ಇಂದಿನಿಂದ ಮತಗಳ್ಳತನದ ವಿರುದ್ಧ ಬೃಹತ್ ಹೋರಾಟ: ವಿಧಾನ ಪರಿಷತ್‌ ಸದಸ್ಯ ಮಂಜುನಾಥ್ ಭಂಡಾರಿ

KannadaprabhaNewsNetwork |  
Published : Nov 08, 2025, 01:15 AM IST
ಪೋಟೋ: 07ಎಸ್‌ಎಂಜಿಕೆಪಿ01ಶಿವಮೊಗ್ಗದ ಪತ್ರಿಕಾಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ, ವಿಧಾನ ಪರಿಷತ್‌ ಸದಸ್ಯ ಮಂಜುನಾಥ್ ಭಂಡಾರಿ ಮಾತನಾಡಿದರು.  | Kannada Prabha

ಸಾರಾಂಶ

ಮತಗಳ್ಳತನದ ವಿರುದ್ಧ ಬೃಹತ್ ಹೋರಾಟದ ಜತೆಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ನ.8ರಿಂದಲೇ ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ವಿಧಾನ ಪರಿಷತ್‌ ಸದಸ್ಯ ಮಂಜುನಾಥ್ ಭಂಡಾರಿ ಹೇಳಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಮತಗಳ್ಳತನದ ವಿರುದ್ಧ ಬೃಹತ್ ಹೋರಾಟದ ಜತೆಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ನ.8ರಿಂದಲೇ ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ವಿಧಾನ ಪರಿಷತ್‌ ಸದಸ್ಯ ಮಂಜುನಾಥ್ ಭಂಡಾರಿ ಹೇಳಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಮತಗಳ್ಳತನದ ವಿರುದ್ಧ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಅವರು ರಾಷ್ಟ್ರಾದ್ಯಂತ ಹೋರಾಟ ಹಮ್ಮಿಕೊಂಡಿದ್ದಾರೆ. ನ.8ಕ್ಕೆ ಈ ಹೋರಾಟಕ್ಕೆ ಒಂದು ವರ್ಷ ಪೂರೈಸುತ್ತದೆ. ಈ ಹಿನ್ನೆಲೆಯಲ್ಲಿ ಮತಗಳ್ಳತನ ವಿರುದ್ಧ ಮತ್ತಷ್ಟು ಹೋರಾಟ, ಅಭಿಯಾನವನ್ನು, ಸಹಿ ಸಂಗ್ರಹ ವಿಸ್ತರಿಸಲಾಗುವುದು ಎಂದರು.

ಜಿಲ್ಲೆಯಲ್ಲಿ ಮತ್ತು ರಾಜ್ಯದಲ್ಲಿ ಈಗಾಗಲೇ ಸಹಿ ಸಂಗ್ರಹ ಅಭಿಯಾನ ಆರಂಭವಾಗಿದೆ. ಜಿಲ್ಲೆಯಲ್ಲಿ ಸುಮಾರು 1.25 ಲಕ್ಷ ಸಹಿ ಸಂಗ್ರಹವಾಗಿದ್ದು, ಇದು ನ.8ರಂದು 1.40 ಲಕ್ಷ ತಲುಪಲಿದೆ. ಜಿಲ್ಲೆಯಲ್ಲಿ ಈ ಅಭಿಯಾನ ಮುಂದುವರೆಯಲಿದ್ದು, ನ.11 ರಂದು ರಾಜ್ಯಾದ್ಯಂತ ಮುಂದುವರೆಯುತ್ತದೆ. ರಾಜ್ಯದಲ್ಲಿ ಈಗಾಗಲೇ 1 ಕೋಟಿಗೂ ಹೆಚ್ಚು ಸಹಿ ಸಂಗ್ರಹ ಆಗಿದೆ. ಈ ಎಲ್ಲ ಸಹಿ ಸಂಗ್ರಹದ ವಿವರಗಳನ್ನು ರಾಷ್ಟ್ರಪತಿಗಳಿಗೆ ನೀಡಿ ಮತಗಳ್ಳತನ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಲಾಗುವುದು ಎಂದರು.

ಇಡೀ ದೇಶದಲ್ಲಿ ಮತಗಳ್ಳತನ ಮೂಲಕ ಪ್ರಜಾಪ್ರಭುತ್ವವೇ ಕಗ್ಗೊಲೆಯಾಗುತ್ತಿದೆ. ನಮ್ಮ ಮತವನ್ನು ನಾವೇ ಕಳೆದುಕೊಳ್ಳುವಂತಹ ಸ್ಥಿತಿ ಬಂದಿದೆ. ಹರಿಯಾಣ, ಮಹಾರಾಷ್ಟ್ರ, ಕರ್ನಾಟಕದಲ್ಲೂ ಮತಗಳ್ಳತನ ಆಗಿದೆ. ಈ ಬಗ್ಗೆ ಚುನಾವಣಾ ಆಯೋಗಕ್ಕೆ ನಾವು ದೂರು ಕೊಡಬೇಕು. ಆದರೆ, ಚುನಾವಣಾ ಆಯೋಗವೇ ಕೇಂದ್ರದ ಜತೆ ಶಾಮೀಲಾಗಿದೆ. ಕಳ್ಳನ ಕೈಗೆ ಬೀಗ ಕೊಟ್ಟ ಹಾಗಿದೆ ಎಂದು ಆರೋಪಿಸಿದರು.

ವ್ಯವಸ್ಥಿತವಾಗಿ ಮತಗಳನ್ನು ಡಿಲೀಟ್ ಮಾಡಲಾಗುತ್ತಿದೆ. ಕಾಂಗ್ರೆಸ್ ಪಕ್ಷವನ್ನು ಗುರಿಯಾಗಿಟ್ಟುಕೊಂಡೇ ಈ ಕೆಲಸ ಮಾಡಲಾಗುತ್ತಿದೆ. ಅನೇಕ ಕಡೆ ಕಾಂಗ್ರೆಸ್ಸಿಗರ ಮತ ಡಿಲೀಟ್ ಆಗಿರುವುದು ಕಂಡು ಬಂದಿದೆ. ಬೂತ್ ಮಟ್ಟದಿಂದ ನಮ್ಮ ಕಾಂಗ್ರೆಸ್ ಕಾರ್ಯಕರ್ತರು ಈ ಬಗ್ಗೆ ಜಾಗೃತರಾಗಬೇಕು. ಈ ಹಿನ್ನಲೆಯಲ್ಲಿ ಯುವಕರ ಗಮನಸೆಳೆಯಲು ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಚುನಾವಣಾ ಆಯೋಗಕ್ಕೆ ಸುಧಾರಣೆ ತರಬೇಕೆನ್ನುವುದು ಕೂಡ ನಮ್ಮ ಉದ್ದೇಶವಾಗಿದೆ ಎಂದರು.

ಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ಪ್ರಸನ್ನಕುಮಾರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎನ್. ರಮೇಶ್, ಪ್ರಮುಖರಾದ ಎಸ್.ಟಿ. ಹಾಲಪ್ಪ, ದೇವಿಕುಮಾರ್, ಲಕ್ಷ್ಮಿಕಾಂತ್ ಚಿಮಣೂರು ಇದ್ದರು.

ನವೆಂಬರ್ ಕ್ರಾಂತಿ ಬಗ್ಗೆ ಸಿಎಂ -ಡಿಸಿಎಂ ಸ್ಪಷ್ಟ ಪಡಿಸಿದ್ದಾರೆ: ಮಂಜುನಾಥ್ ಭಂಡಾರಿ

ಶಿವಮೊಗ್ಗ: ನವೆಂಬರ್ ಕ್ರಾಂತಿ ಬಗ್ಗೆ ಸಿಎಂ -ಡಿಸಿಎಂ ಸ್ಪಷ್ಟವಾಗಿ ಹೇಳಿದ್ದಾರೆ. ನಮ್ಮ ಪಕ್ಷದಲ್ಲಿ ಯಾರು ಸಿಎಂ ಆಗಬೇಕೆಂದು ಹೈಕಮಾಂಡ್ ನಿರ್ಧಾರ ಮಾಡುತ್ತದೆ ಎಂದು ಕೆಪಿಸಿಸಿ ಕಾರ್ಯದರ್ಶಿ ಮಂಜುನಾಥ್ ಭಂಡಾರಿ ಹೇಳಿದರು.

ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ನವೆಂಬರ್ ಕ್ರಾಂತಿಯ ಬಗ್ಗೆ ಹೇಳಿಕೆ ನೀಡುವ ಮೊದಲು ಅವರ ಪಕ್ಷ ಅಧಿಕಾರದಲ್ಲಿದ್ದಾಗ 5 ವರ್ಷದಲ್ಲಿ 3 ಜನ ಸಿಎಂ ಬದಲಾವಣೆ ಮಾಡಲಾಗಿತ್ತು. ಅದನ್ಯಾಕೆ ಅವರು ಮಾತಾಡಲ್ಲ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಪಕ್ಷದಲ್ಲಿ ಅಧಿಕಾರ ಬಯಸೋದು ಪ್ರತಿಯೊಬ್ಬ ಕಾರ್ಯಕರ್ತನ ಹಕ್ಕು. ಕಾರ್ಯಕರ್ತ, ಶಾಸಕ ಯಾರೇ ಇರಬಹುದು.ಯಾವಾಗ ಯಾರಿಗೆ ಅಧಿಕಾರ ಕೊಡಬೇಕು ಎಂಬುದನ್ನ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ರಾಜ್ಯಮಟ್ಟದಲ್ಲಿ ಈಗಾಗಲೇ ಹಲವರಿಗೆ ಅಧಿಕಾರ ಕೊಡಲಾಗಿದೆ. ವಿವಿಧ ನಿಗಮಮಂಡಳಿಗಳಿಗೆ ಅಧ್ಯಕ್ಷರ ನೇಮಕವಾಗಿದೆ. ಮುಂದಿನ ದಿನಗಳಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಗೆ ನಿಗಮ ಮಂಡಳಿ ಸ್ಥಾನ ಮಾನ ನೀಡಲಾಗುವುದು ಎಂದರು.

ಕಬ್ಬು ಬೆಳೆಗಾರರ ಹೋರಾಟ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸಿಎಂ ನೇತೃತ್ವದಲ್ಲಿ ಸಭೆ ನಡೆಯಲಿದೆ. ಕಬ್ಬಿನ ದರ ಏರಿಕೆ ಕುರಿತು ಕೇಂದ್ರ ಸರ್ಕಾರಕ್ಕೂ ಕೂಡ ಸಿಎಂ ಪತ್ರ ಬರೆದಿದ್ದಾರೆ. ಬಿಜೆಪಿಯವರು ಈಗ ರೈತರ ಹೋರಾಟದ ಬಗ್ಗೆ ಮಾತನಾಡುತ್ತಿದ್ದಾರೆ. ದೆಹಲಿ, ಪಂಜಾಬ್ ನಲ್ಲಿ ರೈತರು ಹೋರಾಟ ಮಾಡಿದಾಗ ಒಬ್ಬರು ದ್ವನಿ ಎತ್ತಲಿಲ್ಲ, ಆಗ ಬಿಜೆಪಿಯವರು ಎಲ್ಲಿ ಹೋಗಿದ್ರು. ನೂರಾರು ಜನ ಸತ್ತಾಗ ಯಾಕೆ ಪ್ರಶ್ನೆ ಮಾಡಲಿಲ್ಲ. ರೈತರ ಸಮಸ್ಯೆ ಬಗೆಹರಿಸೋದು ನಮ್ಮ ಸರ್ಕಾರದ ಜವಾಬ್ದಾರಿ. ಸಿಎಂ ಅದನ್ನು ಮಾಡುತ್ತಾರೆ ಎಂದರು.

ರಾಷ್ಟ್ರಗೀತೆ ಕುರಿತು ಕಾಗೇರಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರು ಯಾವತ್ತು ಸಂವಿಧಾನವನ್ನ ಒಪ್ಪಿಕೊಂಡಿಲ್ಲ. ರಾಷ್ಟ್ರಗೀತೆ, ರಾಷ್ಟ್ರಧ್ವಜವನ್ನ ಒಪ್ಪಿಕೊಂಡಿಲ್ಲ. ಏನಾದ್ರೂ ಹೇಳಬೇಕು ಅನ್ನೋ ಕಾರಣಕ್ಕೆ ರಾಷ್ಟ್ರಗೀತೆ ಬಗ್ಗೆ ಹೇಳಿದ್ದಾರೆ. ವಂದೇ ಮಾತರಂ, ಜನಗಣಮನ ಬಗ್ಗೆ ಇವರಿಗೆ ಗೊತ್ತಿದೆಯಾ ಎಂದು ಪ್ರಶ್ನಿಸಿದರು.

ಇವರೇನು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದಾರಾ. ಕಾಂಗ್ರೆಸ್ ಪಕ್ಷದ ಲಕ್ಷಾಂತರ ಜನರು ದೇಶಕ್ಕೆ ಹೋರಾಡಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿದ್ದಾರೆ. ಇವತ್ತು ಬಂದು ಆ ಗೀತೆ ಸರಿಯಿಲ್ಲ. ಈ ಗೀತೆ ಸರಿಯಿಲ್ಲ ಅಂತಾರೇ. ಇವರಿಗೆ ಯಾವ ನೈತಿಕ ಹಕ್ಕು ಇದೆ ಹೀಗೆ ಹೇಳಲು. ನಾಗ್ಪುರದ ಆರ್‌ಎಸ್‌ಎಸ್‌ ಕಚೇರಿಯಲ್ಲಿ ರಾಷ್ಟ್ರಧ್ವಜ ಹಾರಿಸಲು ನೂರಾರು ನೆಪ ಹೇಳುತ್ತಾರೆ ಎಂದು ಕುಟುಕಿದರು.

PREV

Recommended Stories

ಬ್ರಾಹ್ಮಣ ಸಮುದಾಯಕ್ಕೆ ಸೌಲಭ್ಯ ನೀಡಲು ಬದ್ಧ : ಸಚಿವ ದಿನೇಶ್‌ ಗುಂಡೂರಾವ್‌
ಬೆಂಗಳೂರು ನಗರದ 6 ಆರ್‌ಟಿಒ ಕಚೇರಿ ಮೇಲೆ ದಾಳಿ: ಹಲವು ಅಕ್ರಮ ಪತ್ತೆ