ಕನ್ನಡಪ್ರಭ ವಾರ್ತೆ ಬಳ್ಳಾರಿ
ಗ್ರಾಮದ ಸರ್ಕಾರಿ ಶಾಲೆಯಲ್ಲಿ ಅನೇಕ ವರ್ಷ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ಶಿಕ್ಷಕರಾದ ಡಿ.ಕೆ. ವಿನಯ್, ರಾಘವರೆಡ್ಡಿ, ಸಾಗರ್ ಹಾಗೂ ಬಸಪ್ಪ ಅವರನ್ನು ಸಾರೋಟಿನಲ್ಲಿ ಮೆರವಣಿಗೆ ನಡೆಸಲಾಯಿತು.
ಶಾಲೆಯ ಮೈದಾನದಿಂದ ಶುರುಗೊಂಡ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ವಿದ್ಯಾರ್ಥಿಗಳು, ಪೋಷಕರು ಹಾಗೂ ಗ್ರಾಮಸ್ಥರು ಪಾಲ್ಗೊಂಡು ವರ್ಗಾವಣೆಗೊಂಡ ಶಿಕ್ಷಕರಿಗೆ ಶುಭಾಶಯಗಳನ್ನು ಕೋರಿದರು.ಬಳಿಕ ಮಾತನಾಡಿದ ವರ್ಗಾವಣೆಗೊಂಡ ಶಿಕ್ಷಕರು, ಡಿ. ಕಗ್ಗಲ್ ಗ್ರಾಮಸ್ಥರು ನೀಡಿದ ಸಹಕಾರ ಹಾಗೂ ವಿದ್ಯಾರ್ಥಿಗಳ ಶಿಕ್ಷಣದ ಮೇಲಿನ ಆಸಕ್ತಿಯನ್ನು ಸ್ಮರಿಸಿದರು. ಸರ್ಕಾರಿ ಶಾಲೆಯ ಬಗ್ಗೆ ಅಪಾರ ಕಾಳಜಿ ಇರುವ ಡಿ. ಕಗ್ಗಲ್ ಗ್ರಾಮದ ಮುಖಂಡರು ಹಾಗೂ ಪೋಷಕರು ಮಕ್ಕಳ ಕಲಿಕಾ ಪ್ರಗತಿಗೆ ಸಹಕಾರ ಮಾಡುತ್ತಲೇ ಬಂದಿದ್ದಾರೆ. ಈ ಸಹಕಾರ ಹೊಸದಾಗಿ ಬರುವ ಶಿಕ್ಷಕರಿಗೂ ನೀಡಬೇಕು ಎಂದು ಮನವಿ ಮಾಡಿದರು.
ಡಿ. ಕಗ್ಗಲ್ ಶಾಲೆಯಲ್ಲಿ ಈ ಹಿಂದೆ ಸೇವೆ ಸಲ್ಲಿಸಿ ನಿವೃತ್ತ ಶಿಕ್ಷಕರಾದ ಮಹ್ಮದ್ ಸಾಬ್ ಹಾಗೂ ನಜೀರ್ ಸಾಬ್ ಅವರನ್ನು ಸನ್ಮಾನಿಸಲಾಯಿತು. ವರ್ಗಾವಣೆಗೊಂಡ ಶಿಕ್ಷಕರು ಇಡೀ ಗ್ರಾಮಸ್ಥರಿಗೆ ಭೋಜನ ವ್ಯವಸ್ಥೆ ಮಾಡಿದ್ದರು. ಮನೆ ಮನೆಗೆ ಶಿಕ್ಷಕರೇ ತೆರಳಿ ಊಟಕ್ಕೆ ಆಹ್ವಾನ ಮಾಡಿದರು.