ಕನ್ನಡಪ್ರಭ ವಾರ್ತೆ ಶಿವಮೊಗ್ಗ ಮಾನಸಿಕ ಕಾಯಿಲೆಗೆ ಒಳಗಾಗಿರುವವರ ಸಂಖ್ಯೆ ಹೆಚ್ಚಿದ್ದರೂ, ಬಹಳಷ್ಟು ಮಾನಸಿಕ ಕಾಯಿಲೆಗಳು ಬೆಳಕಿಗೆ ಬರುತ್ತಿಲ್ಲ ಎಂದು ಡಿಎಚ್ಒ ಮಾನಸಿಕ ಆರೋಗ್ಯದ ಜಿಲ್ಲಾ ಕಾರ್ಯಕ್ರಮಾಧಿಕಾರಿ ಡಾ.ಕಿರಣ್ ಹೇಳಿದರು.
ಕರ್ನಾಟಕ ರಾಜ್ಯ ಪೂರಕ ಆರೋಗ್ಯ ವಿಜ್ಞಾನಗಳ ವೃತ್ತಿಪರರ ಸಂಸ್ಥೆ ಹಾಗೂ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಸಂಯೋಗದೊಂದಿಗೆ ಕಟೀಲ್ ಅಶೋಕ್ ಪೈ ಸ್ಮಾರಕ ಸಂಸ್ಥೆಯ ಪೂರಕ ಆರೋಗ್ಯ ವಿಜ್ಞಾನ ವಿಭಾಗವು ಕಲಿಕಾ ನ್ಯೂನತೆ: ತಪಾಸಣೆ ಮತ್ತು ನಿರ್ವಹಣೆ ವಿಷಯದ ಕುರಿತು ಆಯೋಜಿಸಿದ್ದ ಒಂದು ದಿನದ ರಾಜ್ಯಮಟ್ಟದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.ಮಾನಸಿಕ ಕಾಯಿಲೆಗೆ ಒಳಗಾಗಿರುವವರ ಸಂಖ್ಯೆ ಹಾಗೂ ಮಾನಸಿಕ ಆರೋಗ್ಯವನ್ನು ನಿರ್ವಹಣೆ ಮಾಡುವವರ ನಡುವಿನ ಅಂತರವು ಬಹಳಷ್ಟಿದೆ. ಆದರೆ, ಬೆರಳೆಣಿಕೆಯಷ್ಟು ಪ್ರಕರಣಗಳನ್ನು ಮಾತ್ರೆ ಆಸ್ಪತ್ರೆಗಳಲ್ಲಿ ಗುರುತಿಸಲಾಗುತ್ತಿದೆ. ಈ ಸಮಸ್ಯೆಗಳನ್ನು ನಿವಾರಿಸಲು ಖಾಸಗಿ ಹಾಗೂ ಸರ್ಕಾರಿ ಶಾಖೆಗಳು ಒಟ್ಟಾಗಿ ಸೇರಿ ವೃತ್ತಿ ಪರರಿಗೆ ಈ ರೀತಿಯ ಇನ್ನಷ್ಟು ಕೌಶಲ್ಯಾಭಿವೃದ್ಧಿ ಕಾರ್ಯಗಾರವನ್ನು ಹಮ್ಮಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಮಾನಸ ಟ್ರಸ್ಟ್ ನ ನಿರ್ದೇಶಕಿ ಡಾ.ರಜನಿ.ಎ.ಪೈ ಮಾತನಾಡಿ, ಕಲಿಕಾ ನ್ಯೂನತೆಯಿರುವ ಮಕ್ಕಳಿಗೆ ಸಂಪನ್ಮೂಲಗಳನ್ನು ಕಲ್ಪಿಸುವ ಅವಶ್ಯಕತೆಯಿದೆ. ಇಂತಹ ಸಂಸ್ಥೆಗಳು ಎದುರಿಸುವ ಸವಾಲುಗಳ ಕುರಿತು ಮಾತನಾಡಿದರು.ಅಧ್ಯಕ್ಷತೆ ವಹಿಸಿದ್ದ ಕಟೀಲ್ ಅಶೋಕ್ ಪೈ ಪೂರಕ ಆರೋಗ್ಯ ವಿಜ್ಞಾನಗಳ ಸಂಸ್ಥೆಯ ಪ್ರಾಂಶುಪಾಲ ಡಾ.ಜಿ.ಪುಷ್ಪಲತಾ ಮಾತನಾಡಿ, ಮಾನಸಿಕ ಆರೋಗ್ಯ ರಕ್ಷಣೆಯಲ್ಲಿ ಸುಧಾರಿತ ಸೇವೆಗಳಿಗೆ ತರಬೇತಿ ಮತ್ತು ಉನ್ನತೀಕರಣವು ಪ್ರಮುಖವಾಗಿದೆ ಹಾಗೂ ಪ್ರಾಯೋಗಿಕ ತರಬೇತಿ ಮತ್ತು ಕೌಶಲ್ಯವು ಮಾನಸಿಕ ಆರೋಗ್ಯ ರಕ್ಷಣೆ ಮತ್ತು ಸೇವೆಗಳಿಗೆ ಅತ್ಯಗತ್ಯ ಎಂದು ಅಭಿಪ್ರಾಯಪಟ್ಟರು.
ಕಟೀಲ್ ಅಶೋಕ್ ಪೈ ಸ್ಮಾರಕ ಸಂಸ್ಥೆಯು ತನ್ನ ಪ್ರಾರಂಭ ಕಾಲದಿಂದಲೂ ಮಾನಸಿಕ ಆರೋಗ್ಯ ಶಿಕ್ಷಣಕ್ಕಾಗಿ ಪ್ರಧಾನ ಸಂಸ್ಥೆಯಾಗಿ ಗುರುತಿಸಲ್ಪಟ್ಟಿದೆ. ಮಾನಸಿಕ ಆರೋಗ್ಯ ವೃತ್ತಿಪರರಿಗೆ ನಿರಂತರ ಶಿಕ್ಷಣ ಮತ್ತು ನುರಿತ ತರಬೇತಿ ಅಗತ್ಯವೆಂದು ಹೇಳಿದರು.ಕಾರ್ಯಕ್ರಮದಲ್ಲಿ ಸ್ನಾತಕೋತ್ತರ ವಿಭಾಗದ ಸಂಯೋಜಕಿ ಮಾರಿ ಇವ್ಲಿನ್, ಕಟೀಲ್ ಅಶೋಕ್ ಪೈ ಪೂರಕ ಅರೋಗ್ಯ ವಿಜ್ಞಾನಗಳ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕ ಎಚ್.ಎಂ.ರಕ್ಷಿತ್, ಕಾರ್ಯಕ್ರಮದ ಸಂಯೋಜಕ ಕಾರ್ಯದರ್ಶಿ ಶ್ರೀದೇವಿ, ಜಂಟಿ ಕಾರ್ಯದರ್ಶಿ ಅನನ್ಯ, ಸಂಯೋಜಕ ಸಮಿತಿಯ ಸದಸ್ಯ ಹಾಗೂ ಎಂಫಿಲ್ ನಾ ಪ್ರಶಿಕ್ಷಣಾರ್ಥಿಗಳಾದ ಅನುಪಮಾ ಹಾಗೂ ಕೆ.ಟಿ.ಶ್ವೇತಾ ಮತ್ತು ಶಿಬಿರಾರ್ಥಿಗಳು ಉಪಸ್ಥಿತರಿದ್ದರು.
- - - -8ಎಸ್ಎಂಜಿಕೆಪಿ06:ಶಿವಮೊಗ್ಗದ ಕಟೀಲ್ ಅಶೋಕ್ ಪೈ ಸ್ಮಾರಕ ಸಂಸ್ಥೆಯ ಪೂರಕ ಆರೋಗ್ಯ ವಿಜ್ಞಾನ ವಿಭಾಗವು ಕಲಿಕಾ ನ್ಯೂನ್ಯತೆ: ತಪಾಸಣೆ ಮತ್ತು ನಿರ್ವಹಣೆ ವಿಷಯದ ಕುರಿತು ಆಯೋಜಿಸಿದ್ದ ಒಂದು ದಿನದ ರಾಜ್ಯಮಟ್ಟದ ಕಾರ್ಯಾಗಾರದಲ್ಲಿ ಡಿಎಚ್ಒ ಮಾನಸಿಕ ಆರೋಗ್ಯದ ಜಿಲ್ಲಾ ಕಾರ್ಯಕ್ರಮಾಧಿಕಾರಿ ಡಾ.ಕಿರಣ್ ಮಾತನಾಡಿದರು.