ಕನ್ನಡಪ್ರಭ ವಾರ್ತೆ ಬಾಗಲಕೋಟೆ
ವಿಶ್ವ ಯೋಗ ದಿನಾಚರಣೆ ಜೂ.21ರಂದು ಬಿವಿವಿ ಸಂಘದ ಮೂರು ಕ್ಯಾಂಪಸ್ಗಳಲ್ಲಿ ಹಮ್ಮಿಕೊಂಡಿರುವ ಸಾಮೂಹಿಕ ಯೋಗ ಕಾರ್ಯಕ್ರಮದಲ್ಲಿ 10 ಸಾವಿರಕ್ಕೂ ಅಧಿಕ ಜನ ಭಾಗವಹಿಸಲಿದ್ದಾರೆ ಎಂದು ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ ಹೇಳಿದರು.ಬಿವಿವಿ ಸಂಘದ ಮಿನಿಸಭಾಭವನದಲ್ಲಿ ನಡೆದ ವಿಶ್ವಯೋಗ ದಿನಾಚರಣೆ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಕಳೆದ 11 ವರ್ಷಗಳಿಂದ ಯೋಗ ದಿನಾಚಾರಣೆ ಆಚರಿಸಲಾಗುತ್ತಿದೆ. ಬಿವಿವಿ ಸಂಘದ ಬಾಗಲಕೋಟೆ ನಗರದ ಹಳೆ ಕ್ಯಾಂಪಸ್ನಲ್ಲಿ ತಮ್ಮ ನೇತೃತ್ವದಲ್ಲೇ ಈ ಕಾರ್ಯಕ್ರಮ ನಡೆಯಲಿದೆ. ಎಸ್.ಎನ್.ಮೆಡಿಕಲ್ ಕಾಲೇಜು ಆವರಣದಲ್ಲಿ ವೈದ್ಯಕೀಯ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಸಜ್ಜನ ನೇತೃತ್ವದಲ್ಲಿ ಹಾಗೂ ವಿದ್ಯಾಗಿರಿ ಎಂಜನಿಯರಿಂಗ್ ಕಾಲೇಜು ಆವರಣದಲ್ಲಿ ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ ನೇತೃತ್ವ ವಹಿಸಲಿದ್ದಾರೆ. ಬೆಳಗ್ಗೆ 6.30ಕ್ಕೆ ಕೇಂದ್ರದ ಆಯುಷ್ ಇಲಾಖೆ ಶಿಷ್ಟಾಚಾರದಂತೆ ಕಾರ್ಯಕ್ರಮ ನಡೆಸಲಾಗುತ್ತಿದೆ. ಭಾರತದ ಹೆಮ್ಮೆಯಾಗಿರುವ ಯೋಗದಿನವನ್ನು ಯಶಸ್ವಿಗೊಳಿಸಲು ನಗರದ ಜನ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ವಿನಂತಿಸಿದರು. ಮೂರು ಕ್ಯಾಂಪಸ್ಗಳಲ್ಲಿ ನುರಿತ ಯೋಗಪಟುಗಳು ಯೋಗಭ್ಯಾಸ ಮಾಡಿಸಲಿದ್ದು, ಈಗಾಗಲೇ ಅವರನ್ನು ಸಂಪರ್ಕಿಸಲಾಗಿದೆ. ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.
ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ ಮಾತನಾಡಿ, ಸರ್ಕಾರದ ಶಿಷ್ಟಾಚಾರದಂತೆ 45 ನಿಮಿಷ ಕಾರ್ಯಕ್ರಮ ಸಂಘಟಿಸಲಾಗುತ್ತಿದೆ, ವ್ಯಾಯಾಮದಿಂದ ದೇಹ ಬಳಲುಬಹುದು ಆದರೆ ಯೋಗ ಎನ್ನುವುದು ವ್ಶೆಜ್ಞಾನಿಕ ಕ್ರಮವಾಗಿದೆ. ಮಾನಸಿಕ ಹಾಗೂ ದೈಹಿಕ ವಿಕಸನಕ್ಕೆ ಅನುಕೂಲ ಕಲ್ಪಿಸಲಿದೆ ಎಂದು ಹೇಳಿದರು.ಸಭೆಯಲ್ಲಿ ವೈದ್ಯಕೀಯ ಮಹಾವಿದ್ಯಾಲಯದ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಸಜ್ಜನ, ಕಾಲೇಜು ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಗುರುಬಸವ ಸೂಳಿಬಾವಿ, ಮಲ್ಲಿಕಾರ್ಜುನ ಸಾಸನೂರ, ಮಹಾಂತೇಶ ಶೆಟ್ಟರ, ಶಿವಲಿಂಗಪ್ಪ ಮೊರಬದ, ಮಹೇಶ ಕಕರಡ್ಡಿ, ಕುಮಾರಸ್ವಾಮಿ ಹಿರೇಮಠ, ಕುಮಾರ ಜಿಗಜಿನ್ನಿ, ವಿವಿಧ ಮಹಾವಿದ್ಯಾಲಯಗಳ ಪಾಚಾರ್ಯರು ಭಾಗವಹಿಸಿದ್ದರು.