ಕನ್ನಡಪ್ರಭ ವಾರ್ತೆ ಕಂಪ್ಲಿ
ತಹಸೀಲ್ದಾರ್ ಜೂಗಲ ಮಂಜುನಾಯಕ ಮಾತನಾಡಿ, ಬುದ್ಧ ಜಯಂತಿ ಬರೀ ಆಚರಣೆಗೆ ಸೀಮಿತಗೊಳ್ಳಬಾರದು, ಬದಲಿಗೆ ಪ್ರತಿಯೊಬ್ಬರೂ ಅವರ ಜೀವನ ಚರಿತ್ರೆ, ಅವರು ನಡೆದು ಬಂದ ಹಾದಿಯ ಕುರಿತು ತಿಳಿದುಕೊಳ್ಳುವ ಮೂಲಕ ತತ್ವ-ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಕರ್ನಾಟಕ ಬೌದ್ಧ ಸಮಾಜದ ಜಿಲ್ಲಾಧ್ಯಕ್ಷ ಸುಗ್ಗೇನಹಳ್ಳಿ ರಮೇಶ ಮಾತನಾಡಿ, ಜಗತ್ತಿನ 28 ದೇಶಗಳು ಬುದ್ಧ ತತ್ವಗಳನ್ನು ಅಳವಡಿಸಿಕೊಂಡಿದ್ದರಿಂದ ಅಭಿವೃದ್ಧಿ ಹೊಂದಿದ ಶ್ರೀಮಂತ ರಾಷ್ಟ್ರಗಳಾಗಲು ಸಾಧ್ಯವಾಗಿದೆ. ಬುದ್ಧನನ್ನು ಮರೆತ ಭಾರತ ಬಡತನಕ್ಕೀಡಾಗಿದೆ. ಭಾರತದಲ್ಲಿ ಬುದ್ಧನನ್ನು ತಪ್ಪಾಗಿ ಬಿಂಬಿಸಿ ಅವನ ತತ್ವಗಳನ್ನು ತಿರುಚಿ ಬುದ್ಧನ ನಾಶಕ್ಕಾಗಿ ಷಡ್ಯಂತ್ರ ನಡೆಯುತ್ತಲೇ ಇವೆ. ಬುದ್ಧನ ಬೋಧನೆ ಧರ್ಮವಲ್ಲ, ಅದು ನಮ್ಮ ಜೀವನದ ಕ್ರಮ. ಬುದ್ಧನ ತತ್ವಗಳನ್ನು ಎಲ್ಲಾ ಧರ್ಮಿಯರು ಅನುಸರಿಸಬೇಕಿದೆ ಎಂದರು.ಇದೇ ವೇಳೆ ವರ್ಗಗೊಂಡ ತಹಸೀಲ್ದಾರ್ ಎಸ್.ಶಿವರಾಜ, ದಲಿತ ಮುಖಂಡ ಕೆ.ಲಕ್ಷ್ಮಣ ಮಾತನಾಡಿದರು.
ಭಾವಚಿತ್ರ ಮೆರವಣಿಗೆ:
ಬುದ್ಧ ಪೂರ್ಣಿಮೆಯ ಅಂಗವಾಗಿ ಕರ್ನಾಟಕ ಬೌದ್ಧ ಸಮಾಜದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಗೌತಮ ಬುದ್ಧರ ಭಾವಚಿತ್ರ ಮೆರವಣಿಗೆ ಇಲ್ಲಿನ ಸಂತೆ ಮಾರುಕಟ್ಟೆ ಬಳಿಯ ಬುದ್ಧ ವೃತ್ತದಿಂದ ಆರಂಭಗೊಂಡು ರಾಜಕುಮಾರ ರಸ್ತೆ, ಡಾ. ಬಿ.ಆರ್. ಅಂಬೇಡ್ಕರ್ ವೃತ್ತ, ಪುನೀತ್ ರಾಜಕುಮಾರ ರಸ್ತೆ ಮಾರ್ಗವಾಗಿ ಸಂಚರಿಸಿ ತಹಸೀಲ್ದಾರ್ ಕಚೇರಿಯ ಬಳಿ ಸಮಾವೇಶಗೊಂಡಿತು. ಈ ಸಂದರ್ಭ ಬೌದ್ಧ ಸಮಾಜದ ಪದಾಧಿಕಾರಿಗಳಾದ ಚನ್ನಬಸಪ್ಪ, ಪಿ.ಸಿ. ಅಂಜಿನಪ್ಪ, ಡಿ.ಮುನಿಸ್ವಾಮಿ, ಟಿ.ಶಿವಪ್ಪ, ಸಿ.ರುದ್ರಪ್ಪ, ಸಿ.ವೆಂಕಟೇಶ, ಕೆ.ಲಕ್ಷ್ಮಣ, ರವಿ ಮಣ್ಣೂರು, ಪಾಮಯ್ಯ ಶರಣರು, ಉಮೇಶ್, ಟಿ.ಎಚ್.ಎಂ. ರಾಜಕುಮಾರ್ ಕಂದಾಯ ಸೇರಿ ನಾನಾ ಇಲಾಖೆ ಸಿಬ್ಬಂದಿಗಳಿದ್ದರು.