ಶಿಕ್ಷಣದ ಪ್ರಗತಿಗೆ ಸಮೂಹ ಮಾಧ್ಯಮಗಳೇ ಪ್ರೇರಕ ಶಕ್ತಿ

KannadaprabhaNewsNetwork |  
Published : Aug 02, 2026, 02:30 AM IST
ಸಂಘದ ರಾ.ಹ. ದೇಶಪಾಂಡೆ ಸಭಾಭವನದಲ್ಲಿ ಆಯೋಜಿಸಿದ್ದ “ಶಿಕ್ಷಣದಲ್ಲಿ ಸಮೂಹ ಮಾಧ್ಯಮಗಳ ಪಾತ್ರ ಕುರಿತು ಡಾ. ಜೆ.ಎಂ. ಚಂದುನವರ ಉಪನ್ಯಾಸ ನೀಡಿದರು. | Kannada Prabha

ಸಾರಾಂಶ

ಭಾರತದಲ್ಲಿ ಅಕ್ಷರ ಜ್ಞಾನ ಹೆಚ್ಚಾಗುತ್ತಿರುವುದರಿಂದ ಇಂದು ಮುದ್ರಣ ಮಾಧ್ಯಮಕ್ಕೆ ಉಜ್ವಲ ಭವಿಷ್ಯವಿದೆ. ಜನರಲ್ಲಿ ಜ್ಞಾನೋದಯ ಉಂಟು ಮಾಡುವ ಕಾರ್ಯವನ್ನು ಪತ್ರಿಕೆಗಳು ಮಾಡುತ್ತಿವೆ.

ಧಾರವಾಡ:

ಶಿಕ್ಷಣದ ಪ್ರಗತಿಗೆ ಸಮೂಹ ಮಾಧ್ಯಮಗಳೇ ಪ್ರೇರಕ ಶಕ್ತಿ. ಜ್ಞಾನ ಪ್ರಸಾರ ಕಾರ್ಯದಲ್ಲಿ ಸಮೂಹ ಮಾಧ್ಯಮಗಳ ಪಾತ್ರ ಅನನ್ಯ ಎಂದು ಕವಿವಿ ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕ ಡಾ. ಜೆ.ಎಂ. ಚಂದುನವರ ಹೇಳಿದರು.

ಸಂಘದ ರಾ.ಹ. ದೇಶಪಾಂಡೆ ಸಭಾಭವನದಲ್ಲಿ ಆಯೋಜಿಸಿದ್ದ “ಶಿಕ್ಷಣದಲ್ಲಿ ಸಮೂಹ ಮಾಧ್ಯಮಗಳ ಪಾತ್ರ ಕುರಿತು ಉಪನ್ಯಾಸ ನೀಡಿದ ಅವರು, ಭಾರತದಲ್ಲಿ ಅಕ್ಷರ ಜ್ಞಾನ ಹೆಚ್ಚಾಗುತ್ತಿರುವುದರಿಂದ ಇಂದು ಮುದ್ರಣ ಮಾಧ್ಯಮಕ್ಕೆ ಉಜ್ವಲ ಭವಿಷ್ಯವಿದೆ. ಜನರಲ್ಲಿ ಜ್ಞಾನೋದಯ ಉಂಟು ಮಾಡುವ ಕಾರ್ಯವನ್ನು ಪತ್ರಿಕೆಗಳು ಮಾಡುತ್ತಿವೆ. ಪತ್ರಿಕೆಗಳು ಸಾಮಾಜಿಕ ವಿಷಯ ಕುರಿತು ಜನ ಜಾಗೃತಿ ಉಂಟು ಮಾಡುವ ಜತೆಗೆ ಆಡಳಿತಗಾರರಿಗೆ ಜನರ ಸಮಸ್ಯೆ ಮುಟ್ಟಿಸುವ ಕಾರ್ಯ ಮಾಡುತ್ತಿವೆ ಎಂದರು.

ಪ್ರಸ್ತುತ ಮುದ್ರಣ ಮಾಧ್ಯಮದಲ್ಲಿ ಕ್ರಾಂತಿಕಾರಕ ಬದಲಾವಣೆಗಳಾಗುತ್ತಿವೆ. ಪತ್ರಿಕೆಗಳು ತಮ್ಮ ವಿಶೇಷ ಪುರವಣಿಗಳ ಮೂಲಕ ಶಿಕ್ಷಣ, ಕೃಷಿ, ಆರೋಗ್ಯದಂತಹ ವಿಷಯ ಮುದ್ರಣ ಮಾಡುತ್ತಿದ್ದು ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿವೆ. ಎಲ್ಲ ಪತ್ರಿಕೆಗಳ ಸಂಪಾದಕೀಯ ವಿಭಾಗಗಳು ವಿದ್ಯಾರ್ಥಿಗಳ ಸ್ಪಧಾತ್ಮಕ ಪರೀಕ್ಷೆಗಳಿಗೆ ಅನುಕೂಲವಾಗಿವೆ ಎಂದ ಅವರು, ಡಿಜಿಟಲ್, ಯೂಟ್ಯೂಬ್ ಚಾನಲ್‌ ಮೂಲಕವೂ ಜಗತ್ತಿನ ಮಾಹಿತಿ ನೀಡಲಾಗುತ್ತದೆ. ಶಿಕ್ಷಣ, ಮಾಹಿತಿ, ಮನರಂಜನೆ ಕಾರ್ಯವನ್ನು ಸಮೂಹ ಮಾಧ್ಯಮಗಳು ನಿರಂತರವಾಗಿ ಬಿತ್ತರಿಸುತ್ತಿದ್ದು ಜಗತ್ತಿನಲ್ಲಿ ಯಾವುದೊ ಭಾಗದಲ್ಲಿ ನಡೆದ ಘಟನೆಯನ್ನು ಕ್ಷಣಾರ್ಧದಲ್ಲಿ ಜನ ಸಮುದಾಯಕ್ಕೆ ಮುಟ್ಟಿಸುವ ಕಾರ್ಯ ಮಾಧ್ಯಮಗಳು ಮಾಡುತ್ತಿವೆ ಎಂದು ತಿಳಿಸಿದರು.

ಪ್ರಾಧ್ಯಾಪಕಿ ಪ್ರೊ. ಜಯಲಕ್ಷ್ಮೀ ಯಂಡಿಗೇರಿ ಮಾತನಾಡಿ, ಇಂದು ಸಮೂಹ ಮಾಧ್ಯಮಗಳ ಪ್ರಭಾವದಿಂದ ಜಗತ್ತೇ ಅಂಗೈಯಲ್ಲಿರುವಂತಾಗಿದೆ. ಆದರೆ, ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆಯಿಂದ ವಿದ್ಯಾರ್ಥಿಗಳಲ್ಲಿ ಏಕಾಗ್ರತೆ ಕೊರತೆ ಉಂಟಾಗಿ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಬಿರುತ್ತಿದೆ. ವಿದ್ಯಾರ್ಥಿಗಳು ಸಮೂಹ ಮಾಧ್ಯಮಗಳ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.

ಸಂಘದ ಕಾರ್ಯಾಧ್ಯಕ್ಷ ಬಸವಪ್ರಭು ಹೊಸಕೇರಿ ಅಧ್ಯಕ್ಷತೆ ವಹಿಸಿದ್ದರು. ಶಿವಾನಂದ ಹೂಗಾರ ಪ್ರಾರ್ಥಿಸಿದರು. ಪ್ರೊ. ಬಿ.ಎಚ್. ಕೋಟಿಗೌಡ್ರ ಸ್ವಾಗತಿಸಿದರು. ಶಂಕರ ಹಲಗತ್ತಿ ಪ್ರಾರ್ಥಿಸಿದರು. ಶಿಕ್ಷಣ ಮಂಟಪ ಸಂಚಾಲಕ ವೀರಣ್ಣ ಒಡ್ಡೀನ ನಿರೂಪಿಸಿದರು. ಎಂ.ಜಿ. ಸುಭೇದಾರ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸ್ತೆಗುರುಳಿದ ಆಲದ ಮರ: ವಾಹನ ಸವಾರರು ಪಾರು
ಜಿಲ್ಲೆಯಲ್ಲಿ ಅತ್ತಾವರ ಯಲ್ಲಪ್ಪ ಪ್ರತಿಮೆ ಸ್ಥಾಪನೆಗೆ ಪ್ರಯತ್ನ: ಅನಂತ್ ಮೈಸೂರು