ಶಾಸಕ ಜಿ.ಎಸ್. ಪಾಟೀಲರಿಗೆ ಮಂತ್ರಿ ಸ್ಥಾನಕ್ಕೆ ಆಗ್ರಹಿಸಿ ಸಾಮೂಹಿಕ ರಾಜೀನಾಮೆ

KannadaprabhaNewsNetwork |  
Published : Nov 23, 2025, 02:45 AM IST
ಅರೆಬೆತ್ತಲೆ ಪ್ರತಿಭಟನೆ ನಡೆಸಿ ಕಾರ್ಯಕರ್ತರ ಆಕ್ರೋಶ ವ್ಯಕ್ತಪಡಿಸುತ್ತಿರುವ ಕಾಂಗ್ರೆಸ್ ಕಾರ್ಯಕರ್ತರು. | Kannada Prabha

ಸಾರಾಂಶ

ಇದೇ ವೇಳೆ ಶಾಸಕ ಜಿ.ಎಸ್. ಪಾಟೀಲ ಅವರಿಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ ತಾಲೂಕಿನ ದಿಂಡೂರ ಗ್ರಾಮದ ಕಾಂಗ್ರೆಸ್ ಕಾರ್ಯಕರ್ತರಾದ ಸಂಗಪ್ಪ ತೇಜಿ ಹಾಗೂ ಮಾರನಬಸರಿ ಗ್ರಾಮದ ರವಿ ಗಡಾದ ಅವರು ಮೈಮೇಲೆ ಡೀಸೆಲ್‌ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆಯೂ ನಡೆಯಿತು.

ಗಜೇಂದ್ರಗಡ: ರೋಣ ಕ್ಷೇತ್ರದ ಶಾಸಕ ಜಿ.ಎಸ್. ಪಾಟೀಲ ಅವರಿಗೆ ಸಚಿವ ಸ್ಥಾನಕ್ಕೆ ಆಗ್ರಹಿಸಿ ರೋಣ ಮತ್ತು ನರೇಗಲ್ ಬ್ಲಾಕ್ ಕಾಂಗ್ರೆಸ್ ಮುಂಚೂಣಿ ಘಟಕಗಳ ಪದಾಧಿಕಾರಿಗಳು ಸಾಮೂಹಿಕ ರಾಜೀನಾಮೆ ನೀಡಿದ್ದಾರೆ.

ಇದೇ ವೇಳೆ ಶಾಸಕ ಜಿ.ಎಸ್. ಪಾಟೀಲ ಅವರಿಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ ತಾಲೂಕಿನ ದಿಂಡೂರ ಗ್ರಾಮದ ಕಾಂಗ್ರೆಸ್ ಕಾರ್ಯಕರ್ತರಾದ ಸಂಗಪ್ಪ ತೇಜಿ ಹಾಗೂ ಮಾರನಬಸರಿ ಗ್ರಾಮದ ರವಿ ಗಡಾದ ಅವರು ಮೈಮೇಲೆ ಡೀಸೆಲ್‌ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆಯೂ ನಡೆಯಿತು.

ಶನಿವಾರ ಕೆಪಿಸಿಸಿ ಅಧ್ಯಕ್ಷರಿಗೆ ಸಾಮೂಹಿಕ ರಾಜೀನಾಮೆ ಸಲ್ಲಿಸಿದ ಬಳಿಕ ಪಟ್ಟಣದ ಜಿ.ಕೆ. ಬಂಡಿ ಗಾರ್ಡನ್‌ನಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಇಲ್ಲಿನ ಕಾಲಕಾಲೇಶ್ವರ ವೃತ್ತಕ್ಕೆ ಆಗಮಿಸಿ ಮಾನವ ಸರಪಳಿ ನಿರ್ಮಿಸಿ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಕಾಂಗ್ರೆಸ್‌ ಕಾರ್ಯಕರ್ತರು ಮಾತನಾಡಿ, ಜಿ.ಎಸ್. ಪಾಟೀಲರು ೫ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಕ್ಷೇತ್ರದಲ್ಲಿ ಹಲವಾರು ಅಭಿವೃದ್ಧಿ ಕಾಮಗಾರಿ ಕೈಗೊಂಡು ಜನಮಾನಸದಲ್ಲಿ ಛಾಪು ಮೂಡಿಸಿದ್ದಾರೆ. ಆದರೆ ಕಾಂಗ್ರೆಸ್ ಹೈಕಮಾಂಡ್ ಸಚಿವ ಸ್ಥಾನ ನೀಡುವಾಗ ರೋಣ ಮತಕ್ಷೇತ್ರದ ಶಾಸಕ ಜಿ.ಎಸ್. ಪಾಟೀಲ ಅವರನ್ನು ಕಡೆಗಣಿಸಲಾಗಿದೆ ಎಂದರು.

ಈ ಬಾರಿ ಸಚಿವ ಸಂಪುಟದಲ್ಲಿ ಶಾಸಕ ಜಿ.ಎಸ್. ಪಾಟೀಲ್ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ಸಚಿವ ಸ್ಥಾನ ನೀಡಬೇಕು. ಇಲ್ಲದಿದ್ದರೆ ರೋಣ, ನರೇಗಲ್ ಬ್ಲಾಕ್ ಕಾಂಗ್ರೆಸ್ ಮೂಂಚೂಣಿ ಘಟಕದ ಪದಾಧಿಕಾರಿಗಳು ನೀಡಿರುವ ಸಾಮೂಹಿಕ ರಾಜೀನಾಮೆ ಪತ್ರಗಳನ್ನು ಅಂಗೀಕರಿಸಬೇಕು. ಇಲ್ಲದಿದ್ದರೆ ಹೋರಾಟವನ್ನು ರಾಷ್ಟ್ರ ರಾಜಧಾನಿ ದೆಹಲಿಗೆ ತಲುಪಿಸುತ್ತೇವೆ ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಮಂಜುಳಾ ನರೇಗಲ್ಲ, ಎಚ್.ಎಸ್. ಸೋಂಪೂರ, ಸಿದ್ದಣ್ಣ ಬಂಡಿ, ಮುರ್ತುಜಾ ಡಾಲಾಯತ್, ಸುಭಾಷ ಮ್ಯಾಗೇರಿ, ಬಿ.ಎಸ್. ಶೀಲವಂತರ, ಶಿವು ಚವ್ಹಾಣ, ಶಶಿಧರ ಹೂಗಾರ, ಶರಣಪ್ಪ ಚಳಗೇರಿ, ರಫೀಕ ತೋರಗಲ್ಲ, ಅಂದಪ್ಪ ಬಿಚ್ಚೂರ, ರಾಜು ಸಾಂಗ್ಲಿಕರ, ಸಿದ್ದು ಗೊಂಗಡಶೆಟ್ಟಿಮಠ ಹಾಗೂ ಮಹಿಳಾ ಕಾರ್ಯಕರ್ತೆಯರು ಭಾಗವಹಿಸಿದ್ದರು.

PREV

Recommended Stories

ಪರೀಕ್ಷೆ ಮುಗಿದ ಬೆನ್ನಲ್ಲೆ ಫಲಿತಾಂಶ ಪ್ರಕಟ: ದಾಖಲೆ ಬರೆದ ಜಾನಪದ ವಿಶ್ವವಿದ್ಯಾಲಯ
ಕ್ರೀಡೆಯಲ್ಲಿ ವಿಫುಲ ಅವಕಾಶ