- ಮೈಲಿಮನೆ ಗ್ರಾಮದಲ್ಲಿ ಕಾನೂನು ಅರಿವು ಕಾರ್ಯಕ್ರಮ
ಹೆಣ್ಣು ಸಮಾಜದ ಕಣ್ಣು. ದೇಶದ ವಿವಿಧ ಸ್ಥರಗಳಲ್ಲಿ ಮಹಿಳೆಯರು ಗೌರವಾನ್ವಿತ ಹುದ್ದೆಗಳನ್ನು ಅಲಂಕರಿಸಿ ಸಮಾಜಕ್ಕೆ ಮಾದರಿಯಾಗಿದ್ದು, ಹೆಣ್ಣನ್ನು ತಿರಸ್ಕರಿಸುವ ಅಥವಾ ಅಸಡ್ಡೆ ತೋರುವ ಆಲೋಚನೆ ಪಾಲಕರು ಬಿಡಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ವಿ.ಹನುಮಂತಪ್ಪ ಹೇಳಿದರು.
ತಾಲೂಕಿನ ಮೈಲಿಮನೆ ಗ್ರಾಮದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಟಾಟಾ ಕಾಫಿ ಲಿಮಿಟೆಡ್ , ಪೊಲೀಸ್ ಇಲಾಖೆ, ಕಾರ್ಮಿಕ ಇಲಾಖೆ ಹಾಗೂ ವಕೀಲರ ಸಂಘದಿಂದ ಆಯೋಜಿಸಿದ್ಧ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಹೆಣ್ಣು ಇಂದಿನ ಕಾಲಮಾನದಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಮುಂಚೂಣಿ ಕಂಡಿದ್ದಾರೆ. ರಾಷ್ಟ್ರಪತಿ, ಪ್ರಧಾನಿ, ಐಪಿಎಸ್ ಹಾಗೂ ಐಎಎಸ್ನಂಥ ಪ್ರಮುಖ ಸ್ಥಾನ ಅಲಂಕರಿಸಿದ್ದಾರೆ. ಹಾಗಾಗಿ ಹೆಣ್ಣು ಮಕ್ಕಳನ್ನು ಅಲ್ಲ ಗಳೆಯದೇ, ಗಂಡಿನಂತೆ ಸರಿಸಮಾನಾಗಿ ಗೌರವಿಸುವ ಪರಿಕಲ್ಪನೆ ರೂಢಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.ಇತ್ತೀಚೆಗೆ ಎಸ್ಟೇಟ್ನ ಕಾರ್ಮಿಕ ವಲಯದಲ್ಲಿ ಪೋಕ್ಸೋ, ಬಾಲ್ಯವಿವಾಹ ಪ್ರಕರಣಗಳು ದಾಖಲಾ ಗುತ್ತಿವೆ. ಹೆಣ್ಣು ಮಕ್ಕಳನ್ನು ಪ್ರೌಢಾವಸ್ಥೆಯ ಮುಂಚೆಯೇ ಮದುವೆ ಮಾಡಿಸುವುದು, ಹೆಣ್ಣು ಗಂಡೆಂದು ತಿಳಿಯಲು ಬ್ರೂಣಲಿಂಗ ಪತ್ತೆ ಪ್ರಕರಣಗಳು ಕಾನೂನು ಚೌಕಟ್ಟಿನಲ್ಲಿ ಶಿಕ್ಷಾರ್ಹ ಅಪರಾಧ ಜೊತೆಗೆ ದಂಡ ವಿಧಿಸಲಾಗುವುದು ಎಂದು ಎಚ್ಚರಿಸಿದರು.ಬಾಲ್ಯವಸ್ಥೆಯ ಹೆಣ್ಣು ಮಕ್ಕಳಿಗೆ ಲೈಂಗಿಕ ದೌರ್ಜನ್ಯ, ಬಾಲಗರ್ಭೀಣಿ ಪ್ರಕರಣಕ್ಕೆ ಕಡಿವಾಣ ಹಾಕಲು ಪಾಲಕರು ನಿಗಾವಹಿಸಬೇಕು. ಮದುವೆ ವಯಸ್ಸಿಗಿಂತ ಮೊದಲೇ ಪ್ರೇಮವಿವಾಹಕ್ಕೆ ಮುಂದಾದರೆ ಎರಡು ಕಡೆಯ ಇಡೀ ಕುಟುಂಬ, ಮದುವೆಯಲ್ಲಿ ಕಾರ್ಯನಿರ್ವಹಿಸುವ ಪ್ರತಿಯೊಬ್ಬರ ಮೇಲು ಪ್ರಕರಣ ದಾಖಲಾಗುತ್ತವೆ ಎಂಬುದು ಅರಿತುಕೊಳ್ಳಬೇಕು ಎಂದರು.ಹೆಣ್ಣು ಸಮಾಜದಲ್ಲಿ ಶೋಷಣೆಗೆ ಒಳಗಾಗುತ್ತಿರುವ ಕಾರಣ ದೇಶದಲ್ಲಿ ಪ್ರತಿ 8 ಗಂಟೆಗೊಮ್ಮೆ ಅತ್ಯಾಚಾರ ಪ್ರಕರಣ ದಾಖಲಾಗುತ್ತಿವೆ. ಸರ್ಕಾರಗಳು ಆ ನಿಟ್ಟಿನಲ್ಲಿ ಹೆಣ್ಣನು ಸುರಕ್ಷಿತವಾಗಿರಿಸಲು ಅನೇಕ ಕಾಯ್ದೆ ಗಳನ್ನು ರಚಿಸುವ ಮೂಲಕ ಮಹಿಳೆಯರಿಗೆ ಕಾನೂನಿನ ತಿಳುವಳಿಕೆ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.ಬಡ ವರ್ಗದ ಜನರು ಶೋಷಣೆ, ದೌರ್ಜನ್ಯ ಅಥವಾ ಅನ್ಯಾಯಕ್ಕೆ ಒಳಗಾಗಿ ಪ್ರಕರಣ ಎದುರಿಸಲು ಆರ್ಥಿಕ ಶಕ್ತಿಯಿಲ್ಲದವರಿಗೆ ನ್ಯಾಯ ಒದಗಿಸಲು ಕಾನೂನು ಸೇವೆಗಳ ಪ್ರಾಧಿಕಾರ ಉಚಿತವಾಗಿ ವಕೀಲರನ್ನು ನೇಮಿಸಿ ಪ್ರಕರಣ ಇತ್ಯರ್ಥಗೊಳ್ಳುವರೆಗೂ ಎಲ್ಲಾ ಸೌಲಭ್ಯ ಕಲ್ಪಿಸಿಕೊಡಲಿದೆ. ಹೆಣ್ಣಿಗೆ ಸಮಸ್ಯೆ ಕಂಡು ಬಂದಲ್ಲಿ ಮಹಿಳಾ ವಕೀಲರನ್ನು ನೇಮಿಸಲಾಗುವುದು ಎಂದು ಮನವರಿಕೆ ಮಾಡಿದರು.