ಹೊಸಪೇಟೆ: ಪ್ರವಾದಿ ಮಹಮ್ಮದ್ ಪೈಗಂಬರ್ ಅವರನ್ನು ಅವಹೇಳನಕಾರಿಯಾಗಿ ನಿಂದಿಸಿದ ಯತಿ ನರಸಿಂಗಾನಂದ, ರಾಮಗಿರಿ ವಿರುದ್ಧ ಜೆಷ್ನೆ ಈದ್ ಮೀಲಾದುನ್ನಬಿ ಕಮಿಟಿಯಿಂದ ಸಮುದಾಯದ ಮುಖಂಡರು ನಗರದಲ್ಲಿ ಶನಿವಾರ ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಿ ಖಂಡಿಸಿದರು.
ಪ್ರವಾದಿ ಅವರನ್ನು ನಿಂದಿಸಿರುವ ಹೇಳಿಕೆಗಳು, ಸಮಾಜದ ಶಾಂತಿ ಮತ್ತು ಸಾಮರಸ್ಯ ಭಂಗಗೊಳಿಸುತ್ತವೆ. ಇಸ್ಲಾಮೋಫೋಬಿಯ, ಮುಸ್ಲಿಮರ ಬಗ್ಗೆ ತಾರತಮ್ಯದ ಮನೋಭಾವ ಉತ್ತೇಜಿಸುತ್ತದೆ. ಯಾವುದೇ ಧಾರ್ಮಿಕ ವ್ಯಕ್ತಿಯನ್ನು ಮಾನಹಾನಿ ಮಾಡುವುದು ಗಂಭೀರ ಅಪರಾಧವಾಗಿದೆ. ಕೂಡಲೇ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಭಾರತ ದೇಶ ಕೇವಲ ಹಿಂದೂ, ಇತರೆ ಧರ್ಮಗಳಿಗೆ ಮಾತ್ರವಲ್ಲ. ಇದು ಎಲ್ಲ ಧರ್ಮದವರ ದೇಶ. ಇಲ್ಲಿ ನಮಗೊಂದು ಸಂವಿಧಾನವಿದೆ. ಪ್ರವಾದಿಗಳನ್ನು ನಿಂದಿಸಲು ಯಾರಿಗೂ ಹಕ್ಕಿಲ್ಲ. ಇವನಾರವ, ಇವನಾರವ ಎಂದೆನಿಸದಿರಯ್ಯ, ಇವ ನಮ್ಮವ ಇವ ನಮ್ಮವ ಎಂದೆನಿಸಯ್ಯ ಎನ್ನುವ ವಚನಗಳ ಸಾಲುಗಳನ್ನು ಎಲ್ಲರೂ ಪಾಲಿಸಬೇಕು. ಸುಂದರ ಭಾರತ ದೇಶದಲ್ಲಿ ಎಲ್ಲ ಧರ್ಮದವರಿಗೆ ಜೀವಿಸುವ ಹಕ್ಕಿದೆ. ನಿಂದಿಸಿದವರಿಗೆ ಶಿಕ್ಷೆಯಾಗಬೇಕು. ಅವರನ್ನು ಬಂಧಿಸಿ ಉಗ್ರ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದರು.ಕಮಿಟಿ ಅಧ್ಯಕ್ಷ ಕೆ. ಬಡಾವಲಿ, ಉಪಾಧ್ಯಕ್ಷ ಅಲ್ಲಾಭಕ್ಷಿ, ಕಾರ್ಯದರ್ಶಿ ಖಾದರ್ ರಫಾಯಿ, ಜಿಲ್ಲಾ ವಖ್ಫ್ ಬೋರ್ಡ್ ಅಧ್ಯಕ್ಷ ದಾದಾಪೀರ್ ಅಂಜುಮನ್ ಕಮಿಟಿಯ ಅಧ್ಯಕ್ಷ ಎಚ್.ಎನ್.ಎಫ್ ಇಮಾಮ್ ನಿಯಾಜಿ, ಖದಿರ್, ವಕೀಲ ಸದ್ದಾಮ್ ಹುಸೇನ್, ಅನ್ಸರ್ ಬಾಷಾ, ಮೋಷಿನ್, ಮುಸ್ಲಿಂ ಧರ್ಮಗುರುಗಳು, ಮುಖಂಡರು ಇದ್ದರು.