ಕನ್ನಡಪ್ರಭ ವಾರ್ತೆ ಕುಣಿಗಲ್ ಕಾಶ್ಮೀರದಲ್ಲಿ ಹಿಂದೂಗಳ ನರಮೇಧವನ್ನು ಖಂಡಿಸಿ ಕುಣಿಗಲ್ ಪಟ್ಟಣದಲ್ಲಿ 7ರ ಬುಧವಾರ ಬೃಹತ್ ಪ್ರತಿಭಟನೆ ನಡೆಸುವುದಾಗಿ ಹಲವಾರು ಹಿಂದೂ ಮುಖಂಡರು ಸರ್ವಾನುಮತದಿಂದ ತೀರ್ಮಾನಿಸಿದರು.
ಜೆಡಿಎಸ್ ಮುಖಂಡ ಬಿಎನ್ ಜಗದೀಶ್ ಮಾತನಾಡಿ, ನಮ್ಮಲ್ಲಿರುವ ಒಳ ಜಾತಿ ಪಂಗಡಗಳನ್ನು ಬಿಟ್ಟು ದೇಶದ ಉಳಿವಿಗಾಗಿ ಮತ್ತು ಭದ್ರತೆಗಾಗಿ ಎಲ್ಲರೂ ಒಟ್ಟಾಗಿ ಶಕ್ತಿ ಪ್ರದರ್ಶನ ಆಗಬೇಕಿದೆ. ಹಿಂದೂಗಳ ಒಳಜಗಳದಿಂದ ಇಂದು ದೇಶಕ್ಕೆ ಹಲವಾರು ನಷ್ಟ ಆಗುತ್ತಿದೆ. ಈ ಕುಟುಂಬಗಳಿಗೆ ಸಿಕ್ಕ ಉತ್ತರ ಕೇವಲ ಆ ಕುಟುಂಬಗಳಿಗೆ ಮಾತ್ರ ಅಲ್ಲ ಪ್ರತಿಯೊಬ್ಬ ಭಾರತೀಯನೂ ಜಾಗೃತನಾಗಬೇಕೆಂದರು.
ರೈತ ಸಂಘದ ಮುಖಂಡ ಆನಂದ ಪಟೇಲ್ ಹುಲಿಕಟ್ಟೆ ಮಾತನಾಡಿ ಹಲವಾರು ದುಷ್ಟ ಬುದ್ಧಿಯ ವ್ಯಕ್ತಿಗಳು ಎಲ್ಲಾ ಧರ್ಮದಲ್ಲಿ ಜಾತಿಯಲ್ಲಿ ಇರುತ್ತಾರೆ ಭಾರತ ದೇಶದ ಅನ್ನ ತಿಂದು ವಿರೋಧಿ ರಾಷ್ಟ್ರಗಳಿಗೆ ಸಹಕಾರ ಮಾಡುವ ಮನಸ್ಥಿತಿ ಇರುವಂತ ಹಲವಾರು ಕ್ರಿಮಿಗಳಿಂದ ಇಂತಹ ಕೃತ್ಯ ಸಾಧ್ಯವಾಗುತ್ತಿದೆ ಆದ್ದರಿಂದ ಪ್ರತಿಯೊಬ್ಬರೂ ಕೂಡ ಜಾಗೃತರಾಗಿ ದೇಶದ ರಕ್ಷಣೆಗೆ ಮತ್ತು ಉಗ್ರರ ಮಟ್ಟ ಹಾಕಲು ಶ್ರಮಿಸಬೇಕೆಂದರು.ಬಿಜೆಪಿ ತಾಲೂಕು ಅಧ್ಯಕ್ಷ ಕೊಡಗಿಹಳ್ಳಿ ದಿನೇಶ್ ಮಾತನಾಡಿ, ನಾವು ಸಂಘಟನೆ ಆಗಬೇಕಾದ ಅನಿವಾರ್ಯತೆ ಬಂದಿದೆ ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ನಮ್ಮ ಮಕ್ಕಳು ಹಿಂದೂಗಳು ಎಂದು ಬದುಕುವುದು ಕಷ್ಟ ವಾಗುತ್ತದೆ ಅದಕ್ಕಾಗಿ ಎಲ್ಲರೂ ಕೂಡ ಒಟ್ಟಾಗಿ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಿ ಎಂದು ಕರೆ ನೀಡಿದರು.
ಕುಣಿಗಲ್ ಪಟ್ಟಣದ ಹಲವಾರು ಕೋಮಿನ ಮುಖಂಡರು ಮತ್ತು ವ್ಯಾಪಾರಸ್ಥರು ಸೇರಿದಂತೆ ವಿವಿಧ ಪಕ್ಷದ ಮುಖಂಡರುಗಳು ಮೇ 7ರ ಬುಧವಾರ ಕುಣಿಗಲ್ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ಮಾಡಿ ಎಚ್ಚರಿಕೆ ನೀಡಬೇಕೆಂದು ತೀರ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಕಪನಿ ಪಾಳ್ಯ ರಮೇಶ್, ಮಾಜಿ ಅಧ್ಯಕ್ಷ ದಿನೇಶ್, ಪುರಸಭಾ ಮಾಜಿ ಅಧ್ಯಕ್ಷ ಹರೀಶ್, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಹರೀಶ್ ನಾಯಕ್, ಪುರಸಭಾ ಸ್ಥಾಯಿ ಸಮಿತಿಯ ಮಾಜಿ ಅಧ್ಯಕ್ಷ ಸಂತೋಷ್, ದಲಿತ ಮುಖಂಡ ವರದರಾಜು, ಸೇರಿದಂತೆ ಹಲವಾರು ವಿವಿಧ ಸಂಘಟನೆ ಹಾಗೂ ಸಮಾಜದ ಮುಖಂಡರು ಭಾಗವಹಿಸಿದ್ದರು.