ನಾಳೆ ಜಿಲ್ಲಾ ಮುಸ್ಲಿಂ ಒಕ್ಕೂಟದಿಂದ ಬೃಹತ್ ಪ್ರತಿರೋಧ ಸಮಾವೇಶ

KannadaprabhaNewsNetwork | Published : Jun 27, 2025 12:50 AM

ಚಾಮರಾಜನಗರದಲ್ಲಿ ಜಿಲ್ಲಾ ಮುಸ್ಲಿಂ ಒಕ್ಕೂಟದ ವತಿಯಿಂದ ಸುದ್ದಿಗೋಷ್ಠಿ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ವಕ್ಫ್‌ ತಿದ್ದುಪಡಿ ಕಾಯ್ದೆ-2025 ವಿರೋಧಿಸಿ ಜಿಲ್ಲಾ ಮುಸ್ಲಿಂ ಒಕ್ಕೂಟದಿಂದ ಜೂ.28ರಂದು ನಗರದಲ್ಲಿ ಬೃಹತ್‌ ಪ್ರತಿರೋಧ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಮುಸ್ಲಿಂ ಒಕ್ಕೂಟದ ಮುಖಂಡರಾದ ಅಬ್ರಾರ್ ಅಹಮದ್ ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ವಕ್ಫ್‌ ತಿದ್ದುಪಡಿ ಕಾಯ್ದೆ-2025 ಅನ್ನು ರಚಿಸಿರುವುದು ಸಂವಿಧಾನ ವಿರೋಧಿಯಾಗಿದ್ದು, ಸಂವಿಧಾನದ ಕಲಂ 14, 25, 26 ಮತ್ತು 29 ಗೆ ವಿರುದ್ಧವಾಗಿದೆ. ಈ ಕರಾಳ ವಕ್ಫ್‌ ತಿದ್ದುಪಡಿ ಕಾಯ್ದೆ ಸಂವಿಧಾನ ನೀಡಿರುವ ಮೂಲಭೂತ ಹಕ್ಕುಗಳನ್ನು ಕಸಿದುಕೊಂಡಿದೆ ಎಂದು ಆರೋಪಿಸಿದರು.ಕಾನೂನು ರೂಪಿಸುವ ಮುಂಚೆ ಇಡೀ ರಾಷ್ಟ್ರಾದ್ಯತ ವಿವಿಧ ಮುಸ್ಲಿಂ ಸಂಘಟನೆಗಳ ಪದಾಧಿಕಾರಿಗಳು, ರಾಜಕಾರಣಿಗಳು, ಧಾರ್ಮಿಕ ಮುಖಂಡರು, ಸಾಮಾಜಿಕ ಚಿಂತಕರು ಹಾಗೂ ಇನ್ನಿತರ ಪರಿಣಿತರು ವಿರೋಧ ವ್ಯಕ್ತಪಡಿಸಿದರು. ಆ ಸಂದರ್ಭದಲ್ಲಿ ಖುದ್ದು ಕೇಂದ್ರ ಸರ್ಕಾರ ಜಂಟಿ ಸದನ ಸಮಿತಿ ರಚಿಸಿ ಈ ಕಾನೂನಿಗೆ ವಿರೋಧವಿದ್ದರೆ ಲಿಖಿತವಾಗಿ ಆಕ್ಷೇಪಣೆ ಸಲ್ಲಿಸಬಹುದು ಎಂದು ಅವಕಾಶ ನೀಡಿದ ಸಂದರ್ಭದಲ್ಲಿ ರಾಷ್ಟ್ರದ ಮೂಲೆ-ಮೂಲೆಗಳಿಂದ ಮುಸ್ಲಿಂ ಸಮುದಾಯದವರು ಲಿಖಿತ ಆಕ್ಷೇಪಣೆಗಳನ್ನು ಸಲ್ಲಿಸಿರುತ್ತಾರೆ ಮತ್ತು ಬೀದಿ ಹೋರಾಟಗಳನ್ನು ಸಹ ಮಾಡಿದ್ದಾರೆ ಎಂದರು.

ಮುಸ್ಲಿಂ ಸಮುದಾಯದ ವಿರೋಧದ ನಡುವೆಯು ಕೇಂದ್ರ ಸರ್ಕಾರ ಬಲವಂತವಾಗಿ, ಹಠತನದೊಂದಿಗೆ ಈ ಕರಾಳ ಕಾನೂನನ್ನು ಅನುಷ್ಠಾನಕ್ಕೆ ತರಲು ವಿವಿಧ ಮಾದರಿಯಲ್ಲಿ ಕುತಂತ್ರಗಳನ್ನು ರೂಪಿಸುತ್ತಿದೆ ಎಂದು ದೂರಿದರು. ಆದರಿಂದ ಮುಸ್ಲಿಂ ಸಮುದಾಯ ಯಾವುದೇ ಕಾರಣಕ್ಕೂ ಈ ಕರಾಳ ಕಾನೂನನ್ನು ಒಪ್ಪುವುದಿಲ್ಲ. ಈಗಾಗಲೇ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ವತಿಯಿಂದ ನೀಡಿರುವ ಕರೆಯ ಮೇರೆಗೆ ಜಿಲ್ಲಾ ಮುಸ್ಲಿಂ ಒಕ್ಕೂಟದ ವತಿಯಿಂದ ವಿವಿಧ ಕಾರ್ಯಕ್ರಮಗಳು ಮತ್ತು ಹೋರಾಟಗಳನ್ನು ಮಾಡಲಾಗಿದೆ ಎಂದರು.

ಹೋರಾಟದ ಮುಂದುವರಿದ ಭಾಗವಾಗಿ ಜೂ.28ರಂದು ಮದ್ಯಾಹ್ನ 2.30 ಕ್ಕೆ ಚಾಮರಾಜನಗರ ಜಿಲ್ಲಾ ಕೇಂದ್ರದಲ್ಲಿರುವ ಕ್ರೀಡಾಂಗಣದ ಪಕ್ಕದಲ್ಲಿರುವ ಈದ್ದಾ ಮೈದಾನದಲ್ಲಿ ಬೃಹತ್ ಪ್ರತಿರೋಧ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದರು. ಸಮಸ್ತ ಪ್ರಜ್ಞಾವಂತ ನಾಗರಿಕರು, ಹೋರಾಟಗಾರರು, ವಿವಿಧ ಪ್ರಗತಿಪರ ಸಂಘಸಂಸ್ಥೆಗಳ ಪದಾಧಿಕಾರಿಗಳು ಈ ಒಂದು ಸಮಾವೇಷದಲ್ಲಿ ಭಾಗವಹಿಸಿ, ಫ್ಯಾಸಿಸ್ಟ್ ಸರ್ಕಾರದ ವಿರುದ್ಧ ಪ್ರತಿರೋಧವನ್ನು ವ್ಯಕ್ತಪಡಿಸಬೇಕೆಂದು ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಸೈಯದ್ ರಫೀ, ಮೊಹಮ್ಮದ್ ಅಸ್ಗರ್, ನಯೀಮ್‌ ಉಲ್ಲ ಹಕ್‌, ಅಬ್ದುಲ್‌ ಖಾದರ್‌, ಸೈಯಾದ್‌ ಇಮ್ರಾನ್‌ ಇದ್ದರು.