ವಕ್ಫ್ ಆಸ್ತಿ ನೀತಿ ವಿರೋಧಿಸಿ ಬೃಹತ್ ಪ್ರತಿಭಟನೆ

KannadaprabhaNewsNetwork |  
Published : Oct 16, 2024, 12:30 AM IST
್್್್್‌ | Kannada Prabha

ಸಾರಾಂಶ

ವಕ್ಫ್‌ ಕಾಯ್ದೆ ವಿರುದ್ಧ ಇಂದು ವಿಜಯಪುರದಲ್ಲಿ ಹೋರಾಟ ನಡೆಸಲಾಗುತ್ತಿದೆ. ಕರ್ನಾಟಕದಲ್ಲಿಯೇ ವಕ್ಫ್ ಅನ್ಯಾಯದ ಬಗ್ಗೆ ವಿಧಾನಸಭೆಯಲ್ಲಿ ಮೊದಲು ಮಾತನಾಡಿದ್ದೇ ಈ ನಿಮ್ಮ ಮನೆಮಗ ಎಂದು ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಗುಡುಗಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ವಕ್ಫ್‌ ಕಾಯ್ದೆ ವಿರುದ್ಧ ಇಂದು ವಿಜಯಪುರದಲ್ಲಿ ಹೋರಾಟ ನಡೆಸಲಾಗುತ್ತಿದೆ. ಕರ್ನಾಟಕದಲ್ಲಿಯೇ ವಕ್ಫ್ ಅನ್ಯಾಯದ ಬಗ್ಗೆ ವಿಧಾನಸಭೆಯಲ್ಲಿ ಮೊದಲು ಮಾತನಾಡಿದ್ದೇ ಈ ನಿಮ್ಮ ಮನೆಮಗ ಎಂದು ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಗುಡುಗಿದರು.

ಜಿಲ್ಲಾದ್ಯಂತ ಸಾವಿರಾರು ಎಕರೆ ವಕ್ಫ್ ಆಸ್ತಿ ಎಂದು ದಾಖಲೆಯಲ್ಲಿ ನಮೂದು ಮಾಡಲು ಮುಂದಾಗಿರುವ ಸರ್ಕಾರದ ನೀತಿ ಖಂಡಿಸಿ ನಗರದ ಸಿದ್ಧೇಶ್ವರ ದೇವಸ್ಥಾನದಿಂದ ಜಿಲ್ಲಾಧಿಕಾರಿ ಕಚೇರಿಯವರಗೆ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ಅವರು, ಮೊನ್ನೆ ಒಬ್ಬ ವಿಜಯಪುರಕ್ಕೆ ಬಂದಿದ್ದ ವೇಳೆ ವಕ್ಫ್‌ ಆಸ್ತಿ ಯತ್ನಾಳ ಅಪ್ಪನ ಆಸ್ತಿಯಾ ಎಂದು ಪ್ರಶ್ನಿಸಿದ್ದಾನೆ. ನಿಮ್ಮಪ್ಪ ಯಾರು ಎಂಬುವುದೇ ನಿನಗೆ ಗೊತ್ತಿಲ್ಲ. ನಿಮ್ಮ ಅಪ್ಪನೇ ಕಂಟ್ರಿ ಇದ್ದಾನೆ ಎಂದು ತಿರುಗೇಟು ನೀಡಿದರು. ವಿಜಯಪುರ ಜಿಲ್ಲೆಯಲ್ಲಿ 15,924 ಎಕರೆ ವಕ್ಫ್‌ ಎಂದು ದಾಖಲೆಯಲ್ಲಿ ನಮೂದಿಸಲು ಮುಂದಾಗಿದ್ದಾರೆ. ಮೋದಿ ಅವರು ಸಬಕಾ ಸಾಥ್, ಸಬಕಾ ವಿಕಾಸ್ ಎಂದು ಹೇಳಿದ್ದಾರೆ. ಆದರೆ, ಇಲ್ಲಿ ಅದೆಲ್ಲ ಇಲ್ಲ, ಹಿಂದೂವೋಕೆ ಸಾಥ್, ಹಿಂದೂವೋಕೆ ವಿಕಾಸ್, ಹಿಂದೂ ವಿರೋಧಿಯೋಕೆ ಲಾತ್. ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಮೇತ ಅಲ್ಲಿನ ಬಹುತೇಕರು ವಕ್ಫ್‌ ಆಸ್ತಿ ಕೊಳ್ಳೆ ಹೊಡೆದುಕೊಂಡಿದ್ದಾರೆ. ಹಿಂದೂಗಳು ಒಗ್ಗಟ್ಟು ಆಗದಿದ್ದರೇ ಭಾರತ ಮಾತೆಯ ರಕ್ಷಣೆ ಮಾಡಲು ಆಗಲ್ಲ. ಕರ್ನಾಟಕದಲ್ಲಿ ಅವರು ಕೊಡುವ 2ಸಾವಿರಕ್ಕೆ ನಾವೆಲ್ಲ ಮಾರಿಕೊಂಡಿದ್ದೇವೆ. ಆದರೆ, ಹರಿಯಾಣದಲ್ಲಿ 6 ಸಾವಿರ ಆಮಿಷಕ್ಕೂ ಅವರು ಮಾರಿಕೊಳ್ಳಲಿಲ್ಲ. ಕಾಂಗ್ರೆಸ್‌ಗೆ ಅಲ್ಲಿನ ಹಿಂದೂಗಳು ಸರಿಯಾಗಿ ಗೂಟ ಹೊಡೆದರು. ಕಾಂಗ್ರೆಸ್‌ನಲ್ಲಿನ ಹಿಂದೂಗಳು ಒಬ್ಬರಾದರೂ ಮಾತಾಡ್ತಾರಾ? ಮೊದಲು ಇವರನ್ನು ವಕ್ಫ್‌ ಮಾಡಬೇಕು ಎಂದರು.ಮುಸ್ಲಿಂ ಅವರು 45 ಪರ್ಸೆಂಟ್ ಆಗುವವರೆಗೆ ಮಾತ್ರ ಕಾಂಗ್ರೆಸ್‌ನಲ್ಲಿ ಹಿಂದೂಗಳು ಎಂಎಲ್‌ಎ, ಎಂಪಿಗಳು ಆಗಿರುತ್ತಾರೆ. ಹಿಂದೂಗಳು ಎಂದೂ ನಾಯಕರು ಆಗಲ್ಲ. ಅವರನ್ನೆಲ್ಲ ಕಸ ಹೊಡೆಯಲು ಹಚ್ಚುತ್ತಾರೆ. ಜಾಡೂ ಮಾರಬೇ (ಕಸಹೊಡೆಯೋದು) ರಾಹುಲ್‌ ಗಾಂಧಿ ಎನ್ನುತ್ತಾರೆ ಎಂದು ಲೇವಡಿ ಮಾಡಿದರು. ವಕ್ಫ್‌ನವರು ಎಷ್ಟರ ಮಟ್ಟಿಗೆ ಅನ್ಯಾಯ ಮಾಡಿದ್ದಾರೆ ಎಂದರೇ ಜಿಲ್ಲೆಯ ಇಬ್ಬರೂ ಸಚಿವರ ಕ್ಷೇತ್ರದವರು ವಕ್ಫ್‌ ವಿರುದ್ಧ ನಡೆಸುತ್ತಿರುವ ನಮ್ಮ ಹೋರಾಟಕ್ಕೆ ಬಂದಿದ್ದಾರೆ. ಯಾಕೆಂದರೆ ಅನಾದಿಕಾಲದಿಂದ ಅಜ್ಜ ಮುತ್ತಜ್ಜನಿಂದ ಬಂದಿರುವ ಆಸ್ತಿಯನ್ನು ಇವರು ವಕ್ಫ್ ಆಸ್ತಿ ಎಂದು ರೈತರನ್ನು ಒಕ್ಕಲೆಬ್ಬಿಸುವ ಕೆಲಸ ಮಾಡುತ್ತಿದ್ದಾರೆ. ಸರ್ಕಾರಿ, ಖಾಸಗಿ, ಸಂಘ ಸಂಸ್ಥೆಗಳ, ರೈತರ ಆಸ್ತಿಗಳನ್ನೆಲ್ಲ ವಕ್ಫ್‌ಗೆ ಸೇರಿಸಿಕೊಳ್ಳಿ ಎಂದು ಸಚಿವ ಜಮೀರ್ ಅಹಮ್ಮದ್‌ ಖಾನ್ ಎಲ್ಲೆಲ್ಲಿ ಹೇಳಿ ಹೋಗಿದ್ದಾನೋ, ನಾವು ಸಹ ಅವರ ಟಿಪಿ ನೋಡಿ ಅಲ್ಲೆಲ್ಲಾ ಹೋಗುತ್ತೇವೆ ಎಂದು ಎಚ್ಚರಿಕೆ ನೀಡಿದರು.ಮುಂಬರುವ ಲೋಕಸಭಾ ಅಧಿವೇಷನದಲ್ಲಿ ಜಾರಿಗೆ ಬರಲಿರುವ ವಕ್ಫ್ ಹೊಸ ಕಾನೂನಿನಲ್ಲಿ ದೇಶದಲ್ಲಿನ ವಕ್ಫ್‌ ಬೋರ್ಡ್‌ನಲ್ಲಿ ಇಬ್ಬರು ಹಿಂದೂ ಎಂಪಿಗಳು ಇರ್ತಾರೆ. ರಾಜ್ಯದಲ್ಲಿ ಹಾಗೂ ಪ್ರತಿ ಜಿಲ್ಲೆಗಳಲ್ಲಿ ಇಬ್ಬರು ಹಿಂದೂಗಳು ಇರ್ತಾರೆ. ಹೀಗಾಗಿ ಇನ್ನುಮುಂದೆ ಮುಸ್ಲಿಂರು ಏನೂ ಮಾಡಲು ಆಗುವುದಿಲ್ಲ. ಈ ಹಿಂದೆ ಗಾಂಧಿ ಮಾಡಿದ ತಪ್ಪು, ನೆಹರು ಮಾಡಿದ ದ್ರೋಹ ಎಲ್ಲವೂ ಮುಂದೆ ಸರಿಯಾಗಲಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, ಸುಲ್ತಾನನ ಕಾಲದ ಆಳ್ವಿಕೆ ಮುಗಿದುಹೋಗಿದೆ. ಈಗೇನಿದ್ದರೂ ಸಂವಿಧಾನದ ಆಳ್ವಿಕೆ. ನಾವು ದೇಶಕ್ಕಾಗಿ ಜೀವ ಕೊಡಲು ರೆಡಿ ಇದ್ದೇವೆ. ಜೀವ ತೆಗೆಯಲು ರೆಡಿ ಇದ್ದೇವೆ. ಆದರೆ, ಕಾಂಗ್ರೆಸ್ ಸುಲ್ತಾನರ ಆಳ್ವಿಕೆಗೆ ಜೀವ ಕೊಡುತ್ತಿದೆ ಎಂದರು.ಯಾವುದಾದರೂ ಭೂಮಿಯನ್ನು ವಕ್ಫ್ ಎಂದು ಮಾಡಿಕೊಂಡರೇ ನಾವು ಅದನ್ನು ನ್ಯಾಯಾಲಯದಲ್ಲಿ ಪ್ರಶ್ನೆ ಮಾಡುವ ಹಾಗಿಲ್ಲ. ಹಾಗೇನಾದರೂ ನ್ಯಾಯಕ್ಕಾಗಿ ಹೋರಾಡಬೇಕು ಎಂದರೆ ನಾವೇ ವಕ್ಫ್‌ಗೆ ಹೋಗಬೇಕು. ವಕ್ಫ್‌ಗೆ ಯಾರಾದರೂ ದಾನ ಕೊಟ್ಟಿದ್ದರೆ, ಸರ್ಕಾರ ನೀಡಿದ್ದರೆ ಅಥವಾ ಹಣಕೊಟ್ಟು ಖರೀದಿಸಿದ್ದರೇ ಮಾತ್ರ ಅದು ವಕ್ಫ್‌ ಆಸ್ತಿಯಾಗುತ್ತದೆ. ಈ ಮೂರನ್ನೂ ಹೊರತುಪಡಿಸಿ ಅದು ವಕ್ಫ್‌ ಆಸ್ತಿ ಅಲ್ಲ. ಇಂದು ಕಾಂಗ್ರೆಸ್ ಪಾರ್ಟಿ ಓಟ್ ಬ್ಯಾಂಕ್ ಆಸೆಗೋಸ್ಕರ ರಾಷ್ಟ್ರಘಾತುಕ‌ ಕೆಲಸ ಮಾಡುತ್ತಿದೆ. ಕಾಂಗ್ರೆಸ್ ಪಾರ್ಟಿ ಹಿಂದೂಗಳನ್ನೂ ಪ್ರತಿನಿಧಿಸುತ್ತಿದೆಯೋ?, ರಾಷ್ಟ್ರವನ್ನು ಪ್ರತಿನಿಧಿಸುತ್ತಿದೆಯೋ?. ಅದು ಕೇವಲ ಘಜನಿ, ಮಹಮ್ಮದ್‌ ನಂತಹವರನ್ನು ಪ್ರತಿನಿಧಿಸುತ್ತದೆ. ಒಂದೆಡೆ ಜಾತ್ಯಾತೀತ ಎನ್ನುತ್ತಾರೆ ಇನ್ನೊಂದಡೆ ಮುಸ್ಲಿಂ ಜನಾಂಗಕ್ಕೆ ಬೆಂಬಲ ಕೊಡ್ತಾರೆ. ಇಂತಹ ಕಾಂಗ್ರೆಸ್ ನಮಗೆ ಬೇಕಾ?. ಅವರು ನಮ್ಮ ಅಪ್ಪನ ಆಸ್ತಿಗೆ ಕೈ ಹಾಕುವ ಮೊದಲು ಅವರಿಗೆ ನಾವು ಏನು ಎಂಬುವುದು ತೋರಿಸಬೇಕೋ ಬೇಡವೋ? ಇದು ನಮ್ಮ ಸಂವಿಧಾನ ಉಳಿಸುವ ಹೋರಾಟ ಎಂಬುವುದು ನೆನಪಿರಲಿ ಎಂದರು.

ಲವ್ ಜಿಹಾದ್, ಲ್ಯಾಂಡ್ ಜಿಹಾದ್, ಹಲಾಲ್ ಹೆಸರಿನ ಮತಾಂತರ ಜಿಹಾದ್ ಇದೆ. ಈ‌ ಮೂರು ನಡೆಯುತ್ತಿವೆ ಇದಕ್ಕಾಗಿ ನಾವು ಹೋರಾಟ ಮಾಡಬೇಕಿದೆ. ನಮ್ಮನ್ನು ದುರ್ಬಲಗೊಳಿಸುವ ಶಕ್ತಿಯ ವಿರುದ್ಧ ನಾವು ಹೋರಾಟ ಮಾಡಬೇಕು. ಸಿದ್ದರಾಮಯ್ಯನವರೇ ಸಂಗೊಳ್ಳಿ ರಾಯಣ್ಣ ಹೆಸರು ಹೇಳುವ ನೀವು ರಾಷ್ಟ್ರ ಘಾತುಕ ಕೆಲಸ‌ ಮಾಡಬಾರದು. ರಾಯಣ್ಣ ದೇಶನಿಷ್ಠ, ಧರ್ಮನಿಷ್ಠ, ದೇಶಕ್ಕಾಗಿ ಪ್ರಾಣ ಕೊಟ್ಟವನು, ಅವರ ಹೆಸರು ಹೇಳಲು ನಿಮಗೆ ಯೋಗ್ಯತೆ ಇದೆಯಾ?. ಓಟಿಗಾಗಿ ನೀವು ಇಂತಹ ಕೆಲಸ ಮಾಡಿದರೆ ಭಾರತದಲ್ಲಿ ಗೆಲ್ಲುವ ಕಾಲ ಮುಗಿಯಿತು, ನೀವು ಚುನಾವಣೆ ಗೆಲ್ಲಬೇಕಾದರೇ ಪಾಕಿಸ್ತಾನಕ್ಕೆ ಹೋಗಬೇಕಾಗುತ್ತದೆ ಎಂದು ಗುಡುಗಿದರು.ಚಿಂತಕ ಚಕ್ರವರ್ತಿ ಸೂಲಿಬೆಲೆ ಮಾತನಾಡಿ, ಈಗಾಗಲೇ ಯಾರದ್ದೋ ಆಸ್ತಿಯನ್ನು ಇವರು ವಕ್ಫ್ ಅಂತ ಮಾಡಿರುವ ಪ್ರಾಪರ್ಟಿ ಬಿಟ್ಟುಕೊಡುವುದು ಮಾತ್ರವಲ್ಲ ಅಗತ್ಯ ಬಿದ್ದರೇ ಭಾರತ ಬಿಟ್ಟು ಓಡಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಕರ್ನಾಟಕದಲ್ಲಿಯೇ ಅತಿಹೆಚ್ಚು ಮುಸ್ಲಿಂ ಸ್ಲೀಪರ್ ಸೆಲ್‌ ಇರುವುದು ವಿಜಯಪುರದಲ್ಲಿ. ರಾಜ್ಯದಲ್ಲಿ ಏನೇ ಆದರೂ ವಿಜಯಪುರಕ್ಕೆ ಲಿಂಕ್‌ ಇರುತ್ತದೆ. ಇಲ್ಲಿ ಸದ್ದಿಲ್ಲದೆ ಆ ಕೆಲಸ ಮಾಡಲಾಗುತ್ತಿದೆ. ಇಲ್ಲಿನ ಜನರು ಎಚ್ಚೆತ್ತುಕೊಳ್ಳಬೇಕಿದೆ. ಬಹಳಷ್ಟು ಜನರು ನಮ್ಮ ಭೂಮಿ ಹೋಗುತ್ತದೆಂದು ಮಾತ್ರ ವಿಚಾರ ಮಾಡುತ್ತಿದ್ದಾರೆ. ಆದರೆ, ವಕ್ಫ್‌ ಎಂದರೆ ಏನು ಎಂಬುವುದು ಬಹಳ ಜನಕ್ಕೆ ಗೊತ್ತಿಲ್ಲ. ವಕ್ಫ್ ಎಂದರೆ ಭಾರತವನ್ನು ಇನ್ನೊಂದು ಚೂರು ಮಾಡುವ ಕೆಲಸ ಎಂದು ಅರ್ಥ. ಮುಸಲ್ಮಾನರು ಪಾಕಿಸ್ತಾನವನ್ನು ನಗುನಗುತ್ತ ತೆಗೆದುಕೊಂಡಿದ್ದೇವೆ. ಹಿಂದುಸ್ತಾನವನ್ನು ಹೋರಾಟ ಮಾಡಿಯಾದರೂ ತೆಗೆದುಕೊಳ್ಳೋಣ ಎನ್ನುತ್ತಾರೆ. ಮುಸಲ್ಮಾನರು ಈ ದೇಶಲ್ಲಿ ಉಳಿದುಕೊಂಡಿದ್ದು ದೇಶದ ಮೇಲಿನ ಪ್ರೀತಿಯಿಂದ ಅಲ್ಲ. ಮುಂದೆ ಭಾರತವನ್ನು ಪಾಕಿಸ್ತಾನ ಮಾಡಬೇಕು ಎಂದು ಉಳಿದುಕೊಂಡಿದ್ದಾರೆ ಎಂದರು.ಕರ್ನಾಟಕದಲ್ಲಿರುವ ಏಳುಕೋಟಿ ಜನರಲ್ಲಿ ಒಂದು ಕೋಟಿ ಮಾತ್ರ ಮುಸ್ಲಿಂ ಜನರಿದ್ದು, ಉಳಿದ ಆರು ಕೋಟಿ ಜನ ಹಿಂದೂಗಳು ಇದ್ದರೂ ಸಹ ಅರ್ಧದಷ್ಟು ಜನ ಕಾಂಗ್ರೆಸ್‌ಗೆ ಓಟು ಹಾಕಿದರು. ಆದರೆ, ಕಾಂಗ್ರೆಸನವರು ಹೇಳುತ್ತಾರೆ ಇದು ಮುಸ್ಲಿಂಮರು ಆರಿಸಿರುವ ಸರ್ಕಾರ ಎಂದು ಆಕ್ರೋಶ ಹೊರಹಾಕಿದರು.ಹೋರಾಟದಲ್ಲಿ ವಿಜಯಪುರ ಸಂಸದ ರಮೇಶ ಜಿಗಜಿಣಗಿ, ಬಿಜೆಪಿ ಮುಖಂಡರಾದ ಉಮೇಶ ಕಾರಜೋಳ, ರಾಮನಗೌಡ ಪಾಟೀಲ, ಸೋಮನಗೌಡ ಪಾಟೀಲ ಸಾಸನೂರ, ದಯಾಸಾಗರ ಪಾಟೀಲ, ಅಪ್ಪುಗೌಡ ಪಾಟೀಲ, ಕಾಸುಗೌಡ ಬಿರಾದಾರ, ಉಮೇಶ ಕೊಳಕೂರ, ಗೂಳಪ್ಪ ಶಟಗಾರ, ಸಂಜೀವ ಐಹೊಳೆ, ರಾಘವ ಅಣ್ಣಿಗೇರಿ, ಪ್ರಭುಗೌಡ ದೇಸಾಯಿ, ರಾಜು ಮಗಿಮಠ, ಶಿವರುದ್ರ ಬಾಗಲಕೋಟ, ಪರಶುರಾಮ ರಜಪುತ, ಗುರು ಗಚ್ಚಿನಮಠ, ರಾಹುಲ್ ಜಾಧವ, ಸಾವಿರಾರು ರೈತರು, ಹಲವು ಹಿಂದೂಪರ ಸಂಘ ಸಂಸ್ಥೆಗಳ ಮುಖಂಡರು ಭಾಗವಹಿಸಿದ್ದರು.ಮಳೆಯಲ್ಲೇ ಪ್ರತಿಭಟನೆ

ಬೆಳಗ್ಗೆ 11.30ಕ್ಕೆ ಸಿದ್ಧೇಶ್ವರ ದೇವಸ್ಥಾನದ ಎದುರು ಆರಂಭವಾದ ವಕ್ಫ್‌ ಕಾಯ್ದೆಯಲ್ಲಿ ಆಸ್ತಿ ಹೊಡೆಯುವ ಹುನ್ನಾರದ ವಿರುದ್ಧ ಸಾಕಷ್ಟು ನಾಯಕರು ಮಾತನಾಡಿ ಆಕ್ರೋಶ ಹೊರಹಾಕಿದರು. ಈ ವೇಳೆ ಮಳೆ ಸುರಿದರೂ ಲೆಕ್ಕಿಸದೇ ಸಾವಿರಾರು ಜನರು ಮಳೆಯಲ್ಲೇ ಕುಳಿತು ಹೋರಾಟದಲ್ಲಿ ಭಾಗಿಯಾಗಿದ್ದರು. ಹೋರಾಟದ ಬಳಿಕ ಎಡಿಸಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.ಹೋರಾಟದ ಸ್ಥಳಕ್ಕೆ ಬಂದ ಎಡಿಸಿ

ಸಿದ್ಧೇಶ್ವರ ದೇವಸ್ಥಾನದಿಂದ ಹೋರಾಟ ಶುರುಮಾಡಿ ಜಿಲ್ಲಾಧಿಕಾರಿ ಕಚೇರಿಯವರೆಗೂ ಪಾದಯಾತ್ರೆ ನಡೆಸಿ ಡಿಸಿ ಮೂಲಕ ರಾಜ್ಯಪಾಲರಿಗೆ ಮನವಿ ಕೊಡಲು ನಿರ್ಧರಿಸಲಾಗಿತ್ತು. ಆದರೆ, ಪ್ರತಿಭಟನೆಯಲ್ಲಿ ಸಾವಿರಾರು ಜನರು ಭಾಗಿಯಾಗಿದ್ದರಿಂದ ರಸ್ತೆಯುದ್ದಕ್ಕೂ ಸಾರ್ವಜನಿಕರಿಗೆ ಸಮಸ್ಯೆ ಆಗಬಾರದು ಎಂದು ಅಪರ್ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಅವರೇ ಸಿದ್ಧೇಶ್ವರ ದೇವಸ್ಥಾನದ ಎದುರಿಗೆ ನಡೆಸುತ್ತಿದ್ದ ಹೋರಾಟದ ಸ್ಥಳಕ್ಕೆ ಆಗಮಿಸಿ ನಾಯಕರಿಂದ ಮನವಿ ಸ್ವೀಕರಿಸಿದರು.

ಸಿಡಿ ಬಿಡುಗಡೆ ಮಾಡುತ್ತೇವೆಂದು ಕೆಲವು ಮುಖಂಡರು ಹಾಗೇ ಹೇಳಿ ನನಗೆ ಬ್ಲಾಕ್ ಮೇಲ್ ಮಾಡ್ತಿರಿ? ಈ ಹಿಂದೆಯೂ ಹೇಳಿದ್ದೆ, ಈಗಲೂ ಹೇಳುತ್ತೇನೆ ನೀವು ನಿಮ್ಮ ಅಪ್ಪನಿಗೆ ನೀವು ಹುಟ್ಟಿದ್ದರೇ ಬಿಡುಗಡೆ ಮಾಡಿ ನೊಡೋಣ.

-ಬಸನಗೌಡ ಪಾಟೀಲ ಯತ್ನಾಳ,

ನಗರ ಶಾಸಕರು.

ನಾನು ಹಾಗೂ ಶಾಸಕ ಯತ್ನಾಳ ಅವರು ರಾಜಕೀಯಕ್ಕಾಗಿ ಹಿಂದುತ್ವ ಮಾತಾಡೋದಿಲ್ಲ. ಹಿಂದುತ್ವಕ್ಕಾಗಿಯೇ ರಾಜಕಾರಣ ಮಾಡುತ್ತೇವೆ. ಸಂವಿಧಾನ ಉಳಿಸುವ ಹೋರಾಟಕ್ಕೆ ನಮಗೆ ಜಯವಾಗಲಿದೆ.

- ಸಿ.ಟಿ.ರವಿ, ವಿಧಾನ ಪರಿಷತ್ ಸದಸ್ಯರು.

ಇಂದು ನಾವು ಮಾಡುತ್ತಿರುವ ಈ ಹೋರಾಟ ವಿಜಯಪುರಲ್ಲಿನ ಜಮೀನು ಉಳಿವಿಗಾಗಿ ಮಾತ್ರವಲ್ಲ, ಹಿಂದುಸ್ತಾನ ಉಳಿವಿಗಾಗಿ ಇರುವ ಹೋರಾಟ ಇಲ್ಲಿಂದಲೇ ಪ್ರಾರಂಭವಾಗಿದೆ. ಹಿಂದೂ ದೇವಾಲಯಗಳಿಂದ ಬಂದ ಹಣದಲ್ಲಿ ಮುಸ್ಲಿಂರ ಅಭಿವೃದ್ಧಿ ಮಾಡುತ್ತಾರೆ. ವಿಧಾನಸೌಧ, ರಾಮ ಮಂದಿರ ವಕ್ಫ್‌ಗೆ ಸೇರುತ್ತೆ. ಒಂದಲ್ಲ ಒಂದು ನಾವು ಪಡೆಯುತ್ತೇವೆ ಎನ್ನುತ್ತಾರೆ‌. ಇಂದು ನಾವು ನಿಂತಿರುವ ಸಿದ್ಧೇಶ್ವರ ದೇವಸ್ಥಾನ ವಕ್ಫ್‌ ಎಂದು ಮಾಡಿದರೆ ಕಮಿಟಿ ಏನೂ ಮಾಡುವ ಹಾಗಿಲ್ಲ.

-ಚಕ್ರವರ್ತಿ ಸೂಲಿಬೆಲೆ,

ಚಿಂತಕರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆನಂದಪುರ : ಮರದ ರಂಬೆ ಮರ್ಮಾಂಗಕ್ಕೆ ತಗುಲಿ ವ್ಯಕ್ತಿ ಸಾವು
ಅಪಘಾತದಿಂದ ಕೆಲ್ಸ ಕಳ್ಕೊಂಡ ಮಹಿಳೆ ನೆರವಿಗೆ ಕೋರ್ಟ್‌