತೆಯ ಸಂದೇಶವನ್ನು ಸಾರಿಕೊಂಡು ಬಂದಿರುತ್ತಾರೆ ಎಂದರು.ಕಾಲ್ನಡಿಗೆ ಮೂಲಕ ದೇಶದಾದ್ಯಂತ ಸಂಚಾರ ಮಾಡಿ ದ್ವೇಷವನ್ನು ಅಳಿಸಿ ಪ್ರೀತಿಯ ಸಂದೇಶವನ್ನು ಪ್ರಚಾರ ಮಾಡುವ ಬಹುದೊಡ್ಡ ಕೆಲಸವನ್ನು ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಅವರು ದೇಶದ ಚುಕ್ಕಾಣಿಯನ್ನು ಹಿಡಿಯಲಿ ಎಂಬ ಹಾರೈಕೆ ಪ್ರತಿಯೊಬ್ಬ ನಾಗರಿಕನೂ ಕೂಡ ಬಯಸುತ್ತಿದ್ದಾರೆ ಎಂದರು.ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಯತೀಶ್ ಕರ್ಕೆರ ಅವರು, ಇಂದು ಇಂದಿರಾಜಿ ಮೊಮ್ಮಗನ ಹುಟ್ಟುಹಬ್ಬವನ್ನು ಇಂದಿರಾ ಕ್ಯಾಂಟಿನಿನಲ್ಲಿ ಆಚರಿಸುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಬಡವರ ಹಸಿವನ್ನು ನೀಗಿಸಲು ಇಂದಿರಾ ಕ್ಯಾಂಟೀನ್ ಆರಂಭಿಸಿದ್ದು, ಈ ಯೋಜನೆಗೆ ಇನ್ನಷ್ಟು ಪ್ರಚಾರ ಲಭಿಸಬೇಕು ಎನ್ನುವ ನಿಟ್ಟಿನಲ್ಲಿ ಇಲ್ಲಿಯ ರಿಕ್ಷಾ ಚಾಲಕರೊಂದಿಗೆ ಸೇರಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ರಾಹುಲ್ ಗಾಂಧಿ ಇಡೀ ದೇಶವನ್ನು ಸಂಚಾರ ಮಾಡುವ ಮೂಲಕ ಜನರಿಗೆ ಅತೀ ಹೆಚ್ಚು ಹತ್ತಿರವಾಗುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಅವರು ದೇಶದ ಪ್ರಧಾನಿಯಾಗಬೇಕು ಎನ್ನುವುದು ನಮ್ಮ ಹಾರೈಕೆಯಾಗಿದೆ ಎಂದು ಹೇಳಿದರು.