ಮಂಜು ಕೋಡಿಉಗನೆ ಒಳ್ಳೆಯ ಬರಹಗಾರ

KannadaprabhaNewsNetwork | Published : Jun 1, 2025 1:40 AM
ಚಾಮರಾಜನಗರದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಕವಿ, ನಿವೃತ್ತ ಪಿಯು ಇಲಾಖೆ ಉಪ ನಿರ್ದೇಶಕ ಸಿ.ಮಂಜುನಾಥ ಪ್ರಸನ್ನ (ಮಂಜು ಕೋಡಿ ಉಗನೆ) ಅವರ ಅಭಿನಂದನೆ ಗ್ರಂಥ ಬಿಡುಗಡೆ, ಬೀಳ್ಕೊಡುಗೆ ಸಮಾರಂಭದಲ್ಲಿ ವಿಮರ್ಶಕ ಎಸ್.ಅರ್.ವಿಜಯಶಂಕರ್ ಅಭಿನಂದನಾ ಗ್ರಂಥ ಬಿಡುಗಡೆ ಮಾಡಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಜಿಲ್ಲೆಯ ಮಣ್ಣಿನಲ್ಲಿ, ಗಾಳಿಯಲ್ಲಿ ಸಾಹಿತ್ಯವಿದ್ದು, ಜಗತ್ತಿಗೆ ಮಲೆಮಹದೇಶ್ವರ ಮತ್ತು ಮಂಟೇಸ್ವಾಮಿ ಎಂಬ 2 ಮಹಾಕಾವ್ಯಗಳನ್ನು ನೀಡಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಮೂಡ್ನಾಕೂಡು ಚಿನ್ನಸ್ವಾಮಿ ತಿಳಿಸಿದರು. ನಗರದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಜಿಲ್ಲಾ ಪ್ರಾಂಶುಪಾಲರ ಸಂಘ, ಉಪನ್ಯಾಸಕರ ಸಂಘ ಹಾಗೂ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ), ಚೇತನ ಕಲಾವಾಹಿನಿ ಸಂಸ್ಥೆಯ ಸಹಯೋಗದಲ್ಲಿ ಏರ್ಪಡಿಸಿದ್ದ ಕವಿ, ನಿವೃತ್ತ ಪಿಯು ಇಲಾಖೆ ಉಪ ನಿರ್ದೇಶಕ ಸಿ.ಮಂಜುನಾಥ ಪ್ರಸನ್ನ (ಮಂಜು ಕೋಡಿ ಉಗನೆ) ಅಭಿನಂದನೆ ಗ್ರಂಥ ಬಿಡುಗಡೆ ಹಾಗೂ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬದುಕಿನ ಅನಾವರಣವೇ ಸಾಹಿತ್ಯ. ಇದನ್ನು ಜೀವನದಲ್ಲಿ ಬಳಸಿಕೊಂಡರೆ ಮಾನವೀಯತೆ ಮತ್ತು ಪ್ರಗತಿಪರವಾಗಿ ಇರಲು ಸಾಧ್ಯ. ಕಲೆ ಅಥವಾ ಸಾಹಿತ್ಯ ಪ್ರಕಾರಗಳು ವ್ಯಕ್ತಿಯ ಬದುಕನ್ನು ವಿಶಿಷ್ಟವಾಗಿ ರೂಪಿಸಲಿವೆ. ಸಾಹಿತ್ಯವನ್ನು ಬೆಳವಣಿಗೆಗೆ ಬಳಸಿಕೊಳ್ಳಬೇಕು. ವಿದ್ಯಾರ್ಥಿಗಳು ಪಠ್ಯವನ್ನು ಪರೀಕ್ಷೆಗಾಗಿ ಮಾತ್ರ ಓದಬಾರದು. ಅದರಲ್ಲಿರುವ ಸಾರವನ್ನು ಅರಿತುಕೊಳ್ಳಬೇಕು ಎಂದು ಸಲಹೆ ನೀಡಿದರು.

ಮಂಜು ಕೋಡಿಉಗನೆ ಅವರು ಒಳ್ಳೆಯ ಬರಹಗಾರರು, ವಿಮರ್ಶಕರು ಹೌದು. ಅವರ ಚಪ್ಪೋಡು ಉತ್ತಮ ಕಾದಂಬರಿಯಾಗಿದೆ. ಕವಿತೆ, ನಾಟಕ ಪ್ರಕಾರಗಳಲ್ಲೂ ಕೆಲಸ ಮಾಡಿದ್ದಾರೆ. ಅಧಿಕಾರಿಯಾಗಿ ನಿವೃತ್ತರಾಗಿದ್ದಾರೆ. ಅವರಿಂದ ಮುಂದಿನ ದಿನಗಳಲ್ಲಿ ಉತ್ತಮ ಕೃತಿಗಳು ಹೊರಬರಲಿ ಎಂದು ಹಾರೈಸಿದರು. ಕಾಶ್ಮೀರದಿಂದ ಕನ್ಯಾಕುಮಾರಿ ತನಕ ಒಂದು ಮಗು ಕಲಿಯಬೇಕಾದ ಶಿಕ್ಷಣ ಸಿಗುತ್ತಿಲ್ಲ. ಮೇಲ್ವರ್ಗದ ಮಕ್ಕಳಿಗೆ ನಮ್ಮಲ್ಲಿನ ಶ್ರೇಣಿಕೃತ ವ್ಯವಸ್ಥೆ ಬಗ್ಗೆ ಪರಿಚಯವೇ ಇಲ್ಲ. ಹಾಗಾಗಿ ಅವರು ಮೀಸಲಾತಿಯನ್ನು ವಿರೋಧಿಸುತ್ತಿದ್ಧಾರೆ. ಜಾತಿಯನ್ನು ಹೇಳದೆ ಯಾವುದೇ ವಿಚಾರವನ್ನು ಮಾತನಾಡಲು ಸಾಧ್ಯವೇ ಇಲ್ಲದಂತಹ ಪರಿಸ್ಥಿತಿಯಿದೆ. ಡಾ.ಅಂಬೇಡ್ಕರ್ ಅವರ ಜಾತಿ ವಿನಾಶ ಚಿಂತನೆಯನ್ನು ಗಂಭೀರ ತೆಗೆದುಕೊಳ್ಳುತ್ತಿಲ್ಲ. ಅವರ ಬೋಧನೆಗಳನ್ನು ಜೀವನದಲ್ಲಿ ಆರಾಧಿಸುತ್ತಿಲ್ಲ. ಅವರನ್ನು ಉತ್ಸವ, ಪ್ರತಿಮೆ, ಆಚರಣೆಗೆ ಸೀಮಿತ ಮಾಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಉದಾರ ಮಾನವತಾವಾದಿ ಮಂಜುನಾಥ ಪ್ರಸನ್ನ:

ವಿಮರ್ಶಕ ಎಸ್.ಆರ್. ವಿಜಯಶಂಕರ್ ಅಭಿನಂದನಾ ಗ್ರಂಥ ಬಿಡುಗಡೆ ಮಾಡಿ, ಕೃತಿ ಕುರಿತು ಮಾತನಾಡಿ, ಸಿ.ಮಂಜುನಾಥ್ ಪ್ರಸನ್ನ ಅವರು ಉದಾರ ಮಾನವತಾವಾದಿ ಹಾಗೂ ಸಾಮಾಜಿಕ ವ್ಯಕ್ತಿತ್ವ ಹೊಂದಿದ್ದು, ಅನ್ಯಾಯದ ವಿರುದ್ದ ಧ್ವನಿ ಎತ್ತಬಲ್ಲ ಶಕ್ತಿಯಾಗಿದ್ದಾರೆ ಎಂದರು. ಮಂಜುನಾಥ್ ಪ್ರಸನ್ನ ನಿವೃತ್ತರಾಗುತ್ತಿರುವುದು ಸೇವೆಯಿಂದ ಮಾತ್ರ ಅವರು ಇನ್ನಷ್ಟು ಆಳವಾದ ಅಧ್ಯಯನ ಮಾಡುವ ಮೂಲಕ ಕನ್ನಡಕ್ಕೆ ಮತ್ತಷ್ಟು ಕೊಡುಗೆಗಳನ್ನೂ ನೀಡಬೇಕಿದೆ. ಅವರ ಅಭಿನಂದನಾ ಗ್ರಂಥ ಕಾರುಣ್ಯ ಕಡಲು ಅವರ ಅಕ್ಷರ ಜ್ಞಾನ, ಬುದ್ಧ ತತ್ವ ಅಂಬೇಡ್ಕರ್ ತತ್ವ ಸೇರಿ ಮೂಡಿ ಬಂದಿದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ ಮಾತನಾಡಿ, ಮಂಜುನಾಥ್ ಪ್ರಸನ್ನ ಅವರ ಬೇರೆ ಹವ್ಯಾಸಗಳಾದ ರಂಗಭೂಮಿ, ಸಾಹಿತ್ಯ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದು ಸಮಾಜಸೇವೆಯಲ್ಲಿರುವುದು ಅವರ ನಿವೃತ್ತಿ ಬಳಿಕ ಚಟುವಟಿಕೆಯಿಂದ ಇರಲು ಸಹಾಯ ಮಾಡುತ್ತದೆ. ಅವರ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಆಶಿಸಿದರು. ಅಭಿನಂದನಾ ಸ್ವೀಕರಿಸಿದ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ.ಮಂಜುನಾಥ್‌ ಪ್ರಸನ್ನ ಮಾತನಾಡಿ, ಇಲಾಖೆಯಲ್ಲಿ ಉತ್ತಮ ರೀತಿಯಲ್ಲಿ ಕೆಲಸ ಮಾಡಿರುತ್ತೇನೆ ಎಂಬ ಆಶಯವಿಟ್ಟು ಇನ್ನೂ ಖುಷಿಯಾಗಿ ನಿವೃತ್ತಿ ಜೀವನ ಅನುಭವಿಸುತ್ತೇನೆ ಎಂದರು.ಅಪರ ಜಿಲ್ಲಾಧಿಕಾರಿ ಗೀತಾಹುಡೇದ, ಕೃತಿ ಸಂಪಾದಕ ಸೋಮಶೇಖರ್ ಬಿಸಲ್ವಾಡಿ ಮಾತನಾಡಿದರು. ಕೃತಿ ಸಹ ಸಂಪಾದಕ ಹರವೆಮಹೇಶ, ಜಿಲ್ಲಾ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಎಂ.ಸೋಮಣ್ಣ, ಜಿಲ್ಲಾ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಎಸ್.ನರೇಂದ್ರ ನಾಥ್, ಕನ್ನಡ ಉಪನ್ಯಾಸ ಕರ ಸಂಘದ ಅಧ್ಯಕ್ಷ ಎಸ್.ಮಹದೇವಪ್ರಭು, ಚೇತನ ಕಲಾವಾಹಿನಿ ಸಂಸ್ಥೆ ಅಧ್ಯಕ್ಷ ಜಿ.ರಾಜಪ್ಪ ಇತರರು ಹಾಜರಿದ್ದರು.